ಸಾರಾಂಶ
ಜಿ.ಸೋಮಶೇಖರ
ಕೊಟ್ಟೂರು: ಈ ಬಾರಿಯ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯ ಫಲಿತಾಂಶದಲ್ಲಿ ಕೊಟ್ಟೂರಿನ ಬಜಾರ್ನಲ್ಲಿ ಬೀಗದ ಕೈಗಳನ್ನು ರಿಪೇರಿ ಮಾಡುವ ಬಡ ಕೂಲಿಯ ಮಗಳು ಶಾಲಿನಿ ರಾಜ್ಯಕ್ಕೆ 10ನೇ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾಳೆ.ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಾಲಿನ ಬಡ ಕೂಲಿಕಾರರ ಮಗಳು ಇಲ್ಲಿನ ಜೆಪಿ ನಗರದ ಆಶ್ರಯ ಕಾಲೋನಿಯಲ್ಲಿರುವ ಸಣ್ಣ ಕೋಣೆಯಂತಿರುವ ಮನೆಯಲ್ಲಿಯೇ ತಂದೆ ತಾಯಿಯೊಂದಿಗೆ ಇರುವ ಪ್ರತಿಭಾನ್ವಿತೆ ಶಾಲಿನಿ. ಈ ಸಲದ ಪಿಯುಸಿ ಕಲಾವಿಭಾಗದ ಪರೀಕ್ಷೆಯಲ್ಲಿ ಕನ್ನಡದಲ್ಲಿ 98, ಸಂಸ್ಕೃತ 99, ಐಚ್ಛಿಕ ಕನ್ನಡದಲ್ಲಿ 99, ಇತಿಹಾಸ 96, ರಾಜಕೀಯಶಾಸ್ತ್ರ 97, ಶಿಕ್ಷಣದಲ್ಲಿ 97 ಒಟ್ಟು 600ಕ್ಕೆ 586 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 10ನೇ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.
ಯಾವುದೇ ಬಗೆಯ ವಿಶೇಷ ತರಬೇತಿಯ ನೆರವು ಇಲ್ಲದ ಓದು ಮಾತ್ರ ತನ್ನನ್ನು ಕೈ ಹಿಡಿಯಬಲ್ಲದು ಎಂಬ ಸೂತ್ರವನ್ನು ಮನದಟ್ಟು ಮಾಡಿಕೊಂಡು ಈ ದಿಸೆಯಲ್ಲಿ ದಿನನಿತ್ಯ 5-6 ತಾಸು ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡ ಕಾರಣಕ್ಕಾಗಿ ಫಲಿತಾಂಶದಲ್ಲಿ ಸಾಧನೆ ತೋರಲು ಕಾರಣ ಎಂಬುದನ್ನು ಸಂಕೋಚದಿಂದಲೇ ಶಾಲಿನಿ ಹೇಳಿಕೊಳ್ಳುತ್ತಾಳೆ.ಕೊಟ್ಟೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಇಲ್ಲದ ಕಾರಣಕ್ಕಾಗಿ ಮುಂದಿನ ಪದವಿ ಗಳಿಸಲು ಹರಪನಹಳ್ಳಿ ಅಥವಾ ಕೂಡ್ಲಿಗಿ ಕಾಲೇಜುಗಳಿಗೆ ತೆರಳಿ ಪ್ರವೇಶ ಪಡೆಯುವ ಪ್ರಯತ್ನ ನಡೆಸಿದ್ದಾಳೆ.
ದೊಡ್ಡ ಮಟ್ಟದ ಪದವಿ ಗಳಿಸಬೇಕೆಂಬ ಆಸೆ ಇದೆ. ಆದರೆ ನಮಗಿರುವ ಬಡತನದಿಂದ ಕೇವಲ ಬಿಎ ಪದವಿ, ಅದರಲ್ಲೂ ಸರ್ಕಾರಿ ಕಾಲೇಜಿನಲ್ಲಿ ಅಭ್ಯಸಿಸುವೆ. ಕಾಲೇಜಿನ ಉಪನ್ಯಾಸಕರು ನನ್ನ ಆಶಯಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದ ಕಾರಣಕ್ಕಾಗಿ ಇಷ್ಟು ಅಂಕ ಗಳಿಸಿರುವೆ ಎನ್ನುತ್ತಾರೆ ಪಿಯುಸಿ ದ್ವಿತೀಯ ಕಲಾವಿಭಾಗದ ಟಾಪರ್ ಶಾಲಿನಿ.ಶಾಲಿನಿಗೆ ಅಭ್ಯಾಸ ಮಾಡಲು ಅನುಕೂಲವಾಗಲು ಮಹಾವಿದ್ಯಾಲಯದಲ್ಲಿನ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದೆವು. ಎಲ್ಲ ಅನುಕೂಲಗಳಿದ್ದರೂ ಸಾಧನೆ ತೋರದ ವಿದ್ಯಾರ್ಥಿಗಳ ಮಧ್ಯೆ ಶಾಲಿನಿ ತೋರಿರುವ ಸಾಧನೆ ಮಾದರಿಯಾದದ್ದು ಎನ್ನುತ್ತಾರೆ ಪ್ರಾರ್ಚಾರ ಡಾ.ಜಿ.ಸೋಮಶೇಖರ್.