ಸಾರಾಂಶ
ಕಾರ್ಕಳ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ನಡೆದ ‘ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನದ’ ಕುರಿತ ಮಾಹಿತಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಜಿಲ್ಲಾಡಳಿತ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಹಾಗೂ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕಾರ್ಕಳ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ನಡೆದ ‘ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನದ’ ಕುರಿತ ಮಾಹಿತಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು, ಅಯೋಡಿನ್ ನಮ್ಮ ದೇಹಕ್ಕೆ ಬೇಕಾದ ಒಂದು ಸೂಕ್ಷ್ಮ ಪೋಷಕಾಂಶ, ಕತ್ತಿನ ಮುಂಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಯಿಂದ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಅಯೋಡಿನ್ ಅಂಶ ಬಹಳ ಮುಖ್ಯ ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಶಮಾ ಶುಕುರ್, ಆಹಾರದಲ್ಲಿ ಅಯೋಡಿನ್ ಅಂಶ ಕಡಿಮೆ ಆದಲ್ಲಿ ಮಕ್ಕಳಲ್ಲಿ ಬುದ್ದಿಮಟ್ಟ ಕಡಿಮೆ, ಕಲಿಕೆಯಲ್ಲಿ ಹಿಂದುಳಿಕೆ ಹಾಗೂ ಮಾನಸಿಕ ವಿಕಲತೆ, ಕಿವುಡುತನ, ಕುಬ್ಜತನ, ಬೇಗ ಸುಸ್ತಾಗುವುದು ಮತ್ತು ಗಳಗಂಡರೋಗ ಉಂಟು ಮಾಡುತ್ತದೆ. ಗರ್ಭಿಣಿಯರಲ್ಲಿ ಅಯೋಡಿನ್ ಮಟ್ಟ ಕಡಿಮೆ ಆದರೆ ಗರ್ಭಪಾತ, ಸಂತಾನೋತ್ಪತ್ತಿಯಲ್ಲಿ ತೊಂದರೆ, ಶಿಶುವಿನ ಮೆದುಳಿನ ಮೇಲೆ ಸರಿಪಡಿಸಲಾಗದಂತಹ ತೊಂದರೆ ಉಂಟಾಗಬಹುದು ಈ ಕುರಿತು ಜಾಗೃತಿ ಅಗತ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಚಂದ್ರಾವತಿ ವಹಿಸಿದ್ದರು.ಈ ಸಂದರ್ಭ ಅಯೋಡಿನ್ ಮಾಹಿತಿಯ ಕರಪತ್ರಗಳನ್ನು ವೇದಿಕೆಯಲ್ಲಿರುವ ಗಣ್ಯರು ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ್ ಶೆಟ್ಟಿ ಎಂ., ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಸೌಮ್ಯ, ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದ, ತಾಲೂಕು ಆರೋಗ್ಯ ಕಚೇರಿಯ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಎನ್ಎಸ್ಎಸ್ ಅಧಿಕಾರಿ ಪ್ರಸನ್ನ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ನಿರೂಪಿಸಿದರು. ಎನ್ಎಸ್ಎಸ್ ವಿದ್ಯಾರ್ಥಿ ಸೂರಜ್ ವಂದಿಸಿದರು.