ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಆಗುತ್ತಿರುವ ಹಿನ್ನೆಲೆ ಅವರ ಕೊಡುಗೆಗಳನ್ನು ಸ್ಮರಿಸುವ ಹಾಗೂ ಅವರಿಗೆ ಅಭಿನಂದನೆ ಹೇಳುವ ಸಲುವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಚಿತ್ರದುರ್ಗದಲ್ಲಿ ಮೇ 9 ರಂದು ನಡೆಯುವ ಬಿ.ಎಸ್‌. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ನೂರಕ್ಕೂ ಅಧಿಕ ಬಸ್, ನೂರಾರು ಕಾರುಗಳು ಸೇರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಈ ಕುರಿತು ಸಮಾಲೋಚನಾ ಸಭೆಗಳನ್ನು ನಡೆಸಲಾಗುತ್ತಿದ್ದು, ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಆಗುತ್ತಿರುವ ಹಿನ್ನೆಲೆ ಅವರ ಕೊಡುಗೆಗಳನ್ನು ಸ್ಮರಿಸುವ ಹಾಗೂ ಅವರಿಗೆ ಅಭಿನಂದನೆ ಹೇಳುವ ಸಲುವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಮಾತನಾಡಿ, ಯಡಿಯೂರಪ್ಪ ಅವರು 50 ವರ್ಷ ರಾಜ್ಯವನ್ನು ಸುತ್ತಿದ್ದಾರೆ. ರೈತರ ಪರವಾಗಿ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಅವರ ಜೀವನ ಮತ್ತು ಸಮಾಜಸೇವೆ ಕುರಿತು ಅವರ ಅಭಿಮಾನೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ ಎಂದರು.

ಯಡಿಯೂರಪ್ಪ ಜನನಾಯಕ:

ಬಿಜೆಪಿ ಮುಖಂಡ ಚಿಂತಾಮಣಿಯ ವೇಣುಗೋಪಾಲ್ ಮಾತನಾಡಿ, ಯಡಿಯೂರಪ್ಪ ಅವರು ಜನನಾಯಕರು. ಪುರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ 1983 ರಿಂದ ಶಾಸಕರಾಗಿ, ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು. ಜನತಾದಳದಿಂದ ಕಾಂಗ್ರೆಸ್ಸಿಗೆ ಬಂದ ಸಿದ್ದರಾಮಯ್ಯನವರು ಬೇರೆಯವರ ಹೆಗಲ ಮೇಲೆ ಕುಳಿತು ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ. ನಮ್ಮದು ಹಾಗಲ್ಲ, ಯಡಿಯೂರಪ್ಪನವರೇ ಕಟ್ಟಿ ಬೆಳೆಸಿದ ಪಕ್ಷ ಇದು. ಜನರ ಉತ್ಸವ ನಮ್ಮದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್. ಮುರಳೀಧರ್, ಮಧು ಸೂರ್ಯನಾರಾಯಣರೆಡ್ಡಿ, ಮಾಧ್ಯಮ ವಕ್ತಾರ ಮಧುಚಂದ್ರ, ಕಾರ್ಯದರ್ಶಿ ಆರ್.ಹೆಚ್.ಎನ್. ಅಶೋಕ್ ಕುಮಾರ್, ಮುಖಂಡರಾದ ಸೀಕಲ್ ಆನಂದಗೌಡ, ಲಕ್ಷ್ಮೀನಾರಾಯಣಗುಪ್ತ, ಎ.ವಿ ಬೈರೇಗೌಡ, ಸುಮಿತ್ರಮ್ಮ,ಪ್ರಭಾಕರರೆಡ್ಡಿ, ದೇವಸ್ಥಾನದ ಹೊಸಹಳ್ಳಿ ರಾಮಣ್ಣ, ತೇಜೆಂದ್ರಪಾಪು, ಕೋಡಿರ್ಲಪ್ಪ, ನರಸಿಂಹರಾಜು, ವೇಣುಮಾಧವ್, ಶಶಿಧರ್, ನರಸಪ್ಪ, ನಂದಿ ಮುನಿಸ್ವಾಮಿ ಮತ್ತಿತರರು ಇದ್ದರು.