ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಭೀಮನಗರ ಬಡಾವಣೆಯಲ್ಲಿ ಫೆ.13ರಂದು ಲಕ್ಷ್ಮೀ ನಾರಾಯಣಸ್ವಾಮಿಯ ರಥೋತ್ಸವದ ಪ್ರಯುಕ್ತ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಇತ್ತೀಚೆಗೆ ಕರೆಯಲಾಗಿದ್ದ ಭೀಮನಗರದ ಕುಲಸ್ಥರು, ಯಜಮಾನರ ಸಭೆಯಲ್ಲಿ ನಿರ್ಣಯಿಸಲಾಗಿದೆ. ಭೀಮನಗರದ ಶ್ರೀ ಬಸವನಗುಡಿ ದೇವಸ್ಥಾನದಲ್ಲಿ ಸಮಸ್ತ ಕುಲಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ ಯಜಮಾನರು, ಮುಖಂಡರು ಹಿಂದಿನ ಸಂಪ್ರದಾಯದಂತೆ ಈ ಬಾರಿಯೂ ಬಡಾವಣೆಯ ವಿವಿದ ಬೀದಿಗಳಲ್ಲಿ ವಿದ್ಯುತ್ ದೀಪಾಲಕಾಂರದೊಂದಿಗೆ ಪುಷ್ಪಾಲಂಕೃತ, ಹಸಿರು ಚಪ್ಪರ ನಿರ್ಮಿಸಿ, ಮಂಗಳವಾದ್ಯ ಸಮೇತ 2 ದಿನಗಳ ಕಾಲ ವಿವಿಧೆಡೆಗಳಿಂದ ಬಂಧು-ಬಳಗದವರನ್ನು ಆಹ್ವಾನಿಸಿ ವಿಜೃಂಭಣೆಯಿಂದ ತೇರಿನ ಹಬ್ಬ ಆಚರಿಸಲು ನಿರ್ಣಯ ಕೈಗೊಂಡರು.ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಫೆ.13 ರಂದು ಶ್ರೀಸ್ವಾಮಿಯ ದಿವ್ಯ ರಥೋತ್ಸವ ಜರುಗಲಿದ್ದು, ಭೀಮನಗರ ಬಡಾವಣೆಯ ಭಕ್ತರು ಶ್ರದ್ಧಾಭಕ್ತಿಯಿಂದ ದಿವ್ಯ ರಥೋತ್ಸವದಲ್ಲಿ ಪಾಲ್ಗೊಳ್ಳುವುದು. ನಂತರ ಫೆ.13 ಮಧ್ಯಾಹ್ನ ಹಾಗೂ ಫೆ.14 ರಂದು ದಿನವಿಡಿ ಮೈಕ್ಸೆಟ್ ವಾದನದೊಂದಿಗೆ ಹರ್ಷ ಚಿತ್ತದಿಂದ ಹಬ್ಬ ಆಚರಿಸಲು ಸಭೆಯಲ್ಲಿ ನೆರೆದಿದ್ದ ಕುಲಸ್ಥರಿಂದ ಒಕ್ಕೊರಲಿನಿಂದ ಸಮ್ಮತಿಸಿದರು. ಈ ನಡುವೆ ಪೊಲೀಸ್ ಇಲಾಖೆಯ ಕಾನೂನು ಕಟ್ಟಲೆಗಳನ್ನು ಅಳವಡಿಸಿಕೊಂಡು ಇತರ ಜನಾಂಗದೊಂದಿಗೆ ಕೋಮು ಸೌಹಾರ್ದತೆಯಿಂದ ಆಚರಿಸಲು ಯಜಮಾನರ ಸಮ್ಮುಖದಲ್ಲಿ ಒಪ್ಪಿಗೆ ದೊರೆಯಿತು. ಹಬ್ಬದ ಸಮಯದಲ್ಲಿ ಯಾವುದೇ ವಿಚಾರಕ್ಕೂ ಗೊಂದಲ, ಗದ್ದಲ ಹಾಗೂ ಗಲಾಟೆ ಉಂಟು ಮಾಡಿಕೊಳ್ಳುವಂತಿಲ್ಲ. ಹಾಗೊಂದು ವೇಳೆ ಯಜಮಾನರು ಹಾಗೂ ಪೊಲೀಸ್ ಇಲಾಖೆಯ ನಿಯಮ ಉಲ್ಲಂಘಿಸಿದವರ ವಿರುದ್ಧ ಸಾಂಪ್ರಾದಾಯಕ ಮತ್ತು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಭೆ ನಿರ್ಣಯಕೈಗೊಂಡಿತು. ಈ ವೇಳೆ ಭೀಮನಗರದ ಪ್ರಧಾನ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ಕುಮಾರ್, ನಾಗೇಶ್, ಎಸ್.ರಾಜಶೇಖರಮೂರ್ತಿ, ಸನತ್ ಕುಮಾರ್, ಎಂ.ಪಾಪಣ್ಣ, ಶಿವಪ್ಪ, ಲಿಂಗರಾಜು, ಮಾಜಿ ಯಜಮಾನರಾದ ನಟರಾಜ್, ಪಿ.ಸೋಮಶೇಖರ್, ಎಂ.ಜಗದೀಶ್, ಎಂ.ವರದರಾಜು, ಶಿವರಾಳ, ಮಹಾದೇವಸ್ವಾಮಿ, ಪುಟ್ಟಸ್ವಾಮಿ, ಮುಖಂಡರಾದ ಎಂ.ಗುರುಮೂರ್ತಿ, ಸುದೀಪ್, ಕಿರಣ್, ದಿಕ್ಷೀತ್, ಕೆ.ರಾಜೇಶ್ ಇನ್ನಿತರರು ಇದ್ದರು.