ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ರಾಗಿ ಮಾರಾಟ ಮಾಡಿದ್ದ ಒಂದು ಲಕ್ಷಕ್ಕೂ ಅಧಿಕ ರೈತರಿಗೆ ರಾಜ್ಯ ಸರ್ಕಾರ ಇನ್ನೂ 1,611 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ. ಇದರಿಂದ ಬಿತ್ತನೆ ಕಾರ್ಯಗಳಿಗೆ ಹಣವಿಲ್ಲದೆ ರೈತರು ಪರದಾಡುವಂತಾಗಿದೆ.

ಎಂಎಸ್‌ಪಿ ಅಡಿ 2025-26ನೇ ಸಾಲಿಗೆ 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. 15 ಜಿಲ್ಲೆಯ 2,46,605 ರೈತರು 5,69,331 ಮೆಟ್ರಿಕ್‌ ಟನ್‌ ರಾಗಿ ಮಾರಾಟ ಮಾಡಿದ್ದರು. ಇದರಲ್ಲಿ ಕೇವಲ 1,02,689 ರೈತರಿಗೆ ಮಾತ್ರ ₹1,169 ಕೋಟಿ (ಶೇ.42) ಪಾವತಿ ಮಾಡಲಾಗಿದೆ. ಇನ್ನುಳಿದ 1,44,067 ರೈತರಿಗೆ ₹1,611 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ.

ಕಳೆದ ಡಿಸೆಂಬರ್‌ 26ಕ್ಕೆ ರೈತರು 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಗೆ ನೋಂದಣಿ ಮಾಡಿಸಿದ್ದರು. ಖರೀದಿಗೆ ಮೊದಲು ಮಾ.31 ಕೊನೆಯ ದಿನವಾಗಿತ್ತು. ಆದರೆ ನೋಂದಣಿ ಮಾಡಿಸಿದ್ದ ರೈತರು ಮಾರಾಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗದಿದ್ದರಿಂದ ಮೇ 15 ರವರೆಗೂ ದಿನಾಂಕ ವಿಸ್ತರಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ರೈತರಿಗೆ ಮೇ 17 ರವರೆಗೂ ಕಾಲಾವಕಾಶ ನೀಡಲಾಗಿತ್ತು.


ಮಾ.25 ರವರೆಗೂ ಮಾತ್ರ ಪಾವತಿ:

ಎಕರೆಗೆ 10 ಕ್ವಿಂಟಲ್‌ನಂತೆ ಒಬ್ಬರಿಗೆ ಗರಿಷ್ಠ 50 ಕ್ವಿಂಟಲ್‌ ರಾಗಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಬೆಳೆ ಹಾನಿ ಹಿನ್ನೆಲೆಯಲ್ಲಿ 6 ಲಕ್ಷ ಮೆಟ್ರಿಕ್‌ ಟನ್‌ಗೆ ಬದಲಾಗಿ 5.69 ಲಕ್ಷ ಮೆಟ್ರಿಕ್‌ ಟನ್‌ ಮಾತ್ರ ಖರೀದಿಯಾಗಿತ್ತು. ಮಾ.25 ರೊಳಗೆ ರಾಗಿ ಮಾರಾಟ ಮಾಡಿದ ರೈತರಿಗೆ ಮಾತ್ರ ಹಣ ಪಾವತಿಯಾಗಿದೆ. ನಂತರ ರಾಗಿ ಮಾರಾಟ ಮಾಡಿದ 1.02 ಲಕ್ಷ ರೈತರಿಗೆ ಇನ್ನೂ ₹1,169 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ.

ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ ಸೇರಿ 15 ಜಿಲ್ಲೆಯ ರೈತರ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ರಾಗಿಯ ಹಣ ಬಾರದೇ ಇರುವುದರಿಂದ ಮುಂಗಾರು ಹಿನ್ನೆಲೆಯಲ್ಲಿ ರೈತರು ಭೂಮಿ ಹಸನು ಮಾಡಲು, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಸಂಕಷ್ಟ ಅನುಭವಿಸುವಂತಾಗಿದೆ.

-ಕೋಟ್‌-

ರಾಗಿ ಖರೀದಿ ಹಣ ಬಾಕಿ ಇದೆ. ಈ ಸಂಬಂಧ ಆವರ್ತ ನಿಧಿಯಿಂದ ಹಣ ಬಿಡುಗಡೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸಂಪುಟ ವಿಸರ್ಜನೆ ಹಿನ್ನೆಲೆಯಲ್ಲಿ ಹಣ ಬಿಡುಗಡೆ ವಿಳಂಬವಾಗಿದೆ.

- ಎಂ.ಕೆ.ಜಗದೀಶ್‌, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ

-ಬಾಕ್ಸ್‌-

ರಾಗಿ ಹಣ ಬಾಕಿಯ ಕೆಲ ಜಿಲ್ಲೆಗಳ ವಿವರ

ಜಿಲ್ಲೆ-ರೈತರು-ಕೋಟಿ ರು. ಬಾಕಿ

ತುಮಕೂರು34,543370

ಹಾಸನ29,090320

ಮೈಸೂರು16,659179

ಚಿಕ್ಕಮಗಳೂರು14,297169

ಮಂಡ್ಯ11,521126

ಚಿತ್ರದುರ್ಗ9857116

ರಾಮನಗರ521358