ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಕಿಡಿಗೇಡಿಗಳು ಹಚ್ಚಿನ ಬೆಂಕಿಯಿಂದಾಗಿ 1.5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಆಹುತಿಯಾಗಿರುವ ಘಟನೆ ಸಮೀಪದ ಮಾರಗೌಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.ಗ್ರಾಮದ ರೈತ ಎಂ.ಎಲ್.ಸತೀಶ್ ಕುಮಾರ್ ಅವರು ದೇವರಾಜಯ್ಯ ಅವರ ಜಮೀನನ್ನು ಗುತ್ತಿಗೆಗೆ ಪಡೆದು ಕಬ್ಬು ಬೆಳೆದಿದ್ದರು. ಸಮೃದ್ಧ ಫಸಲು ಬಂದಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಬ್ಬು ಕಟಾವು ಮಾಡಬೇಕಿತ್ತು.
ಆದರೆ, ಶುಕ್ರವಾರ ಮಧ್ಯಾಹ್ನ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆ ಇಡೀ ಜಮೀನಿಗೆ ಅವರಿಸಿಕೊಂಡಿದೆ. ಜಮೀನಿನಲ್ಲಿ ಬೆಳೆಸಿದ್ದ ಸುಮಾರು 50 ಕ್ಕೂ ಹೆಚ್ಚು ತೆಂಗಿನ ಸಸಿಗಳು ಬೆಂಕಿಗೆ ಸಿಲುಕಿ ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರೂ ಜಮೀನಿಗೆ ದಾರಿ ಇಲ್ಲದ ಪರಿಣಾಮ ಯಾವುದೇ ಪ್ರಯೋಜನವಾಗಿಲ್ಲ. ಸ್ವಾವಲಂಬಿ ಜೀವನ ನಿರ್ವಹಣೆಗಾಗಿ ಸತೀಶ್ ಕುಮಾರ್ ಕಷ್ಟಪಟ್ಟು ಸಾಲ ಮಾಡಿ ಕಬ್ಬು ಬೆಳೆದಿದ್ದರು. ಕಬ್ಬು ಕಟಾವಿಗೆ ಬಂದಿತ್ತು. ಯಾರೋ ಕಿಡಿಗೇಡಿಗಳು ಕಬ್ಬಿಗೆ ಬೆಂಕಿ ಹಚ್ಚಿದ್ದರಿಂದ 3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದ್ದು ರೈತ ಕಂಗಾಲಾಗಿದ್ದಾರೆ.ಸಂಬಂಧಿಸಿದ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕೆಂದು ರೈತರ ಎಂ.ಎಲ್. ಸತೀಶ್ ಕುಮಾರ್ ಮನವಿ ಮಾಡಿದರು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ನಾಗಮಂಗಲ: ಸೆಸ್ಕಾಂ ನಾಗಮಂಗಲ ವಿಭಾಗದ ದೇವಲಾಪುರ ಶಾಖಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಿದ್ಯುತ್ ಅಡಚಣೆ ಇರುವ ಹಿನ್ನೆಲೆಯಲ್ಲಿ 11 ಕೆವಿ ಮಾರ್ಗಕ್ಕೆ ತಗಲುವ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿ ಜಂಪ್ಗಳನ್ನು ಬಿಗಿಗೊಳಿಸಬೇಕಿದೆ. ಬಾಗಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸುವುದು ಸೇರಿದಂತೆ ಇನ್ನಿತರೆ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ತಾಲೂಕಿನ ಹರದನಹಳ್ಳಿ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಶಿಲ್ಪಾಪುರ ಎನ್ಜೆವೈ, 11ಕೆವಿ ಮಾರ್ಗ ವ್ಯಾಪ್ತಿಯ ಹರದನಹಳ್ಳಿ ಗ್ರಾಪಂಗೆ ಸೇರುವ ನಲ್ಕುಂದಿ, ಕೆಂಚೇಗೌಡನಕೊಪ್ಪಲು, ಎಚ್.ಬೊಮ್ಮನಹಳ್ಳಿ, ಹರದನಹಳ್ಳಿ, ದೊಂದೆಮಾದಹಳ್ಳಿ, ಜೋಡಿಚಿಕ್ಕನಹಳ್ಳಿ, ದಂಡೇಬಾಳ, ಮಾಳೆ, ಮಾವಿನಕಟ್ಟೆಕೊಪ್ಪಲು, ತೊರೆಮಲ್ಲನಾಯ್ಕನಹಳ್ಳಿ, ದೊಡ್ಡಚಿಕ್ಕನಹಳ್ಳಿ, ದೊಡ್ಡಜಕ್ಕನಹಳ್ಳಿ, ತೊಳಸಿಕೊಂಬರಿ, ಯಡವನಹಳ್ಳಿ, ಮಲ್ಲಸಂದ್ರ, ಬೆಸ್ತರಕೊಪ್ಪಲು, ಮಲ್ಲನಕೊಪ್ಪಲು, ಹಾಗೂ ಬಿಟಗೋನಹಳ್ಳಿ ಗ್ರಾಮಗಳಿಗೆ ಜೂ.21 ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆದ್ದರಿಂದ ರೈತರು ಹಾಗೂ ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಾಗಮಂಗಲ ಸೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.