ಕೆನರಾ ಬ್ಯಾಂಕ್‌ ಕಳ್ಳತನ ಪ್ರಕರಣ 15 ಆರೋಪಿಗಳ ಬಂಧನ

| Published : Oct 10 2025, 01:02 AM IST

ಕೆನರಾ ಬ್ಯಾಂಕ್‌ ಕಳ್ಳತನ ಪ್ರಕರಣ 15 ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮೇ 23ರಂದು ಮನಗೂಳಿಯ ಕೆನರಾ ಬ್ಯಾಂಕ್‌ ಕಳ್ಳತನ ಪ್ರಕರಣದಲ್ಲಿ ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾನೂನು ಹಾಗೂ ಸುವ್ಯವಸ್ಥೆ ಎಡಿಜಿಪಿ ಆರ್‌.ಹಿತೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೇ 23ರಂದು ಮನಗೂಳಿಯ ಕೆನರಾ ಬ್ಯಾಂಕ್‌ ಕಳ್ಳತನ ಪ್ರಕರಣದಲ್ಲಿ ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾನೂನು ಹಾಗೂ ಸುವ್ಯವಸ್ಥೆ ಎಡಿಜಿಪಿ ಆರ್‌.ಹಿತೇಂದ್ರ ಹೇಳಿದರು.

ನಗರದ ಚಿಂತನಾ ಹಾಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೆನರಾ ಬ್ಯಾಂಕ್‌ನಲ್ಲಿದ್ದ ₹ 53.26 ಕೋಟಿ ಮೌಲ್ಯದ 58.97 ಕೆ.ಜಿ ಚಿನ್ನಾಭರಣ ಹಾಗೂ ₹ 5.20 ಲಕ್ಷ ಸೇರಿ ಒಟ್ಟು ₹ 53.31 ಕೋಟಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣದಲ್ಲಿ ಒಟ್ಟು 15 ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 39 ಕೆಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳನ್ನು ಮತ್ತು ₹ 1.16 ಕೋಟಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿ ಒಟ್ಟು ₹ 39.26 ಕೋಟಿ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ನ್ಯಾಯಾಧೀಶರ ಮನೆ ಕಳ್ಳತನ ಪ್ರಕರಣ:

ಆ.8ರಂದು ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆಯ ಬೀಗ ಮುರಿದು ₹ 30.14 ಲಕ್ಷ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಮೂವರು ಆರೋಪಿಗಳಾದ ಸುನೀಲ ರಜಪೂತ, ಚೇತನ ಲಮಾಣಿ, ರಾಹುಲ ಲಮಾಣಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 250 ಗ್ರಾಂ ಚಿನ್ನಾಭರಣ, 50 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 2 ಕಾರ್‌, 2 ಬೈಕ್‌, 4 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉತ್ತರ ವಲಯ ಐಜಿಪಿ ಚೇತನ್‌ಸಿಂಗ್ ರಾಠೋಡ, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.