ಗುಡ್ಡದಹಟ್ಟಿಗೆ ಮೂಲಸೌಕರ್ಯ ಕಲ್ಪಿಸಲು 15 ದಿನ ಗಡುವು

| Published : Aug 29 2024, 12:55 AM IST

ಸಾರಾಂಶ

ಮಾಯಕೊಂಡ ಮೀಸಲು ಕ್ಷೇತ್ರದ ವ್ಯಾಪ್ತಿಯ, ದಾವಣಗೆರೆ ತಾಲೂಕಿನ ಗುಡ್ಡದಹಟ್ಟಿ (ಶ್ರೀರಂಗಯ್ಯನ ಮಟ್ಟಿ) ಗ್ರಾಮಕ್ಕೆ ಮೂಲಸೌಕರ್ಯ, ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಎಚ್.ಮಂಜುನಾಥ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ಮೀಸಲು ಕ್ಷೇತ್ರದ ವ್ಯಾಪ್ತಿಯ, ದಾವಣಗೆರೆ ತಾಲೂಕಿನ ಗುಡ್ಡದಹಟ್ಟಿ (ಶ್ರೀರಂಗಯ್ಯನ ಮಟ್ಟಿ) ಗ್ರಾಮಕ್ಕೆ ಮೂಲಸೌಕರ್ಯ, ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಎಚ್.ಮಂಜುನಾಥ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಗುಡ್ಡದಹಟ್ಟಿ ಗ್ರಾಮವೂ ಎಲ್ಲ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮಕ್ಕೆ ಬಸ್‌ ವ್ಯವಸ್ಥೆ ಇಲ್ಲದೇ, ತೊಂದರೆಯಾಗಿದೆ. 3-4 ಕಿಮೀನಷ್ಟು ದೂರ ಗುಡ್ಡಗಾಡು ಪ್ರದೇಶದಲ್ಲಿ ಕಾಲ್ನಡಿಗೆಯಲ್ಲೇ ಗ್ರಾಮಸ್ಥರು ಸಾಗಬೇಕಾದ ದುಸ್ಥಿತಿ ಇದೆ. ವಿದ್ಯಾರ್ಥಿಗಳು, ಅನಾರೋಗ್ಯಪೀಡಿತರು, ಗರ್ಭಿಣಿ, ಬಾಣಂತಿಯರು, ವಿಕಲಚೇತನರು, ವಯೋವೃದ್ಧರಿಗೆ ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಗುಡ್ಡದಹಟ್ಟಿ ಗ್ರಾಮಕ್ಕೆ ಸೌಕರ್ಯಗಳ ಕಲ್ಪಿಸುವಂತೆ ಸಾಕಷ್ಟು ಸಲ ಮನವಿ ಮಾಡಿದ್ದೇವೆ. ಆದರೆ, ಸೌಜನ್ಯಕ್ಕೂ ಸ್ಪಂದಿಸಿಲ್ಲ ಎಂದು ದೂರಿದರು.

ಗುಡ್ಡದಹಟ್ಟಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವಾಗಲೀ, ಚರಂಡಿ, ಒಳಚರಂಡಿ ಸೌಲಭ್ಯವಾಗಲೀ ಇಲ್ಲ. ರಸ್ತೆ ಸಹ ಇಲ್ಲದ ಸ್ಥಿತಿ ಇದೆ. ಸಮಸ್ಯೆಗಳ ಆಗರವಾದ ಗುಡ್ಡದಹಟ್ಟಿ ಗ್ರಾಮಸ್ಥರು ನಲುಗುತ್ತಿದ್ದಾರೆ. ತಕ್ಷಣವೇ ಅಲ್ಲಿನ ಸ್ಥಳೀಯ ಆಡಳಿತವು ಮೂಲಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು. ಕಾನೂನು ಸೇವಾ ಪ್ರಾಧಿಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಘಟಕಕ್ಕೂ ಈಗಾಗಲೇ ಡಿಎಸ್ಸೆಸ್‌ನಿಂದ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಹಾಗೂ ಜಿಪಂ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. 15 ದಿನಗಳೊಳಗೆ ಗ್ರಾಮಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.