ಆಸ್ಪತ್ರೆಗೆ ತಲುಪುವ ಮೊದಲೇ ಇಹಾಲೋಕ ತ್ಯಜಿಸಿದ್ದ 10 ಜನ

| N/A | Published : Jun 05 2025, 02:35 AM IST / Updated: Jun 05 2025, 12:56 PM IST

RCB celebration bengaluru Photo

ಸಾರಾಂಶ

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವ 11 ಮಂದಿ ಪೈಕಿ 10 ಮಂದಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

  ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವ 11 ಮಂದಿ ಪೈಕಿ 10 ಮಂದಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ವೈದೇಹಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ। ಹುಮೇರಾ ಸಯಿದಾ ಮಾತನಾಡಿ, ಆಸ್ಪತ್ರೆಗೆ ಒಟ್ಟು 16 ಮಂದಿ ಗಾಯಾಳುಗಳನ್ನು ಕರೆತಂದಿದ್ದು, ಈ ಪೈಕಿ 4 ಮಂದಿ ಆಸ್ಪತ್ರೆಗೆ ಕರೆ ತಂದಾಗಲೇ ಮೃತಪಟ್ಟಿದ್ದರು. ಎಲ್ಲರೂ ಉಸಿರುಗಟ್ಟುವಿಕೆಯಿಂದಲೇ ಮೃತಪಟ್ಟಿದ್ದಾರೆ. ಉಳಿದ 12 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಒಬ್ಬರಿಗೆ ಮಾತ್ರ ತಲೆಗೆ ಪೆಟ್ಟಾಗಿ ಹೊಲಿಗೆ ಹಾಕಲಾಗಿದೆ ಎಂದು ಹೇಳಿದರು.

ಮೃತಪಟ್ಟಿರುವ ನಾಲ್ಕು ಮಂದಿ ಪೈಕಿ ಮೂವರು ಯುವಕರು ಹಾಗೂ ಒಬ್ಬರು ಯುವತಿ ಇದ್ದಾರೆ. ಯುವತಿ ಮೊದಲ ವರ್ಷದ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ನಾಲ್ಕು ಮಂದಿ ಸಾವಿಗೀಡಾದವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ.

ಇನ್ನು 12 ಮಂದಿ ಗಾಯಾಳುಗಳಲ್ಲಿ ಆಸ್ಪತ್ರೆಯಿಂದ ಯಾವುದೇ ಪೋಷಕರಿಗೂ ಮಾಹಿತಿ ನೀಡಿಲ್ಲ. ಅವರ ಆತಂಕಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಮಾಹಿತಿ ನೀಡಿಲ್ಲ. ಎಲ್ಲರ ಆರೋಗ್ಯವೂ ಸ್ಥಿರವಾಗಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಬೌರಿಂಗ್‌ಗೆ ಬರುವಾಗಲೇ 6 ಮಂದಿ ಸಾವು:

ಬೌರಿಂಗ್‌ ಆಸ್ಪತ್ರೆ ವೈದ್ಯರ ಪ್ರಕಾರ, ಆಸ್ಪತ್ರೆಗೆ ಕರೆ ತಂದಾಗಲೇ ಆರೂ ಮಂದಿ ಮೃತಪಟ್ಟಿದ್ದರು. ಬಹುತೇಕರು ಕಾಲ್ತುಳಿತದಿಂದ ಉಂಟಾಗಿರುವ ಉಸಿರುಗಟ್ಟುವಿಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಮಣಿಪಾಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿರುವ 19 ವರ್ಷದ ಯುವತಿ ಆಸ್ಪತ್ರೆಗೆ ಕರೆತಂದ ಬಳಿಕ ಮೃತಪಟ್ಟಿದ್ದಾರೆಯೇ ಅಥವಾ ಮೊದಲೇ ಮೃತಪಟ್ಟಿದ್ದರೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Read more Articles on