ಯುವಜನರು ಕಾಡು ಬೆಳೆಸುವ ಸಂಕಲ್ಪ ತೊಡಬೇಕು

| Published : Jun 06 2025, 01:56 AM IST

ಸಾರಾಂಶ

ಕಾಡು ಬೆಳೆಸಿ ನಾಡು ಉಳಿಸುವ ಸಂಕಲ್ಪವನ್ನು ಯುವಜನತೆ ಮಾಡದಿದ್ದರೆ ಮುಂದಿನ ಪೀಳಿಗೆ ಕಲುಷಿತ ಸಮಾಜದಲ್ಲಿ ಜೀವಿಸಬೇಕಾಗುತ್ತದೆ ಎಂದು ಅರಕಲಗೂಡು ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಅನಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಚಾರ್ಯರಾದ ಗಾಯಿತ್ರಿ ಮಾತನಾಡಿ, ಕಾಲೇಜು ಆವರಣದಲ್ಲಿರುವ ಗಿಡಗಳನ್ನು ಪ್ರತಿ ವಿದ್ಯಾರ್ಥಿಗೆ ದತ್ತು ನೀಡುವ ಮೂಲಕ ಗಿಡಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗುವುದು ಎಂದು ತಿಳಿಸಿದರು. ಈಗಲಾದರೂ ನಾವೆಲ್ಲ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ದೊಡ್ಡ ಅನಾಹುತ ಆಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಕಾಡು ಬೆಳೆಸಿ ನಾಡು ಉಳಿಸುವ ಸಂಕಲ್ಪವನ್ನು ಯುವಜನತೆ ಮಾಡದಿದ್ದರೆ ಮುಂದಿನ ಪೀಳಿಗೆ ಕಲುಷಿತ ಸಮಾಜದಲ್ಲಿ ಜೀವಿಸಬೇಕಾಗುತ್ತದೆ ಎಂದು ಅರಕಲಗೂಡು ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಅನಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣಾ ಕಾರ್ಯಕ್ರಮವನ್ನ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಗತಿ ಹೊಂದಿದ ಹಾಗೂ ಪ್ರಗತಿಶೀಲ ದೇಶಗಳು ಜಾಗತಿಕವಾಗಿ ಪ್ರಬಲ ಆರ್ಥಿಕ ಹಾಗೂ ಸೈನಿಕ ಶಕ್ತಿಯಾಗಿ ಬೆಳೆಯುವ ಸ್ಪರ್ಧೆಯಲ್ಲಿ ಮಗ್ನರಾಗಿದ್ದಾರೆ ವಿನಃ ಇದರಿಂದಾಗುತ್ತಿರುವ ಪರಿಸರ ನಾಶದ ಬಗ್ಗೆ ಗಮನಹರಿಸದಿರುವುದೇ ಇಡೀ ಪ್ರಪಂಚಾದ್ಯಂತ ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ. ಈಗಲಾದರೂ ನಾವೆಲ್ಲ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ದೊಡ್ಡ ಅನಾಹುತ ಆಗಲಿದೆ ಎಂದರು.

ಕಾಲೇಜು ಅಭಿರುದ್ದಿ ಸಮಿತಿಯ ಉಪಾಧ್ಯಕ್ಷರಾದ ನರಸೇಗೌಡ ಮಾತನಾಡಿ, ಪರಿಸರದಲ್ಲಾಗುತ್ತಿರುವ ಅಸಮತೋಲನ ಸರಿದೂಗಿಸಲು ನಮಗೆ ಉಳಿದಿರುವ ದಾರಿ ಕಾಡು ಬೆಳೆಸುವುದೊಂದೇ ದಾರಿ. ಇದನ್ನು ಮನಗಂಡು ಪ್ರತಿಯೊಬ್ಬರು ಹತ್ತು ಗಿಡಗಳನ್ನ ನೆಡುವ ಮೂಲಕ ಕಾಡು ಬೆಳೆಸಿದರೆ ನಾಡು ಸಮೃದ್ಧಿಯಾಗಿರುತ್ತದೆ. ಯುವ ಪೀಳಿಗೆ ಈ ಸಂದರ್ಭದಲ್ಲಿ ಜಾಗೃತರಾಗದಿದ್ದರೆ ಪ್ರಪಂಚದ ಆಸ್ತಿತ್ವ ಬುಡಮೇಲಾಗುತ್ತದೆ. ಕೇವಲ ಕಾರ್ಯಕ್ರಮಗಳಲ್ಲಿ ಮಾತ್ರ ಪರಿಸರದ ಬಗ್ಗೆ ಮಾತನಾಡಿ, ಗಿಡಗಳನ್ನ ವಿತರಿಸಿದರೆ ಸಾಲದು. ಅವುಗಳ ಪೋಷಣೆ ಮುಖ್ಯ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಗಾಯಿತ್ರಿ ಮಾತನಾಡಿ, ಕಾಲೇಜು ಆವರಣದಲ್ಲಿರುವ ಗಿಡಗಳನ್ನು ಪ್ರತಿ ವಿದ್ಯಾರ್ಥಿಗೆ ದತ್ತು ನೀಡುವ ಮೂಲಕ ಗಿಡಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿ ಸಿ ಸಿ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ಬ್ಯಾಂಕ್ ಸಲಹೆಗಾರ ಮಂಜುಳ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಶ್ವಾಸ್, ಕಾಲೇಜು ಉಪನ್ಯಾಸಕರಾದ ಲಾಡಪ್ಪಾ, ಉಷಾ, ಹೇಮಾ, ಮಹೇಶ್, ತೇಜಸ್ವಿನಿ ಉಪಸ್ಥಿತರಿದ್ದರು.