ಗುಂಡ್ಲುಪೇಟೇಲಿ ನೀರಿಗಾಗಿ ನಿಲ್ಲದ ಹಾಹಾಕಾರ!

| Published : Mar 16 2024, 01:46 AM IST / Updated: Mar 16 2024, 04:01 PM IST

ಸಾರಾಂಶ

ಗುಂಡ್ಲುಪೇಟೆ ಪಟ್ಟಣದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಪುರಸಭೆಯ 23 ಸದಸ್ಯರೂ ಕೈಚೆಲ್ಲಿ ಕುಳಿತಿರುವುದು ಪಟ್ಟಣದ ಜನಾಕ್ರೋಶಕ್ಕೆ ಕಾರಣವಾಗಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಪಟ್ಟಣದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಪುರಸಭೆಯ 23 ಸದಸ್ಯರೂ ಕೈಚೆಲ್ಲಿ ಕುಳಿತಿರುವುದು ಪಟ್ಟಣದ ಜನಾಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದ ಬಳಿಕ ಪುರಸಭೆಗೆ ಉಪ ವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ. ಆದರೆ, ಪಟ್ಟಣದ ಜನತೆಗೆ ನೀರಿಲ್ಲದೆ ಪರದಾಟ ಕಂಡು ಬಂದರೂ ಜಿಲ್ಲಾಡಳಿತ ಕುರುಡಾಗಿ ವರ್ತಿಸುತ್ತಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

ಗುಂಡ್ಲುಪೇಟೆ ಪಟ್ಟಣಕ್ಕೆ ನಂಜನಗೂಡಿನ ಕಪಿಲ ನದಿಯಿಂದ ಕಬಿನಿ ನೀರು ಬರುತ್ತಿತ್ತು. ಸಿಂಧುವಳ್ಳಿ ಜಲ ಸಂಗ್ರಹಗಾರದಲ್ಲಿನ ಡಿಜಿಟಿಲ್‌ ಸ್ಟಾರ್ಟರ್‌ ದುರಸ್ತಿ ಬಂದಿರುವುದೇ ಕುಡಿಯುವ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ಎಂದು ಪರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿಯವರ ಸಮಜಾಯಿಷಿಯಾಗಿದೆ.

ಕಳೆದ 20 ದಿನಗಳಿಂದ 4 ಡಿಜಿಟಲ್‌ ಸ್ಟಾರ್ಟರ್‌ಗಳನ್ನು ದುರಸ್ತಿಪಡಿಸಿದರೂ ಆನ್‌ ಮಾಡುವ ವೇಳೆಗೆ ಮತ್ತೆ ಕೆಟ್ಟು ನಿಲ್ಲುತ್ತಿವೆ. ಎಲ್‌ಎನ್‌ಟಿ ತಂಡ ಬಂದು ದುರಸ್ತಿಪಡಿಸಲು ಆಗಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿಗಳ ಹೇಳುತ್ತಾರೆ. ದುರಂತವೆಂದರೆ ಕುಡಿಯುವ ನೀರಿನ ಡಿಜಿಟಲ್‌ ಸ್ಟಾರ್ಟರ್‌ಗಳು ಕೆಟ್ಟಿವೆ, ದುರಸ್ತಿಯೇ ಆಗಿಲ್ಲ. ಸಾಪ್ಟ್‌ ಸಾರ್ಟರ್‌ ಖರೀದಿಸಲು ಟೆಂಡರ್‌ ಕರೆಯಲಾಗಿದೆ. ಅದು ಮಾ.15 ರಂದು ಟೆಂಡರ್‌ ಓಪನ್‌ ಆಗಿದೆ ಎನ್ನಲಾಗಿದೆ.

ಕುಡಿಯುವ ನೀರಿನ ಹಾಹಾಕಾರ ಪಟ್ಟಣದಲ್ಲಿ ಮುಗಿಲು ಮುಟ್ಟಿದೆ ಇಂತಹ ಸಮಯದಲ್ಲಿ ಪುರಸಭೆ ಕ್ರಿಯಾ ಯೋಜನೆ ರೂಪಿಸಿದ ಬಳಿಕ ಟೆಂಡರ್‌ ಕರೆಯುವ ಬದಲು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಾಪ್ಟ್‌ ಸ್ಟಾರ್ಟರ್‌ ಖರೀದಿಸಬಹುದಿತ್ತು ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ. ಶೈಲಕುಮಾರ್‌(ಶೇಲೇಶ್‌) ಹೇಳಿದ್ದಾರೆ.

