ಸ್ವಚ್ಛ ಭಾರತ್ ಅಡಿ 12 ಸಾವಿರ ಶೌಚಾಲಯ ನಿರ್ಮಾಣ

| Published : Sep 24 2025, 01:00 AM IST

ಸಾರಾಂಶ

ಮಾಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಯೋಜನೆ ಘೋಷಣೆ ಮಾಡಿದ ಬಳಿಕ ದೇಶಾದ್ಯಂತ 12‌ ಸಾವಿರ ಶೌಚಾಲಯ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಮಾಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಯೋಜನೆ ಘೋಷಣೆ ಮಾಡಿದ ಬಳಿಕ ದೇಶಾದ್ಯಂತ 12‌ ಸಾವಿರ ಶೌಚಾಲಯ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಉಚಿತ ಆಹಾರ ಕಿಟ್‌ ವಿತರಿಸಿ ಮಾತನಾಡಿದ ಅವರು, ನಮ್ಮ ಭಾಗದ ನಗರಗಳು, ಪಟ್ಟಣಗಳು ಸ್ವಚ್ಛವಾಗಿದೆ ಎಂದರೆ ಪೌರಕಾರ್ಮಿಕರ ಶ್ರಮ ನಾವು ಸ್ಮರಿಸಬೇಕು. ಅವರು ಸ್ವಚ್ಛತೆ ಮಾಡುವುದರಿಂದ ನಮ್ಮ ಪರಿಸರ ಸುಂದರವಾಗಿ ಕಾಣಲು ಸಾಧ್ಯ. ಪೌರಕಾರ್ಮಿಕರು ಆರೋಗ್ಯದತ್ತ ಗಮನಹರಿಸಬೇಕು. ಪೌರಕಾರ್ಮಿಕರು ಪ್ರತಿದಿನವೂ ಊಟದ ಮೊದಲು ಸ್ವಚ್ಛವಾಗಿ ಕೈ ತೊಳೆಯಬೇಕು. ಏಕೆಂದರೆ ತಾವು ಮಾಡುವ ಕೆಲಸದಿಂದ ಬ್ಯಾಕ್ಟೀರಿಯಾಗಳು ತಮ್ಮ ಕೈಯಲ್ಲಿ ಇರುತ್ತದೆ. ಇದನ್ನು ಸಾಬೂನು ಅಥವಾ ಸ್ಯಾನಿಟೈಸ್ ಮೂಲಕ ಸ್ವಚ್ಛ ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಮುಂದಿನ ವರ್ಷ ಪೌರಕಾರ್ಮಿಕರ ದಿನದ ಪ್ರಯುಕ್ತ ಬಿಜೆಪಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುತ್ತದೆ. ಸ್ವಚ್ಛತಾ ಆಂದೋಲನಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸ್ವಚ್ಛ ಗಾಳಿ, ನೀರು, ಆಹಾರ ಸೇವಿಸಬೇಕು. ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾದಂತಹ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕೋವಿಡ್ ನಮಗೆ ದೊಡ್ಡ ಪಾಠ ಕಲಿಸಿದೆ. ಪೌರಕಾರ್ಮಿಕರು ಸ್ವಚ್ಛತೆಯ ರಾಯಭಾರಿಗಳಾಗಿದ್ದು ಪೌರಕಾರ್ಮಿಕರ ಹುದ್ದೆ ದೊಡ್ಡದಲ್ಲದಿದ್ದರೂ ಶ್ರಮ ದೊಡ್ಡದು ಎಂದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್‌ಗೌಡ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪುರಸಭಾ ವ್ಯಾಪ್ತಿಯ ಎಲ್ಲಾ ಪೌರಕಾರ್ಮಿಕರಿಗೂ ಉಚಿತವಾಗಿ ಆಹಾರ ದಿನಕ್ಕೆ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಘವೇಂದ್ರ, ಮುಖಂಡರಾದ ರಾಜೇಶ್, ಸ್ವಾಮಿ, ವೀರಭದ್ರಪ್ಪ, ಭಾಸ್ಕರ್‌ ಪುರಸಭಾ ಸಿಬ್ಬಂದಿ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ಪುರಸಭೆ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಂಸದ ಡಾ. ಮಂಜುನಾಥ್ ಅವರು ಉಚಿತ ದಿನಸಿ ಕಿಟ್ ವಿತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಘವೇಂದ್ರ ಇತರರಿದ್ದರು.