ಇತ್ತೀಚಿನ ದಿನಗಳಲ್ಲಿ ಫಿಸಿಯೋಥೆರಪಿ ಕ್ಷೇತ್ರದಲ್ಲಿ ಭಾರತ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲಿ ವಿಫುಲ ಅವಕಾಶಗಳಿದ್ದು, ನಿರಂತರ ಸಂಶೋಧನೆಯಿಂದ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ.

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಫಿಸಿಯೋಥೆರಪಿ ಕ್ಷೇತ್ರದಲ್ಲಿ ಭಾರತ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲಿ ವಿಫುಲ ಅವಕಾಶಗಳಿದ್ದು, ನಿರಂತರ ಸಂಶೋಧನೆಯಿಂದ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ.ಸೌತ್‌ ಕೆನರಾ ಫಿಸಿಯೋಥೆರಪಿ ಟೀಚರ್ಸ್‌ ಎಸೋಸಿಯೇಶನ್‌ ವತಿಯಿಂದ ನಗರದ ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್‌- 2026’ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

25-30 ವರ್ಷಗಳ ಹಿಂದೆ ಫಿಸಿಯೋಥೆರಪಿ ಶಿಕ್ಷಣ ಪಡೆಯಲು ಹೆಚ್ಚಿನವರು ಮುಂದಾಗುತ್ತಿರಲಿಲ್ಲ. ಈಗ ಇದೇ ಕೋರ್ಸ್‌ಗೆ ಜಗತ್ತಿನಾದ್ಯಂತ ಅತಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ನಿರಂತರ ಅಪ್‌ಡೇಟ್‌ ಆಗುವುದರೊಂದಿಗೆ ಸಂಶೋಧನೆಯ ಮನಸ್ಥಿತಿ ರೂಢಿಸಿಕೊಂಡರೆ ಯಶಸ್ವಿ ವೃತ್ತಿಪರರಾಗುವುದರಲ್ಲಿ ಸಂದೇಹವಿಲ್ಲ ಎಂದು ಕರೆ ನೀಡಿದರು.ರಾಜ್ಯದಲ್ಲಿ ಹಿಂದೆ ಸರ್ಕಾರಿ ಫಿಸಿಯೋಥೆರಪಿ ಕಾಲೇಜು ಇರಲಿಲ್ಲ. ತಾನು ಆರೋಗ್ಯ ಸಚಿವನಾಗಿದ್ದಾಗ ಮೊದಲ ಬಾರಿ ಸರ್ಕಾರಿ ಫಿಸಿಯೋಥೆರಪಿ ಕಾಲೇಜು ಆರಂಭಿಸಿದ್ದೆ. ಆ ಕಾಲೇಜು ಈಗ ರಾಜ್ಯದಲ್ಲೇ ಅತ್ಯುತ್ತಮ ಕಾಲೇಜಾಗಿ ಮುಂದುವರಿದಿದೆ ಎಂದು ಯು.ಟಿ. ಖಾದರ್‌ ಸ್ಮರಿಸಿದರು.

ತೇಜಸ್ವಿನಿ ಹಾಸ್ಪಿಟಲ್‌ ಗ್ರೂಪ್‌ ಆಫ್‌ ಇನ್ಸ್ಟಿಟ್ಯೂಶನ್ಸ್‌ನ ಚೇರ್ಮನ್‌ ಪ್ರೊ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಪ್ರಸ್ತುತ ದೇಶದಲ್ಲಿ 700ಕ್ಕೂ ಅಧಿಕ, ರಾಜ್ಯದಲ್ಲಿ 150ಕ್ಕೂ ಹೆಚ್ಚು, ಮಂಗಳೂರಿನಲ್ಲಿ 15 ಫಿಸಿಯೋಥೆರಪಿ ಕಾಲೇಜುಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ರೋಗಿಗಳ ನೋವು ಕಡಿಮೆ ಮಾಡುವಲ್ಲಿ ಫಿಸಿಯೋಥೆರಪಿಸ್ಟ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಡಾ. ಶಾಂತಾರಾಮ ಶೆಟ್ಟಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬೆಸ್ಟ್‌ ಅಕಾಡೆಮಿಶಿಯನ್‌ ಪ್ರಶಸ್ತಿಯನ್ನು ಡಾ.ಯೋಗರಾಜ್‌ ರೈ, ಡಾ.ಪ್ರಭು, ಡಾ.ಪ್ರಸನ್ನ ಕುಮಾರ್‌ ಅವರಿಗೆ, ಬೆಸ್ಟ್‌ ಫಿಸಿಯೋಥೆರಪಿಸ್ಟ್‌ ಪ್ರಶಸ್ತಿಯನ್ನು ಡಾ.ಶೆರಿನ್‌ ಜಾರ್ಜ್‌, ಡಾ.ಬಸವರಾಜ್‌ ನಂಜಣ್ಣವರ್‌, ಡಾ.ಸುಮಿತಾ ಅವರಿಗೆ, ಡಾ.ಶ್ರವಣ್‌ ಪೂಜಾರಿ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಣಚೂರು ಇಸ್ಲಾಮಿಕ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಯು.ಕೆ. ಮೋನು, ಆಕ್ಸ್‌ಫರ್ಡ್‌ ಗ್ರೂಪ್‌ ಆಫ್‌ ಇನ್ಸ್ಟಿಟ್ಯೂಶನ್ಸ್‌ ಅಧ್ಯಕ್ಷ ವಸಂತ ಹೊರಟ್ಟಿ, ಡಾ.ಅಬ್ದುಲ್‌ ಶಕೀಲ್‌ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಅಬ್ದುಲ್‌ ಶಕೀಲ್‌, ಇಂಡಿಯನ್‌ ಎಸೋಸಿಯೇಶನ್‌ ಆಫ್‌ ಫಿಸಿಯೋಥೆರಪಿಸ್ಟ್‌ ಉಪಾಧ್ಯಕ್ಷ ಡಾ. ಸುರೇಶ್‌ ಬಾಬು ರೆಡ್ಡಿ, ಸಂಜಯ್‌ ಗಾಂಧಿ ಕಾಲೇಜ್‌ ಆಫ್‌ ಫಿಸಿಯೋಥೆರಪಿ ಡೀನ್‌ ಡಾ.ಸಾಯಿ ಕುಮಾರ್‌ ಎನ್‌., ಆರ್‌ಜಿಯುಎಚ್‌ಎಸ್‌ನ ಫಿಸಿಯೋಥೆರಪಿ ಚೇರ್ಮನ್‌ ಡಾ.ವಿ.ಆರ್‌. ಅಯ್ಯಪ್ಪನ್‌ ಮತ್ತಿತರರು ಇದ್ದರು.