ಸಾರಾಂಶ
ಗುಂಡ್ಲುಪೇಟೆಯಲ್ಲಿ ಹೆಲ್ಮೆಟ್ ಜಾಗೃತಿ ಜಾಥಾದ ಬಳಿಕ ಡಿವೈಎಸ್ಪಿ ಲಕ್ಷ್ಮಯ್ಯ ಹೆಲ್ಮೆಟ್ ಧರಿಸಿದ ಸವಾರರಿಗೆ ಗುಲಾಬಿ ಹೂ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನನ್ನಂತೆ ಎಲ್ಲರಿಗೂ ಬದಲಿ ತಲೆ ಸಿಗುವುದಿಲ್ಲ ಎಂದು ಗಣೇಶ ಮುಖವಾಡ ಧರಿಸಿದ್ದ ವ್ಯಕ್ತಿ ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಧರಿಸಿ ಎಂದು ಸಲಹೆ ನೀಡಿದರು.ಪೊಲೀಸರು ಹೆಲ್ಮೆಟ್ ಧರಿಸಿ ಜೀವ ಉಳಿಸಿ ಜಾಗೃತಿ ಜಾಥಾದಲ್ಲಿ ಪುರುಷನೊಬ್ಬನಿಗೆ ಗಣೇಶನ ಮುಖವಾಡ ಹಾಕಿಸಿ ಹೆಲ್ಮೆಟ್ ಧರಿಸದ ಸವಾರರಿಗೆ ಜಾಗೃತಿ ಮೂಡಿಸಿದ ಪರಿ ಇದಾಗಿತ್ತು. ಪಟ್ಟಣದ ಎಂಸಿ ಡಿಸಿಸಿ ಬ್ಯಾಂಕ್ ವೃತ್ತದಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪೊಲೀಸರು ಆಯೋಜಿಸಿದ್ದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಜಾಥಾದಲ್ಲಿ ಈ ದೃಶ್ಯ ಕಂಡು ಬಂದಿತು. ಚಾಮರಾಜನಗರ ಉಪ ವಿಭಾಗದ ಡಿವೈಎಸ್ಪಿ ಲಕ್ಷ್ಮಯ್ಯ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಎಂಸಿ ಡಿಸಿಸಿ ಬ್ಯಾಂಕ್ ವೃತ್ತದಲ್ಲಿ ಹೆಲ್ಮೆಟ್ ಜಾಗೃತಿ ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿ, ಜೀವ ಉಳಿಸಿಕೊಳ್ಳಲು ಹೆಲ್ಮೆಟ್ ಧರಿಸಿ ಎಂದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಇಲ್ಲದೆ ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ನಿಮ್ಮ ಕುಟುಂಬ ಇದೆ ಎಂದಾದರೂ ಹೆಲ್ಮೆಟ್ ಧರಿಸಿ ಎಂದರು. ಪಟ್ಟಣದ ಎಂಸಿ ಡಿಸಿಸಿ ಬ್ಯಾಂಕ್ ವೃತ್ತದಿಂದ ಹಳೆ ಬಸ್ ನಿಲ್ದಾಣ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಕೋಡಹಳ್ಳಿ ಸರ್ಕಲ್ ಮೂಲಕ ಚಾಮರಾಜನಗರ ರಸ್ತೆ, ಮೈಸೂರು ರಸ್ತೆಯಲ್ಲಿ ಗುಂಡ್ಲುಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಎನ್.ಜಯಕುಮಾರ್, ಸಬ್ ಇನ್ಸ್ಪೆಕ್ಟರ್ ಸಾಹೇಬಗೌಡ ಆರ್.ಬಿ ನೇತೃತ್ವದಲ್ಲಿ ವಿದ್ಯಾರ್ಥಿಗಳೊಂದಿಗೆ ಗಣೇಶನ ಮುಖವಾಡ ಹೊತ್ತ ಯುವಕ, ಪೊಲೀಸರು, ಕನ್ನಡಪರ ಸಂಘಟನೆಗಳ ಕೆಲ ಸದಸ್ಯರು ಜಾಥಾ ನಡೆಸಿದರು.