ಸಿ.ಕೆ. ನಾಗರಾಜ
ಹೊಸಪೇಟೆ: ಶಾಲಾ ಮಕ್ಕಳ ಬೇಸಿಗೆ ರಜೆ ಪೂರ್ಣಗೊಂಡಿದೆ. ಕಳೆದ ಎರಡು ತಿಂಗಳು ಆಟೋಟ, ಊರು, ಸಂಬಂಧಿಕರ ಮನೆ ಎಂದು ಖುಷಿಯಿಂದ ಊರು ಸಂಚಾರ ಮಾಡಿದ ಮಕ್ಕಳು ಜೂನ್ 1ರಂದು ಸೋಮವಾರದಿಂದ ಶಾಲೆಗಳು ಪ್ರಾರಂಭವಾಗಲಿವೆ.ಖಾಸಗಿ ಶಾಲೆಗಳು ಈಗಾಗಲೇ ಆರಂಭವಾಗಿವೆ. ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳು ಸೋಮವಾರದಿಂದ ಆರಂಭವಾಗಲಿವೆ. ಶಾಲೆಗೆ ಮಕ್ಕಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸಕಲ ಸದ್ದತೆಗಳನ್ನು ಈಗಾಗಲೇ ಮಾಡಿಕೊಂಡಿದೆ.
ಶಾಲಾ ಪ್ರಾರಂಭೋತ್ಸವದ ಸಿದ್ಧತೆಗಳಾದ ಶಾಲೆಯ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯುವ ನೀರು, ಶೌಚಾಲಯಗಳನ್ನು ಸುಸ್ಥಿತಿಯಲ್ಲಿರುವಂತೆ ವ್ಯವಸ್ಥೆಗೊಳಿಸುವುದು. ಶಾಲೆಯನ್ನು ತಳಿರು- ತೋರಣಗಳಿಂದ ಸಿಂಗರಿಸುವುದು, ಮಕ್ಕಳಿಗೆ ಸಿಹಿ ಊಟದ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಮುಂದಾಗಿದ್ದಾರೆ. ಶಾಲಾ ಆರವಣದಲ್ಲಿ ರಂಗೋಲಿ ಹಾಕಿ, ಹೂವುಗಳಿಂದ ಅಲಂಕರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಸಹ ಪುಸ್ತಕ ಹಿಡಿದು ಶಾಲೆಗೆ ಹೊರಡಲು ಅಣಿಯಾಗಿದ್ದಾರೆ.ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಾತಿ ಮಾಡುವಂತೆ ಆಂದೋಲನ ಸಹ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಕರಪತ್ರಗಳನ್ನು ಹಾಕಿಸಿ, 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಸರ್ಕಾರಿ ಶಾಲೆಯಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ಕರಪತ್ರಗಳನ್ನು ಮತ್ತು ಬ್ಯಾನರ್ಗಳನ್ನು ಹಾಕಿಸುವ ಮೂಲಕ ಸರ್ಕಾರಿ ಶಾಲೆಗೆ ಸೇರಿಸಲು ಪೊಷಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ 1612 ಶಾಲೆಗಳಲ್ಲಿ 1254 ಪ್ರಾಥಮಿಕ ಶಾಲೆಗಳು, 324 ಪ್ರೌಢಶಾಲೆಗಳು, 34 ಇತರೆ ಶಾಲೆಗಳಿವೆ. ಇದರಲ್ಲಿ 944 ಸರ್ಕಾರಿ ಪ್ರಾಥಮಿಕ ಶಾಲೆಗಳು, 123 ಸರ್ಕಾರಿ ಪ್ರೌಢಶಾಲೆಗಳು, 48ಅನುದಾನಿತ ಪ್ರಾಥಮಿಕ ಶಾಲೆಗಳು, 64 ಅನುದಾನಿತ ಪ್ರೌಢ ಶಾಲೆಗಳು, 262 ಅನುದಾನ ರಹಿತ ಶಾಲೆಗಳು ಹಾಗೂ 137 ಅನುದಾನ ರಹಿತ ಪ್ರೌಢಶಾಲೆಗಳು, 27 ಸಮಾಜ ಕಲ್ಯಾಣ ಇಲಾಖೆಯ (6-10) 1 ನವೋದಯ ಶಾಲೆ, 1 ಕೇಂದ್ರೀಯ ವಿದ್ಯಾಲಯ, 5 ಅಲ್ಪಸಂಖ್ಯಾತ (ಇತರೆ ಇಲಾಖೆ ಶಾಲೆಗಳು) ಜಿಲ್ಲೆಯಲ್ಲಿ ಶಾಲೆಗಳು ಇದ್ದು, ಈ ಶಾಲೆಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಪಠ್ಯಪುಸ್ತಕಗಳು ಮತ್ತು ಸಮವಸ್ತ್ರ ಸರಬರಾಜು:
ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಬಹುತೇಕ ಪಠ್ಯಪುಸ್ತಕಗಳು ಶಾಲೆಗಳಿಗೆ ವಿತರಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಕೆಲ ಪುಸ್ತಕಗಳನ್ನು ಹೊರತುಪಡಿಸಿ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳು ಲಭ್ಯವಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ಶಾಲೆಗಳ ಪುನರಾರಂಭಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಆಯಾ ಶಾಲಾ ಮುಖ್ಯಗುರುಗಳಿಗೆ ತಿಳಿಸಲಾಗಿದೆ. ಮಕ್ಕಳನ್ನು ಸಂತೋಷದಿಂದ ಮತ್ತು ಸಂಭ್ರಮದೊಂದಿಗೆ ಹಬ್ಬದ ವಾತಾವರಣದೊಂದಿಗೆ ಮಕ್ಕಳಿಗೆ ಸಿಹಿಯೊಡನೆ ಶಾಲೆಗೆ ಬರಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ.