ಕನ್ನಡಪ್ರಭ ವಾರ್ತೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯಲ್ಲಿ ಸತತ 36 ಗಂಟೆಗಳು ನಡೆದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್ಐಎಚ್) 2025 ಗ್ರ್ಯಾಂಡ್ ಫಿನಾಲೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ 20 ತಂಡಗಳು ನಾಲ್ಕು ಬೇರೆ ವಿಷಯಗಳಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಂಡು ದೇಶೀಯ ತಂತ್ರಜ್ಞಾನ ಪರಿಹಾರಗಳನ್ನು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯಲ್ಲಿ ಸತತ 36 ಗಂಟೆಗಳು ನಡೆದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್ಐಎಚ್) 2025 ಗ್ರ್ಯಾಂಡ್ ಫಿನಾಲೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ 20 ತಂಡಗಳು ನಾಲ್ಕು ಬೇರೆ ವಿಷಯಗಳಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಂಡು ದೇಶೀಯ ತಂತ್ರಜ್ಞಾನ ಪರಿಹಾರಗಳನ್ನು ನೀಡಿದ್ದಾರೆ.ಈ ಮಹತ್ವದ ರಾಷ್ಟ್ರೀಯ ಇನ್ನೋವೇಶನ್ ಉತ್ಸವವು ಇದೇ ಡಿ.8 ಮತ್ತು ಡಿ.9 ರಂದು ನಡೆಯಿತು. 2ನೇ ದಿನದ ಕಾರ್ಯಕ್ರಮದಲ್ಲಿ, ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವರಾದ ಡಾ.ಸುಕಾಂತ ಮಜುಂದಾರ್ ಅವರು ಭಾರತದಾದ್ಯಂತ ನಡೆದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH) 2025 ರ ಗ್ರ್ಯಾಂಡ್ ಫಿನಾಲೆ ಸ್ಪರ್ಧಿಗಳೊಂದಿಗೆ ಆನ್ಲೈನ್ ಮೂಲಕ ಸಂವಾದ ನಡೆಸಿದರು.
ವಿಜೇತವಾದ ತಂಡಗಳು:ಬ್ಲಾಕ್ಚೈನ್ ಮತ್ತು ಸೈಬರ್ ಸೆಕ್ಯೂರಿಟಿ ವಿಷಯದಲ್ಲಿ ಪಾನಿಪತ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ತಂಡ.
ಎಐ ಆಧಾರಿತ ಮಾಲಿನ್ಯ ಮೂಲ ಗುರುತಿಸುವಿಕೆ: ದೆಹಲಿ-ಎನ್ಸಿಆರ್ ನ ಹವಮಾನ ಮತ್ತು ನೀತಿಯ ಡ್ಯಾಶ್ಬೋರ್ಡ್ ವಿಷಯದಲ್ಲಿ ತಮಿಳುನಾಡಿನ ವೆಲ್ಲೋರ್ನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಟೆಕ್ನಾಲಜಿ ತಂಡ.ಸುಸ್ಥಿರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಿಷಯದಲ್ಲಿ ಹೈದರಾಬಾದ್ನ ಗಾಕಾ ರಾಜು ರಂಗ ರಾಜು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ.
ಕ್ಲೀನ್ ಮತ್ತು ಗ್ರೀನ್ ಟೆಕ್ನಾಲಜಿ ವಿಷಯದಲ್ಲಿ ಮಹಾರಾಷ್ಟ್ರದ ಕೆ.ಸಿ.ಕಾಲೇಜ್ ಆಫ್ ಎಂಜಿನಿಯರಿಂಗ್ ತಂಡಗಳು ಈ ಹ್ಯಾಕಥಾನಲ್ಲಿ ವಿಜೇತ ತಂಡಗಳಾಗಿ ₹1.5 ಲಕ್ಷಗಳನ್ನು ನಗದು ಬಹುಮಾನವಾಗಿ ಸ್ವೀಕರಿಸಿದರು.ಈ ಹ್ಯಾಕಥಾನಲ್ಲಿ 20 ತಂಡಗಳಲ್ಲಿ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶೇಷ ಎಂದರೆ ಇದರಲ್ಲಿ 52 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್, ನೋಡಲ್ ಕೇಂದ್ರದ ಮುಖ್ಯಸ್ಥ ಆನಂದ್ ಕುಲಕರ್ಣಿ ವಿಜೇತ ತಂಡಗಳಿಗೆ ಟ್ರೋಫಿ ಮತ್ತು ಚೆಕ್ನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ.ಪ್ರಸಾದ್ ರಾಂಪುರೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಯು.ಜೆ.ಉಜ್ವಲ, ಪ್ರೊ.ಎಸ್.ಎ.ಅಂಗಡಿ, ಪ್ರೊ.ರಂಜನಾ ನಾಗೇಗೌಡರ, ಪ್ರೊ.ವಿವೇಕ ರೆಡ್ಡಿ, ಪ್ರೊ.ಆರ್.ಎಚ್.ಗೌಡರ ಹಾಜರಿದ್ದರು.