ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಶ್ಚಿಮ ಘಟ್ಟಗಳ ಮೂಲಕ ಸರ್ವ ಕಾಲಕ್ಕೂ ಜೀವನದಿ ಕಾವೇರಿ ಮೈದುಂಬಿ ಹರಿಯುವಂತೆ ಮಾಡುವುದು ನನ್ನ ಮನದಾಸೆ ಎಂದು ಅರಣ್ಯ ಇಲಾಖೆ ನಿವೃತ್ತ ಅಪರ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಹೇಳಿದರು. ತಾಲೂಕಿನ ಮಡಹಳ್ಳಿ ಗ್ರಾಮದ ನಾಗೇಂದ್ರ ಅಗ್ರೋ ಫಾರಂನಲ್ಲಿ ಅರಣ್ಯ ಇಲಾಖೆ ಮತ್ತು ನಿವೃತ್ತ ಹಿರಿಯ ಅರಣ್ಯಾಧಿಕಾರಿಗಳ ಸಹಯೋಗದಲ್ಲಿ ನಡೆದ ರಾಜ್ಯ ಹಾಗೂ ನೆರೆ ರಾಜ್ಯಗಳಿಗೆ ಸಸಿಗಳನ್ನು ಮಾರಾಟ ಮಾಡುವ ನರ್ಸರಿ ಮಾಲೀಕರನ್ನು ಸನ್ಮಾನಿಸಿ ಸಂಕ್ರಾಂತಿ ಸೊಗಡು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವು ಮುಖ್ಯಮಂತ್ರಿ, ಅರಣ್ಯ ಮತ್ತು ಇತರೆ ಇಲಾಖೆ ಸಚಿವರ ಬಾಂಧವ್ಯದಿಂದ ಅರಣ್ಯ ಸಂರಕ್ಷಣೆಗೆ ನಾನು ಸಾಕಷ್ಟು ಅನುಕೂಲ ಮಾಡಿರುವ ತೃಪ್ತಿ ಇದೆ. ಹೆಚ್ಚೆಚ್ಚು ಗಿಡಗಳನ್ನು ಬೆಳೆಸಬೇಕೆಂದು ನಿವೃತ್ತಿಯಾದ ನಂತರ ಖರೀದಿಸಿದ ಜಮೀನಿನಲ್ಲೇ ಅರಣ್ಯ ಕೃಷಿ ಮಾಡುತ್ತಿದ್ದೇನೆ ಎಂದರು. ಪ್ರತಿ ಹಂತದಲ್ಲೂ ಮಾಧ್ಯಮದವರು ನನಗೆ ಸಹಕಾರ ನೀಡುತ್ತ ಬಂದಿದ್ದಾರೆ ಎಂದು ಕರ್ತವ್ಯದಲ್ಲಿದ್ದ ದಿನಗಳ ಬಗ್ಗೆ ಮೆಲಕು ಹಾಕಿದರಲ್ಲದೆ ಪಶ್ಚಿಮ ಘಟ್ಟಗಳ ರಕ್ಷಣೆ ವಿಷಯದಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಿದೆ ಎಂದರು.ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆ ಜಾರಿ ಮಾಡಿದ ಸಿ.ಎಚ್.ವಿಜಯಶಂಕರ್, ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆ ಇತರೆ ಯೋಜನೆಗಳ ಮೂಲಕ ಕೋಟಿ ಸಂಪಾದನೆ ಮಾಡಿದ ರೈತರು, ಅರಣ್ಯ ಸಂಶೋಧನೆ ಮಾಡಿದವರನ್ನು ಗೌರವಿಸುವ ಗುರಿ ಹೊಂದಿದ್ದೇನೆ ಎಂದರು. ನಿವೃತ್ತಿ ಅಂಚಿನಲ್ಲಿ ಮತ್ತು ನಂತರದಲ್ಲಿ ನಾನು ಸಲ್ಲಿಸಿದ ಕೆಲವು ಪ್ರಸ್ತಾವನೆಗಳಿಗೆ ಸರ್ಕಾರ ಅನುಮೋದನೆ ನೀಡದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಡಹಳ್ಳಿ ಗ್ರಾಮದ ನರ್ಸರಿ ಮಾಲೀಕರು ನಿಮಗೆ ಅರಿವಿಲ್ಲದೇ ಪ್ರತಿ ವರ್ಷ ಲಕ್ಷಗಟ್ಟಲೇ ಗಿಡಗಳನ್ನು ಬೆಳೆಸಿ ರಾಜ್ಯವಲ್ಲದೇ ದೇಶದ ನಾನಾ ಭಾಗಗಳಿಗೆ ಪೂರೈಕೆ ಮಾಡುವ ಮಹತ್ವದ ಕೊಡುಗೆ ನೀಡುತ್ತಿರುವ ವಿಷಯ ತಿಳಿದು ಇದಕ್ಕಾಗಿ ಬೆನ್ನು ತಟ್ಟುವ ಸಲುವಾಗಿ ನಾನಿಲ್ಲಿ ಬಂದಿದ್ದೇನೆ. ಪ್ರತಿಯೊಬ್ಬರೂ ವಾರ್ಷಿಕ ಹತ್ತು ಲಕ್ಷಕ್ಕೂ ಮೀರಿ ಗಿಡಗಳನ್ನು ಪೂರೈಸುವಂತರಾಗಿ, ಯಾವುದೇ ಕಾರಣಕ್ಕೂ ಕಳಪೆ ಗಿಡಗಳನ್ನು ಬೆಳೆಸಿ ಮಾರಾಟ ಮಾಡಬೇಡಿ ಎಂದು ಸಲಹೆ ನೀಡಿದರು.
