ಚಿಂತಾಮಣಿ: ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಬಳಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಿರಂತರವಾಗಿ 81 ದಿನಗಳಿಂದ ನಡೆಯುತ್ತಿರುವ ಧರಣಿಯ ಹೋರಾಟಕ್ಕೆ ತಾಲೂಕಿನ ರೈತ ಸಂಘಟನೆಗಳು ಬೆಂಬಲ ಸೂಚಿಸಿ ಜೂನ್ 5 ರಂದು ಬೃಹತ್ ಬೈಕ್ ರ‍್ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ನುಡಿದರು.

ನಗರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣದ) ಕಚೇರಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರವು ಕೈಗಾರಿಕೆ ಹೆಸರು ಹೇಳಿ ರೈತರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದ್ದು, ಆದರೆ ಕಳೆದ 20 ವರ್ಷಗಳಿಂದ ಲಕ್ಷಾಂತರ ಎಕರೆ ಭೂಮಿ ಸರ್ಕಾರ ಕೈಗಾರಿಕಾ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡಿದ್ದು, ಶೇ. 25 ಭೂಮಿ ಕೈಗಾರಿಕೆಗೆ ಬಳಕೆಯಾಗಿದ್ದು ಉಳಿದ ಶೇ.75ರಷ್ಟು ಭೂಮಿ ಬಳಕೆಯಾಗದೆ ಉಳಿದಿದ್ದು ಇದೊಂದು ಹಗಲು ದರೋಡೆ ಎಂದು ನುಡಿದರು.

ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2823 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದು, ಈ ಭೂಮಿ ಫಲವತ್ತತೆಯಿಂದ ಕೂಡಿದ್ದು ಇಲ್ಲಿ ಹೂವು, ಹಣ್ಣು, ತರಕಾರಿ, ಸೊಪ್ಪು, ಮಾವು, ಗೋಬಿ, ಶುಂಠಿ, ಅಲ್ಲದೇ ರೇಷ್ಮೆ ಬೆಳೆಯುತ್ತಾರೆ ತೆಂಗು, ಅಡಿಕೆ ಇತ್ಯಾದಿಗಳನ್ನು ಬೆಳೆಯಲು ಯೋಗ್ಯವಾದ ಭೂಪ್ರದೇಶವಾಗಿದ್ದು ಹೀಗಾಗಿ ಇದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.

ಇದುವರೆವಿಗೂ ಅನೇಕ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರೂ ಆಳುವ ಸರ್ಕಾರಗಳು ಇದಕ್ಕೆ ಸೊಪ್ಪು ಹಾಕದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಬಿಸಿಮುಟ್ಟಿಸಲು ಜೂನ್ 5 ರಂದು 10 ಸಾವಿರ ಬೈಕ್‌ಗಳಲ್ಲಿ ರ‍್ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಗುವುದೆಂದು ಇದಕ್ಕೆ ಎಲ್ಲರ ಸಹಕಾರ ಬೇಕೆಂದು ಹೋರಾಟಕ್ಕೆ ಪ್ರತಿಯೊಬ್ಬ ರೈತರು ಭಾಗವಹಿಸಿ ವಿಧಾನಸೌಧ ಮುತ್ತಿಗೆಯನ್ನು ಯಶಸ್ವಿಗೊಳಿಸಬೇಕೆಂದು ಕರೆಯಿತ್ತರು.

ಈ ಸಂದರ್ಭದಲ್ಲಿ ಸಿದ್ದು ನಾರಾಯಣಸ್ವಾಮಿ, ಎಂ.ಎಲ್. ಆಂಜನೇಯರೆಡ್ಡಿ, ಹಾಲು ನಾರಾಯಣಸ್ವಾಮಿ, ರಾಯಪಲ್ಲಿ ಆನಂದರೆಡ್ಡಿ, ಹೊಸಹುಡ್ಯ ರೆಡ್ಡಪ್ಪ, ಆರ್ ಎಸ್ ಸಿ ಆಂಜನೇಯ ರೆಡ್ಡಿ ಗಂಜೂರು ನಾರಾಯಣಸ್ವಾಮಿ, ಕೆವಿ.ವೆಂಕಟಸ್ವಾಮಿರೆಡ್ಡಿ, ಶೇಖರ್ ಸೇರಿದಂತೆ ರೈತರು, ರೈತಪರ ಹೋರಾಟಗಾರರು ಇದ್ದರು.


ಚಿತ್ರಶೀರ್ಷಿಕೆ: ನಗರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಚೇರಿಯಲ್ಲಿ ಸೀಕಲ್ ರಮಣಾರೆಡ್ಡಿ ಮಾತನಾಡಿದರು.