ಸಾರಾಂಶ
ಕನ್ನಡ ಪ್ರಭ ವಾರ್ತೆ ಕನಕಪುರ
ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ರಾಜ್ಯ ಹಾಗೂ ದೇಶದ ಜನರಿಗೆ ತಪ್ಪು ಸಂದೇಶ ನೀಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ 100 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ತಮ್ಮ ವಿರುದ್ಧ ಹುರುಳಿಲ್ಲದ ಆರೋಪ ಮಾಡಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನಗರದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಪ್ರಧಾನ ನ್ಯಾಯಧೀಶರ ಮುಂದೆ ಖುದ್ದು ಹಾಜರಾಗಿ ದೂರು ದಾಖಲಿಸಿದ ನಂತರ ನ್ಯಾಯಲಯದ ಹೊರ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಎಲುಬಿಲ್ಲದ ನಾಲಗೆ ಎಂಬಂತೆ ಶಾಸಕ ಯತ್ನಾಳ್ ರವರು ನನ್ನ ಮೇಲೆ ಇದ್ದ ಸಿಬಿಐ, ಐಟಿ ಸೇರಿದಂತೆ ಹಲವು ಪ್ರಕರಣದ ತನಿಖೆ ಕೈ ಬಿಡುವಂತೆ ಕೇಂದ್ರ ಸರ್ಕಾರದ ಕೆಲ ಸಚಿವರ ಜೊತೆ ಮಾತುಕತೆ ನಡೆಸಿ ಒತ್ತಡ ಹಾಕಿದ್ದಾಗಿ ಹೇಳಿಕೆ ನೀಡುವ ಮೂಲಕ ನನ್ನ ಗೌರವ, ಘನತೆಗೆ ದಕ್ಕೆ ತಂದ ಹಿನ್ನೆಲೆಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಮುಖ್ಯ ನ್ಯಾಯಮೂರ್ತಿಗಳು ಸ್ಥಳೀಯ ನ್ಯಾಯಲಯದಲ್ಲಿ ದೂರು ದಾಖಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಅವರ ವಿರುದ್ಧ 100 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ಹೂಡಿ ಒಂದು ಕೋಟಿ ರುಪಾಯಿ ಶುಲ್ಕವನ್ನು ನ್ಯಾಯಾಲಯಕ್ಕೆ ಕಟ್ಟಿರುವುದಾಗಿ ತಿಳಿಸಿದರು.ಇದು ನನ್ನ ಎರಡನೇ ಮಾನನಷ್ಟ ಮೊಕದ್ದಮೆಯ ದೂರು ಆಗಿದ್ದು ಮೊದಲು ಟಿವಿ 9 ಮಾಧ್ಯಮದ ಮೇಲೆ ನೀಡಿದ್ದು ಈಗ ಶಾಸಕ ಯತ್ನಾಳ್ ಮೇಲೆ ನೀಡಿರುವುದಾಗಿ ತಿಳಿಸಿದರು. ಸಾರ್ವಜನಿಕ ಜೀವನದಲ್ಲಿರುವ ಹಾಗೂ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಯತ್ನಾಳ್ ಅವರು ತಮಗೆ ಇಷ್ಟ ಬಂದ ರೀತಿಯಲ್ಲಿ ಮಾತನಾಡಿರುವುದು ಇಡೀ ನಾಡೇ ನೋಡಿರುವುದರಿಂದ ದೂರು ದಾಖಲಿಸಿರುವುದಾಗಿ ತಿಳಿಸಿದರು.ಆರ್ಸಿಬಿ ತಂಡಕ್ಕೆ ಅಭಿನಂದನೆ:ಹದಿನೆಂಟು ವರ್ಷಗಳ ಬಳಿಕ ನಮ್ಮ ಆರ್ಸಿಬಿ ತಂಡ ಗೆಲವನ್ನು ದಾಖಲಿಸಿರುವುದಕ್ಕೆ ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಡಿಸಿಎಂ ಡಿಕೆಶಿ ಆರ್ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವುದು ತಪ್ಪಲ್ಲದಿದ್ದರೂ ಇದರಿಂದ ಯಾರಿಗೂ ತೊಂದರೆ ಆಗದಂತೆ ಸಂಭ್ರಮಿಸುವಂತೆ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಆರ್ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ. ಶ್ರೀ ಕಂಠ ಸೇರಿದಂತೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:ಡಿಸಿಎಂ ಡಿಕೆಶಿ ನಗರದ ಜೆಎಂಎಫ್ಸಿ ನ್ಯಾಯಲಯದಲ್ಲಿ ಶಾಸಕ ಯತ್ನಾಳ್ ವಿರುದ್ಧ ನೂರು ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ಹೂಡಿದರು.