ಸಾರಾಂಶ
ಸಾಲು ಸಾಲು ರಜೆ, ನೆರೆ ರಾಜ್ಯಕ್ಕೆ ಪ್ರವಾಸ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ರಿಸ್ಮಸ್, ಹೊಸ ವರ್ಷಾಚರಣೆ ಸೇರಿ ಸಾಲು, ಸಾಲು ರಜೆ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ನೆರೆ ರಾಜ್ಯದ ಜನತೆ ತಮ್ಮ ಊರುಗಳತ್ತ ಮುಖ ಮಾಡಿದ್ದು, ಬಸ್ ನಿಲ್ದಾಣ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.ಡಿ.23ರಂದು ನಾಲ್ಕನೇ ಶನಿವಾರ, ನಾಡಿದ್ದು ಭಾನುವಾರ, ಸೋಮವಾರ ಕ್ರಿಸ್ಮಸ್ ರಜೆ ಹಾಗೂ ಮಕ್ಕಳಿಗೆ ಹೊಸ ವರ್ಷದವರೆಗೆ ಹಲವು ಶಾಲೆಗಳು ಕ್ರಿಸ್ಮಸ್ ರಜೆ ನೀಡಿರುವ ಹಿನ್ನೆಲೆಯಲ್ಲಿ ಜನತೆ ಊರುಗಳಿಗೆ ತೆರಳಿದರು. ಹಲವರು ಸಾಲು ರಜೆ ಕಾರಣ ಶಬರಿಮಲೆ ಸೇರಿದಂತೆ ವಿವಿಧ ಪ್ರೇಕ್ಷಣಿಯ, ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಿದರು.
10 ಸಾವಿರಕ್ಕೂ ಹೆಚ್ಚು ಟಿಕೆಟ್ ಬುಕ್:ಗೋವಾ, ಕೇರಳ, ಮಹಾರಾಷ್ಟ್ರಕ್ಕೆ ತೆರಳಲು ಆನ್ಲೈನ್ನಲ್ಲಿ ಭರ್ಜರಿಯಾಗಿ ಬುಕ್ ಆಗಿವೆ. ಖಾಸಗಿ ಹಾಗೂ ಕೆಎಸ್ಆರ್ಟಿಸಿ ಸೇರಿದಂತೆ ಮೂರು ರಾಜ್ಯಗಳಿಗೆ ಬೆಂಗಳೂರಿನಿಂದ 400ಕ್ಕೂ ಅಧಿಕ ಬಸ್ಸುಗಳಿಗೆ ಈಗಾಗಲೇ 10 ಸಾವಿರಕ್ಕೂ ಹೆಚ್ಚಿನ ಟಿಕೆಟ್ ಬುಕ್ ಆಗಿವೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಿಂದ ಗೋವಾಕ್ಕೆ 150ಕ್ಕೂ ಅಧಿಕ ಬಸ್ ಸೇವೆಯಿದ್ದು, ಖಾಸಗಿ ಬಸ್ ಹಾಗೂ ಕೆಎಸ್ಆರ್ಟಿಸಿ ಬಸ್ಗಳ ಸುಮಾರು 3000ಕ್ಕೂ ಅಧಿಕ ಟಿಕೆಟ್ ಈಗಾಗಲೇ ಬುಕ್ ಆಗಿವೆ. ಬೆಂಗಳೂರಿಂದ ಕೇರಳಕ್ಕೆ ಅಂದಾಜು 200ಕ್ಕೂ ಅಧಿಕ ಬಸ್ ಸಂಚಾರವಿದ್ದು, ಸುಮಾರು 4000ಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಶಬರಿಮಲೆ ದರ್ಶನಕ್ಕೂ ಹೆಚ್ಚಿನವರು ಟಿಕೆಟ್ ಬುಕ್ ಮಾಡಿದ್ದಾರೆ. ಬೆಂಗಳೂರಿಂದ ಮಹಾರಾಷ್ಟ್ರಕ್ಕೆ 150ಕ್ಕೂ ಅಧಿಕ ಬಸ್ ಸೇವೆಯಿದ್ದು, ಈಗಾಗಲೇ ಸುಮಾರು 3,500ಕ್ಕೂ ಅಧಿಕ ಟಿಕೆಟ್ಗಳು ಮುಂಗಡ ಬುಕ್ ಆಗಿವೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.---