ಪಟ್ಟಣದ 23 ವಾರ್ಡ್‌ಗಳಲ್ಲಿ 5ನೇ ವಾರ್ಡ್‌ ಹೊರತುಪಡಿಸಿದರೆ ಉಳಿದೆಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದರೂ ಜನರಿಂದ ಆಯ್ಕೆಯಾದ ಪುರಸಭೆ ಸದಸ್ಯರು ತಮಗೂ ಕುಡಿಯುವ ನೀರಿನ ಸಮಸ್ಯೆಗೂ ಸಂಬಂಧವೇ ಇಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕೆಎಸ್‌ಎನ್‌ ಬಡಾವಣೆ, ಎಚ್‌.ಎಸ್.ಮಹದೇವ ಪ್ರಸಾದ್‌ ನಗರ, ಜಾಕೀರ್‌ ಹುಸೇನ್‌ ನಗರಗಳಲ್ಲಂತೂ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ. ಆದರೂ ಪುರಸಭೆ ಸದಸ್ಯರು ಮೌನ ಮುರಿದು ಪುರಸಭೆ ವಿರುದ್ಧ ಪ್ರತಿಭಟಿಸುವ ಕೆಲಸ ಮಾಡಿಲ್ಲ ಎಂದು ಜನರು ದೂರಿದ್ದಾರೆ.

ಹಣ ಕೊಟ್ಟು ಖರೀದಿ: ಪಟ್ಟಣದಲ್ಲಿ ಬಹುತೇಕ ನಾಗರಿಕರು ಖಾಸಗಿ ಟ್ಯಾಂಕರ್‌ ಗಳ ಮೂಲಕ ಹಣ ಕೊಟ್ಟು ನೀರು ಖರೀದಿಸುತ್ತಿರುವುದು ದಿನನಿತ್ಯದ ಕೆಲಸವಾಗಿದೆ. ಇದು ತಪ್ಪುವುದು ಎಂದೋ ಎಂದು ಶಾಸಕರನ್ನು ಪಟ್ಟಣದ ನಿವಾಸಿ ರಾಜು ಪ್ರಶ್ನಿಸಿದ್ದಾರೆ.

ಶಾಸಕರ ಗಮನಕ್ಕೆ ತಂದಿಲ್ವಾ?
ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ಗೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯ ವಾಸ್ತವ ಸ್ಥಿತಿಯನ್ನು ಪುರಸಭೆಯ ಕಾಂಗ್ರೆಸ್‌ ಸದಸ್ಯರು ಹೇಳಿಲ್ಲವಾ? ಪುರಸಭೆ ಮುಖ್ಯಾಧಿಕಾರಿಗಳಾದರೂ ಹೇಳಿಲ್ಲವಾ? ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್‌ ಸೂಚನೆ ನೀಡಿದ್ದಾರೆ. 

ಆದರೆ, ಸಿಎಂ ಸೂಚನೆಗೂ ಜಿಲ್ಲಾಡಳಿತ ಬೆಲೆ ನೀಡಿಲ್ಲ ಎಂಬುದಕ್ಕೆ ಗುಂಡ್ಲುಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರವೇ ಸಾಕ್ಷಿಯಾಗಿದೆ. ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಕ್ಷೇತ್ರದ ಶಾಸಕರು. ಅಧಿಕಾರಿಗಳ ವಿಚಾರದಲ್ಲಿ ಖಡಕ್‌ ಇಲ್ಲದಿರುವುದೇ ಅಧಿಕಾರಿಗಳು ಕೆಲಸದಲ್ಲಿ ವಿಳಂಬಕ್ಕೂ ಕಾರಣವಾಗಿದೆ.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಿದ್ದಾಗ ಇಷ್ಟು ಸಮಸ್ಯೆ ಇರಲಿಲ್ಲ!
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದ ಬಳಿಕ ಪುರಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಪ್ರಮಾಣದಲ್ಲಿ ಇರಲಿಲ್ಲ. ಈಗಂತೂ ವಾರವಲ್ಲ, 20 ದಿನಗಳಾದರೂ ಸ್ಥಳೀಯರಿಗೆ ಕುಡಿಯುವ ನೀರು ಸಿಗುತ್ತಿಲ್ಲ. 

