ಕೋವಿಡ್ ನಿಯಮ ಪಾಲನೆಗೆ ತಾಲೂಕು ಆಡಳಿತ ಸೂಚನೆ

| Published : Jan 07 2024, 01:30 AM IST

ಸಾರಾಂಶ

ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಬಂದೋಬಸ್ತ ನಿರ್ವಹಣೆಗಾಗಿ ಅಗತ್ಯವಿರುವ ಕಡೆ ಬ್ಯಾರಿಕೇಡ್‌ಗಳ ವ್ಯವಸ್ಥೆ, ವಾಹನ ಸಂಚಾರ ಹಾಗೂ ನಿಲುಗಡೆ, ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ರೋಗ ಬಾರದಂತೆ ಔಷದೋಪಚಾರ, ಚುಚ್ಚುಮದ್ದುಗಳನ್ನು ಹಾಕಿಸುವ ಕ್ರಮ ಜರುಗಿಸುವಂತೆ ತಿಳಿಸಿದ ಅವರು ಪ್ರಾಣಿಹಿಂಸೆ ಆಗದಂತೆ ನೋಡಿಕೊಳ್ಳಬೇಕು. ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡತಾಲೂಕಿನ ಐನಾಪುರ ಪಟ್ಟಣದಲ್ಲಿ ಮಕರ ಸಂಕ್ರಮಣ ದಿನದಿಂದ ಸತತ ಐದು ದಿನಗಳವರೆಗೆ ಜರುಗಲಿರುವ ಜಾತ್ರಾ ಮಹೋತ್ಸವವನ್ನು ಕೋವಿಡ್-19 ಮಾರ್ಗಸೂಚಿಯಂತೆ ಜಾತ್ರಾ ಮಹೋತ್ಸವಕ್ಕೆ ಎಲ್ಲ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ತಹಸೀಲ್ದಾರ ರಾಜೇಶ ಬುರ್ಲಿ ಹೇಳಿದರು.ಶನಿವಾರ ಐನಾಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಸಿದ್ದತೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಬಂದೋಬಸ್ತ ನಿರ್ವಹಣೆಗಾಗಿ ಅಗತ್ಯವಿರುವ ಕಡೆ ಬ್ಯಾರಿಕೇಡ್‌ಗಳ ವ್ಯವಸ್ಥೆ, ವಾಹನ ಸಂಚಾರ ಹಾಗೂ ನಿಲುಗಡೆ, ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ರೋಗ ಬಾರದಂತೆ ಔಷದೋಪಚಾರ, ಚುಚ್ಚುಮದ್ದುಗಳನ್ನು ಹಾಕಿಸುವ ಕ್ರಮ ಜರುಗಿಸುವಂತೆ ತಿಳಿಸಿದ ಅವರು ಪ್ರಾಣಿಹಿಂಸೆ ಆಗದಂತೆ ನೋಡಿಕೊಳ್ಳಬೇಕು. ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತೆ ಹೇಳಿದರು.

ಪಿಎಸ್‌ಐ ಎಂ.ಬಿ. ಬಿರಾದಾರ ಮಾತನಾಡಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಗ್ರಾಮದಲ್ಲಿ ಪಟ್ಟಣ ಪಂಚಾಯತಿಯವರು ಡಂಗೂರ ಸಾರಬೇಕು ಎಂದು ತಿಳಿಸಿದರು. ಜಾತ್ರಾ ಸ್ಥಳದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಈಚೆಗೆ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕ್ರಮಗಳಿಗೆ ಮುಂದಾಗಬೇಕು ಎಂದರು. ಜಾತ್ರಾ ಪ್ರದೇಶದಲ್ಲಿ ನಿರಂತರ ದೀಪಗಳ ವ್ಯವಸ್ಥೆ, ಕಳ್ಳರ ಹಾವಳಿ ಆಗದಂತೆ ಕಮೀಟಿಯವರು ಅಲ್ಲಲ್ಲಿ ಸಿಸಿ ಟಿವಿ ಅಳವಡಿಸುವಂತೆ ಹೇಳಿದರು.ಜಾತ್ರಾ ಕಮೀಟಿ ಉಪಾಧ್ಯಕ್ಷ ರಾಜುಗೌಡಾಟೀಲ ಮಾತನಾಡಿ, ಸರ್ಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸುಸಜ್ಜಿತವಾಗಿ ಜಾತ್ರೆ ಯಶಸ್ವಿಗೊಳಿಸುತ್ತೇವೆ. ಸಾರ್ವಜನಿಕರ ಮತ್ತು ಅಧಿಕಾರಿಗಳ ಸಹಕಾರ ಅಗತ್ಯ ಎಂದರು.

ಈ ವೇಳೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಪುಠಾಣಿ, ಡಾ.ಅಭಿನಂದನ ಪಾಟೀಲ, ಜಾತ್ರಾ ಕಮೀಟಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ, ಪಟ್ಟಣ ಪಂಚಾಯತ್ ಸದಸ್ಯ ಅರುಣ ಗಾಣಿಗೇರ, ಸಂಜಯ ಬಿರಡಿ. ಮುಖಂಡ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಬಾಹುಬಲಿ ಕುಸನಾಳೆ, ದಾದಾ ಜಂತೆನ್ನವರ, ಹರ್ಷವರ್ದನ ಪಾಟೀಲ, ಅಮಗೌಡ ವಡೆಯರ, ಸುರೇಶ ಅಡಿಸೇರಿ, ಸೋಮಲಿಂಗ ವಡಿಯರ ಸೇರಿ ಅನೇಕರು ಇದ್ದರು.