ಸಾರಾಂಶ
- ಜಿಲ್ಲೆಯ ವಿವಿಧೆಡೆ 27 ಚೆಕ್ ಪೋಸ್ಟ್ ತೆರೆಯಲಾಗಿದೆ । ಜಂಟಿ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇದೇ ಡಿ. 24 ರಿಂದ 26 ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ ನಿರ್ದೇಶನದಂತೆ ಹಿಂದಿನ ಬಾರಿಯಂತೆ ಈ ವರ್ಷವೂ ಅವಕಾಶ ಕಲ್ಪಿಸಲಾಗುವುದೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲಭೂತ ಸೌಕರ್ಯ ಕಲ್ಪಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ದೃಷ್ಠಿಯಿಂದ ಈ ಮೂರು ಆಯಾಮಗಳ ಆಧಾರದಲ್ಲಿ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.ದತ್ತಪೀಠ ಮುಜರಾಯಿ ಸಂಸ್ಥೆ ಆಗಿರುವುದರಿಂದ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಮುಜರಾಯಿ ಇಲಾಖೆ ನಿರ್ದೇಶನದಂತೆ ದತ್ತಜಯಂತಿಗೆ ಅನುಮತಿ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ಧರ್ಮಗಳ ಮುಖಂಡರು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾಡಳಿತ ಚರ್ಚೆ ನಡೆಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಶಾಂತಿ ಹಾಗೂ ವೈಭವಯುತವಾಗಿ ದತ್ತಜಯಂತಿ ಆಚರಣೆಗೆ ಸಹಕಾರ ನೀಡಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದರು.
ಡಿ.24 ರಿಂದ ಆರಂಭವಾಗುವ ಅನುಸೂಯ ಜಯಂತಿ ಸಂಕೀರ್ತನಾ ಯಾತ್ರೆಗಳು ಹಾಗೂ ಈ 3 ದಿನಗಳ ಕಾಲ ಪೀಠಕ್ಕೆ ಬರುವ ಭಕ್ತರಿಗೆ ಪಾದುಕೆಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮುಜರಾಯಿ ಇಲಾಖೆ ನಿರ್ದೇಶನದಂತೆ ಹಿಂದಿನ 2022 ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮದಂತೆ ಕೊನೆ ದಿನ ಗುಹೆಯ ಮುಂಭಾಗದಲ್ಲಿ ಹೋಮ, ಹವನ ನಡೆಸಲು ಅವಕಾಶ ಕಲ್ಪಿಸಲಾಗುವುದೆಂದು ವಿವರಿಸಿದರು.ದತ್ತ ಜಯಂತಿ ಸಂದರ್ಭದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹಾಗೂ ಕಾನೂನು ಪಾಲನೆ ದೃಷ್ಠಿಯಿಂದ ಮತ್ತು ಕ್ರಿಸ್ಮಸ್ ಪ್ರಯುಕ್ತ ರಜಾ ದಿನಗಳು ಹೆಚ್ಚು ಇರುವುದರಿಂದ ಜನಸಂದಣಿ ತಡೆಯುವ ಉದ್ದೇಶದಿಂದ ಒಂದು ವಾರಗಳ ಕಾಲ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಕಟ್ಟುನಿಟ್ಟಿನ ಕ್ರಮ:
ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ಆಚರಿಸಲು ಅಗತ್ಯವಿರುವ ಎಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಡಿ.17 ರಿಂದ 27 ರವರೆಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಯವರು ಸೇರಿದಂತೆ ಯಾರೇ ಆದರೂ ಕಾನೂನು ಕೈಗೆತ್ತಿ ಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಮ್ ಅಮಟೆ ತಿಳಿಸಿದರು.ಜಿಲ್ಲೆಯ ಗಡಿಭಾಗ ಸೇರಿದಂತೆ ಅಗತ್ಯವಿರುವ 27 ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ನಗರದಿಂದ ದತ್ತಪೀಠ ದವರೆಗೂ ಬೃಹತ್ ಪ್ರಮಾಣದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಿಂದಿನ ವರ್ಷಗಳಿ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿ ನಿಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಡಿ.17 ರಿಂದ ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಸಂಕೀರ್ತನೆ ಯಾತ್ರೆಗಳು ನಡೆಯಲಿವೆ. ನಗರದಲ್ಲಿ 24 ರಂದು ಸಂಕೀರ್ತನಾ ಯಾತ್ರೆ ಹಾಗೂ ಡಿ.25 ರಂದು ಶೋಭಾಯಾತ್ರೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಅಗತ್ಯ ಇರುವಷ್ಟು ಬಂದೋಬಸ್ತ್ ಮಾಡಿಕೊಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬ್ಯಾನರ್, ಬಂಟಿಂಗ್ಸ್ ಹಾಕಲು ಕಡ್ಡಾಯವಾಗಿ ಆಯಾ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವ ಜೊತೆಗೆ ಪೊಲೀಸ್ ಇಲಾಖೆ ಸಮಕ್ಷಮದಲ್ಲಿ ಅನುಮತಿ ಪಡೆಯಲು ಸಂಘಟಕರಿಗೆ ಸೂಚಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಉಪಸ್ಥಿತರಿದ್ದರು. 15 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಹಾಗೂ ಎಸ್ಪಿ ಡಾ. ವಿಕ್ರಂ ಅಮಟೆ ಅವರು ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.