ಶಿರಹಟ್ಟಿ: ಹಿರಿಯ ಶಾಸಕ ಎಚ್.ಕೆ. ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಬೇಕು ಎಂದು ಪ್ರಾರ್ಥಿಸಿ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಮಂಗಳವಾರ ತಾಲೂಕಿನ ಹೊಳಲಮ್ಮ ದೇವಿ ದೇವಸ್ಥಾನದಲ್ಲಿ ೧೦೫ ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಪಕ್ಷದ ಯುವ ಮುಖಂಡ ಫಕೀರೇಶ ಮ್ಯಾಟಣ್ಣವರ, ಡಿ.ಕೆ. ಹೊನ್ನಪ್ಪನವರ, ಚನ್ನಪ್ಪ ಜಗಲಿ ಮಾತನಾಡಿ, ಸರ್ವರ ಪ್ರೀತಿಗೆ ಪಾತ್ರರಾಗಿರುವ ಉತ್ತರ ಕರ್ನಾಟಕದ ಹೆಮ್ಮೆಯ ರಾಜಕಾರಣಿ ಎಚ್.ಕೆ. ಪಾಟೀಲ ಅವರನ್ನು ಮುಂದಿನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಗುರುನಾಥ ದಾನಪ್ಪನವರ, ತಿಪ್ಪಣ್ಣ ಸಂಶಿ ಮಾತನಾಡಿ, ಹೊಳಲಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೂ ಎಚ್.ಕೆ. ಪಾಟೀಲ ಅವರು ಸುಮಾರು ₹೨ ಕೋಟಿ ಅನುದಾನ ನೀಡುವ ಮೂಲಕ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೂ ಕೈಜೋಡಿಸಿದ್ದಾರೆ ಎಂದರು.ಪ್ರಕಾಶ ಹೋರಿ, ರಘು ಶೆಟ್ರಡ್ಡಿ ಮಾತನಾಡಿದರು. ಹಮೀದ್ ಸನದಿ, ನಾಗರಾಜ ಪೋತರಾಜ, ಫಕೀರೇಶ ನಡುನಿನಕೇರಿ, ಚಂದ್ರು ಪೋತರಾಜ ಸೇರಿದಂತೆ ನೂರಾರು ಜನ ಪಕ್ಷದ ಕಾರ್ಯಕರ್ತರು ಇದ್ದರು. ರಜಪೂತ ಪ್ರಾಧಿಕಾರ ಸ್ಥಾಪನೆಗೆ ಒತ್ತಾಯ
ಗದಗ: ರಾಜ್ಯ ಸರ್ಕಾರವು ತಕ್ಷಣವೇ ರಜಪೂತ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ, ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗದಗ-ಬೆಟಗೇರಿ ರಾಜಪೂತ ಸಮಾಜ ಒತ್ತಾಯಿಸಿದೆ. ಈ ಕುರಿತು ರಜಪೂತ ಸಮಾಜದ ವತಿಯಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸಮಾಜದ ಅಧ್ಯಕ್ಷರಾದ ಗಣೇಶ್ ಸಿಂಗ್ ಬ್ಯಾಳಿ ಅವರ ನೇತೃತ್ವದಲ್ಲಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಾಜಪೂತ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಉದ್ಯೋಗ ರಂಗದಲ್ಲಿ ತೀವ್ರವಾಗಿ ಹಿಂದುಳಿದಿದೆ. ನಮ್ಮ ಯುವ ಪೀಳಿಗೆಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗದೇ ಇರುವುದರಿಂದ ಸಮಾಜವು ಇಂದಿಗೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಶ್ರೀದೇವಿ ಸಿಂಗ್ ಬ್ಯಾಳಿ, ಶೇಡುಸಿಂಗ್ ಜಮಾದಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.