ಬಂಡೀಪುರ ಹುಲಿ ಯೋಜನೆ ನಿವೃತ್ತ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, ಹೊಗೆಸೊಪ್ಪಿನ ಬೆಳೆಯನ್ನೇ ನಂಬಿಕೊಂಡಿದ್ದ ಹುಣಸೂರು ಭಾಗದಲ್ಲಿ ಅರಣ್ಯ ಕೃಷಿ ಉತ್ತಮ ಪ್ರಗತಿ ಕಂಡಿದೆ.ಆದ್ದರಿಂದ ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆ ಸದುಪಯೋಗ ಮತ್ತು ನರೇಗಾ ಯೋಜನೆ ಮೂಲಕ ಅರಣ್ಯ ಕೃಷಿಯಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು. ಮಡಹಳ್ಳಿ ನರ್ಸರಿಗಳಲ್ಲಿ ಗುಣಮಟ್ಟದ ಗಿಡ ಬೆಳೆಸಲು ಸಹಕಾರಿ ನೀಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು. ದೇಶದಲ್ಲಿ ಪ್ರಸ್ತುತ ೧೪೦ ಕೋಟಿ ಜನಸಂಖ್ಯೆ ಇದೆ. ಒಬ್ಬರಿಗೆ ನೂರು ಮರ ಇರಬೇಕೆಂಬ ಆಶಯ ಇರುವ ಕಾರಣ ಸರ್ವ ಕಾಲಕ್ಕೂ ನರ್ಸರಿಗೆ ಬೇಡಿಕೆ ಇರುತ್ತದೆ. ಅಲ್ಲದೇ ಪ್ರಕೃತಿಗೆ ನೀವು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು. ನರ್ಸರಿ ಮಾಲೀಕರು ಲಭ್ಯ ಗಿಡಗಳ ಬಗ್ಗೆ ಪ್ರಚಾರ ಮಾಡಿ ಎಂದು ಸಲಹೆ ನೀಡಿದರು. ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ನರ್ಸರಿ ಮಾಲೀಕರನ್ನು ಅರಣ್ಯ ಇಲಾಖೆ ಅಪರ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಹಾಗೂ ನಿವೃತ್ತ ಐಎಫ್ ಎಸ್ ಅಧಿಕಾರಿ ಟಿ.ಬಾಲಚಂದ್ರ ಸನ್ಮಾನಿಸಿ ಅಭಿನಂದಿಸಿದರು.ಸಮಾರಂಭದಲ್ಲಿ ಬಂಡೀಪುರ ಹುಲಿ ಯೋಜನೆಯ ಗುಂಡ್ಲುಪೇಟೆ ಉಪವಿಭಾಗ ಮತ್ತು ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ, ಎನ್.ಪಿ.ನವೀನಕುಮಾರ್, ಪರಿಸರವಾದಿ ಆರ್.ರಘುರಾಂ, ಗುಂಡ್ಲುಪೇಟೆ ಬಫರ್ ಜೋನ್ ಪ್ರಭಾರ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಗ್ರಾಮದ ಮುಖಂಡ ಪರ್ವತಪ್ಪ (ಬಸಪ್ಪ), ನರ್ಸರಿ ಮಾಲೀಕರು ಮತ್ತು ಗ್ರಾಮಸ್ಥರು ಹಾಜರಿದ್ದರು.