ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರ ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿರುವುದು ಕ್ರಿಯಾಶೀಲ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ವೀಣಾ ಹೇಳಿದರು.ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇರೆ ಎಲ್ಲಾ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆಯಲ್ಲಿ 14000 ಮಕ್ಕಳು ಬೇಸಿಗೆ ಶಿಬಿರಕ್ಕೆ ನೋಂದಣಿ ಮಾಡಿಕೊಂಡಿದ್ದರು. ಮಂಡ್ಯ ತಾಲೂಕಿನಲ್ಲಿ 4000 ಮಕ್ಕಳು ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ನೋಂದಣಿಯಾಗಿದ್ದು ಸಂತಸ ತಂದಿದೆ ಎಂದು ನುಡಿದರು.ನಗರ ಪ್ರದೇಶಗಳಲ್ಲಿ ಮಾತ್ರ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದನ್ನು ಸರ್ಕಾರ ಗಮನಿಸಿ ಗ್ರಾಮೀಣ ಮಕ್ಕಳಿಗೆ ವಿಸ್ತರಿಸಿರುವುದು ಉತ್ತಮ ಬೆಳವಣಿಗೆ. ಕೀಲಾರ ಗ್ರಾಮ ಪಂಚಾಯ್ತಿ ಬಹಳ ವಿಶಿಷ್ಟ ರೀತಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅತ್ಯುತ್ತಮ ತರಬೇತಿ ನೀಡಿ ಅದ್ಧೂರಿಯಾಗಿ ಆಚರಿಸಿದ್ದಾರೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಆರ್.ಶಿವಶಂಕರ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಗಣಿತ, ಸಾಂಸ್ಕೃತಿಕ ನೃತ್ಯ, ಜನಪದ ಗೀತೆಗಳು, ಮೂಕಾಭಿನಯ, ಗ್ರಾಮೀಣ ಕ್ರೀಡೆ, ಮೂಲ ಸಂಪ್ರದಾಯ, ಕ್ಷೇತ್ರ ಭೇಟಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ ಹೀಗೆ ಅನೇಕ ರೀತಿಯ ವಿವಿಧ ಚಟುವಟಿಕೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬೇಸಿಗೆ ಶಿಬಿರಕ್ಕೆ ಒಂದು ಹೆಸರು ತಂದುಕೊಟ್ಟಂತಾಗಿತ್ತು ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪೂರ್ಣಿಮಾ, ಸದಸ್ಯರು, ಸಿಬ್ಬಂದಿವರ್ಗ, ಎಸ್ಡಿಎಂಸಿ ಅಧ್ಯಕ್ಷ ರಮೇಶ್, ಶಿಕ್ಷಕ ರಾಜು, ಹಾಸ್ಯ ನಟ ವಿನೋದ್ ಗೊಬ್ಬರಗಾಲ, ಡಾ.ಮುರಳಿ, ದೇವಾನಂದ ವರಪ್ರಸಾದ್, ವಿಜಿ ಕೀಲಾರ, ಗ್ರಾಮದ ಹಿರಿಯ ಮುಖಂಡರು ಭಾಗವಹಿಸಿದ್ದರು.
ಇಂದು ವಿದ್ಯುತ್ ವ್ಯತ್ಯಯಮಂಡ್ಯ: 66/11 ಕೆ.ವಿ ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬ್ರೇಕರ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿತರಣಾ ಕೇಂದ್ರದಲ್ಲಿ ಹೊರಡುವ ನೆಹರುನಗರ, ಗುತ್ತಲು, ವೆಲ್ಸ್ಫನ್ ಮಾರ್ಗಗಳಲ್ಲಿ ಜೂನ್ 3 ರಂದು ಬೆಳಗ್ಗೆ 9 ರಿಂದ 10 ಮತ್ತು ಸಂಜೆ 5 ರಿಂದ 6 ರ ವರೆಗೆ ವಿದ್ಯುತ್ನಲ್ಲಿ ವ್ಯತ್ಯಯವಾಗಲಿದೆ. ನಗರ ಪ್ರದೇಶದ ಫ್ಯಾಕ್ಟರಿ ಸರ್ಕಲ್, ಗುತ್ತಲು ರಸ್ತೆ, ಅರ್ಕೇಶ್ವರ ನಗರ, ಸಾಹುಕಾರ್ ಚನ್ನಯ ಬಡಾವಣೆ, ಸಾದತ್ ನಗರ, ಇಂದಿರಾ ಕಾಲೋನಿ, ವಿ.ವಿ.ಪುರಂ, ನೆಹರು ನಗರ, ಉದಯಗಿರಿ, ಲೇಬರ್ ಕಾಲೋನಿ, ಹಾಲನಹಳ್ಳಿ ಕೆರೆ, ಇಂಡಸ್ಟ್ರಿಯಲ್ ಏರಿಯಾ ಹಂತ-1 , ಹಂತ-2 ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.ನಾಳೆ ವಿದ್ಯುತ್ ವ್ಯತ್ಯಯ
ಮಂಡ್ಯ: ತಾಲೂಕಿನ ಕೋಲಕಾರನದೊಡ್ಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಜೂನ್ 4 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ವಿತರಣ ಕೇಂದ್ರ ವ್ಯಾಪ್ತಿಯ ತಗ್ಗಹಳ್ಳಿ, ಕೋಲಕಾರನದೊಡ್ಡಿ, ಹೆಮ್ಮಿಗೆ, ಸೂನಗನಹಳ್ಳಿ, ಪುರ, ಲೋಕಸರ, ಹಳುವಾಡಿ, ಕಮ್ಮನಾಯಕನಹಳ್ಳಿ, ಟಿ. ಮಲ್ಲಿಗೆರೆ, ಕಬ್ಬನಹಳ್ಳಿ, ತಿಮ್ಮನಹೊಸೂರು, ಬಿ.ಹೊಸೂರು, ಗೋಪನಹಳ್ಳಿ ಯಡಗನಹಳ್ಳಿ, ಮಾದರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಂಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.