ಪುರಸಭೆ ಅಧ್ಯಕ್ಷ ಪಿ. ಗಿರೀಶ್‌ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಿತ್ತು. ಆಗ ಅಧಿಕಾರಿಗಳನ್ನು ಗದರಿಸಿ ಜನರು ಬೈಯ್ತಾವ್ರೆ ಬೇಗ ದುರಸ್ತಿಪಡಿಸಬೇಕು ಎಂದು ನೀರಿನ ಸಮಸ್ಯೆ ಬಗೆಹರಿಸುತ್ತಿದ್ದರು. 

ಆದರೀಗ ಪುರಸಭೆಯ ಆಡಳಿತ ಸಂಪೂರ್ಣ ಅಧಿಕಾರಿಗಳ ಕೈಯಲ್ಲಿರುವ ಕಾರಣ ಜೊತೆಗೆ ಸ್ಥಳೀಯ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಅಧಿಕಾರಿಗಳಿಗೆ ಕ್ರಮಕೈಗೊಳ್ಳದ ಕಾರಣ ಕೆಲಸವಾಗುತ್ತಿಲ್ಲ ಎಂದು ಪುರಸಭೆಯ ಆಡಳಿತ ಪಕ್ಷದ ಸದಸ್ಯರೊಬ್ಬರು ಹೇಳಿದ್ದಾರೆ.

ಗುಂಡ್ಲುಪೇಟೆ ಪಟ್ಟಣ ಸೇರಿ ಮೈಸೂರು,ಊಟಿ ಹೆದ್ದಾರಿ ಬದಿಯಲ್ಲಿನ ಕಬಿನಿ ನೀರಿನ ಸಂಪರ್ಕ ಪಡೆದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರದ ಬಗ್ಗೆ ನನ್ನ ಗಮನಲ್ಲಿದೆ. ಡಿಜಿಟಲ್‌ ಸ್ಟಾರ್ಟರ್‌ ದುರಸ್ತಿಯಾಗಲಿದೆ ಎಂದು ಪುರಸಭೆ ಸಿಒ ಹೇಳಿದ್ದಾರೆ. ಮತ್ತೊಮ್ಮೆ ಗಮನಿಸಿ ಬೇಗ ನೀರು ಬರುವಂತೆ ಕ್ರಮಕೈಗೊಳ್ಳಲು ಸೂಚನೆ ನೀಡುವೆ. -ಎಚ್.ಎಂ. ಗಣೇಶ್‌ ಪ್ರಸಾದ್‌ ಶಾಸಕರು, ಗುಂಡ್ಲುಪೇಟೆ ಕ್ಷೇತ್ರ

ಕಬಿನಿ ನೀರಿನ ಯೋಜನೆಯ ಡಿಜಿಟಲ್‌ ಸ್ಟಾರ್ಟರ್‌ ಕೆಟ್ಟಿವೆ, ದುರಸ್ತಿಪಡಿಸಲು ಪ್ರಯತ್ನಿಸಿದರೂ ದುರಸ್ತಿಯಾಗಿಲ್ಲ. ಹೊಸದಾಗಿ ಸಾಪ್ಟ್‌ ಸ್ಟಾರ್ಟರ್‌ ಖರೀದಿಸಲು ಟೆಂಡರ್‌ ಕರೆದಿದ್ದು, ಶುಕ್ರವಾರ ಶುರುವಾಗಿದೆ. ಗುತ್ತಿಗೆದಾರರ ಎಲಿಜಿಬಿಲಿಟಿ ಚೆಕ್‌ ಮಾಡಿದ ಬಳಿಕ ಸಾಪ್ಟ್‌ ಸ್ಟಾರ್ಟರ್‌ ಖರೀದಿಸಿದ ನಂತರ ಗುಂಡ್ಲುಪೇಟೆಗೆ ನೀರು ಬರಲಿದೆ. -ಕೆ.ಪಿ. ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