ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದ ಜನರ ಬಹುಕಾಲದ ಬೇಡಿಕೆಯಾಗಿದ್ದ “ಪ್ರಸಾರ ಭಾರತಿ” ಆಕಾಶವಾಣಿ ಭದ್ರಾವತಿ ಕೇಂದ್ರದ ಉನ್ನತೀಕರಣ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಿವಮೊಗ್ಗದ ವಿದ್ಯಾನಗರದಲ್ಲಿ ನಿರ್ಮಿಸಿರುವ 10 ಕಿಲೋ ವ್ಯಾಟ್ ಎಫ್.ಎಂ ಟ್ರಾನ್ಸ್ ಮೀಟರ್ ಕೇಂದ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ಫೆ.26ರಂದು ಬೆಳಗ್ಗೆ 11.30ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಸೌಲಭ್ಯದಿಂದ ಆಕಾಶವಾಣಿ, ಭದ್ರಾವತಿ ಪ್ರಸಾರ ವ್ಯಾಪ್ತಿ, ಬಹಳಷ್ಟು ವಿಸ್ತರಿಸಲು ಸಹಕಾರಿಯಾಗಲಿದೆ. ಜಿಲ್ಲೆಯ ಈಒ ಪ್ರಸಾರ ಮತ್ತು ಸಂವಹನ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ದೇಶದ ಪ್ರಸಾರ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ''''''''ಬೈಂಡ್'''''''' (Broadcasting Infrastructure and Network Development - BIND) ಯೋಜನೆಯಡಿ, ಸಂಸದ ರಾಘವೇಂದ್ರರ ಸತತ ಪ್ರಯತ್ನದಿಂದ. ಶಿವಮೊಗ್ಗಕ್ಕೆ ಈ ಆಧುನಿಕ ಕೊಡುಗೆ ಸಿಕ್ಕಿದೆ. ಭದ್ರಾವತಿಯಲ್ಲಿದ್ದ ಹಳೆಯ 1 ಕಿಲೋ ವ್ಯಾಟ್ ಸಾಮರ್ಥ್ಯದ ಕೇಂದ್ರವನ್ನು ಈಗ ಶಿವಮೊಗ್ಗದಲ್ಲಿ 10 ಕಿಲೋ ವ್ಯಾಟ್ ಸಾಮರ್ಥ್ಯದ ಅತ್ಯಾಧುನಿಕ ಎಫ್.ಎಂ ಟ್ರಾನ್ಸ್ಮಿಟರ್ ಆಗಿ ಮೇಲ್ದರ್ಜೆಗೇರಿಸಲಾಗಿದ್ದು, ಇದು ಫೆ.26ರಿಂದ ಅಧಿಕೃತವಾಗಿ ಸಾರ್ವಜನಿಕ ಸೇವೆಗೆ ಸಮರ್ಪಿತವಾಗಲಿದೆ ಎಂದು ತಿಳಿಸಿದ್ದಾರೆ.

"ಮೋದಿ ಸರ್ಕಾರದ ''''''''ವೋಕಲ್ ಫಾರ್ ಲೋಕಲ್” ಮಂತ್ರದಂತೆ ನಮ್ಮ ಸ್ಥಳೀಯ ಪ್ರತಿಭೆಗಳು, ರೈತರು ಮತ್ತು ಯುವಜನತೆಯ ಧ್ವನಿ ಈಗ ಕೇವಲ ಶಿವಮೊಗ್ಗಕ್ಕೆ ಸೀಮಿತವಾಗದೆ ನೆರೆಯ ಅಕ್ಕ-ಪಕ್ಕದ 10 ಜಿಲ್ಲೆಗಳಿಗೂ ತಲುಪಲಿದೆ. 150 ಮೀಟರ್ ಎತ್ತರದ ಪ್ರಸಾರದ ಅನುಕೂಲದಿಂದಾಗಿ ಇನ್ನು ಮುಂದೆ ಮಲೆನಾಡಿನ ಅತಿ ಸಣ್ಣ ಗ್ರಾಮಗಳಲ್ಲೂ ಕೂಡ ಆಕಾಶವಾಣಿಯ ಶ್ರವಣ ಅತ್ಯಂತ ಸ್ಪಷ್ಟವಾಗಿರಲಿದೆ. ಇದು ನಮ್ಮ ಜಿಲ್ಲೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಕಾಸಕ್ಕೆ ಹೊಸ ವೇಗ ನೀಡುವುದು ಮಾತ್ರವಲ್ಲ, ನಮ್ಮ ರೈತರಿಗೆ ಕೃಷಿ ಮಾಹಿತಿ, ಹವಾಮಾನ ವರದಿ ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗದ ಮಾರ್ಗದರ್ಶನ ಸೇರಿದಂತೆ ಹಲವಾರು ಉತ್ತಮವಾದ ಪ್ರಯೋಜನಗಳಿವೆ. ಇದಕ್ಕಾಗಿ ನಾನು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರಿಗೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರಾಜ್ಯ ಸಚಿವ ಡಾ. ಎಲ್.ಮುರುಗನ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ನೂತನ ಉನ್ನತೀಕರಣಗೊಂಡ ಎಫ್.ಎಂ ಕೇಂದ್ರದಿಂದ ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಸೇರಿದಂತೆ ಹತ್ತಿರದ ಜಿಲ್ಲೆಗಳ ಲಕ್ಷಾಂತರ ಕೇಳುಗರಿಗೆ ಲಾಭವಾಗಲಿದೆ.