ಡಂಬಳ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ನಡೆಯಿತು. 175 ಅರ್ಜಿಗಳು ಸಲ್ಲಿಕೆಯಾದವು.

ಡಂಬಳ: ವಿವಿಧ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಸದುದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವಾ ಅಭಿಯಾನದ ಸಂಪೂರ್ಣ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಯರ್ರಿಸ್ವಾಮಿ ಪಿ.ಎಸ್‌. ಹೇಳಿದರು.

ಇಲ್ಲಿಯ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಗದಗ, ಮುಂಡರಗಿ ತಾಲೂಕು ಆಡಳಿತ, ಡಂಬಳ ಗ್ರಾಪಂ ಹಾಗೂ‌ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು. ಪಿಂಚಣಿ, ಪಹಣಿ, ಪಡಿತರ ಚೀಟಿ, ಕಂದಾಯ, ವಿದ್ಯುತ್, ಕುಡಿಯುವ ನೀರು, ಚರಂಡಿ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳು ಮತ್ತು ದೂರುಗಳನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಯಾವ ಇಲಾಖೆಗೆ ಸಲ್ಲಿಕೆಯಾಗಿದೆಯೋ ಆ ಇಲಾಖೆಗಳಿಗೆ ಕಳುಹಿಸಿ ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ, ಬಿ.ಒ. ಗಂಗಾಧರ ಅಣ್ಣಿಗೇರಿ ಮಾತನಾಡಿ, ಪ್ರಜಾಸೇವಾ ಅಭಿಯಾನದ ಮೂಲಕ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದು ಸರ್ಕಾರಿ ಕಚೇರಿಗಳ ಅಲೆದಾಟ ಕಡಿಮೆ ಮಾಡುವುದು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಡಂಬಳ ಹೋಬಳಿಯ ಎಲ್ಲ ಗ್ರಾಮಗಳ ಸಾರ್ವಜನಿಕರಿಂದ 175 ಅರ್ಜಿಗಳು ಸಲ್ಲಿಕೆಯಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರಜಾತಿ ವಿವಾಹವಾದ ದಂಪತಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದಡಿ ಅಂತರಜಾತಿ ವಿವಾಹವಾದ ಜಂತ್ಲಿ ಶಿರೂರ ಗ್ರಾಮದ ರವಿ ಕೋಟೆಪ್ಪ ಹೊಸಮನಿ ಮತ್ತು ರಕ್ಷಿತಾ ದಂಪತಿಗೆ ₹1.50 ಲಕ್ಷ ಮೊತ್ತದ ಠೇವಣಿ ಬಾಂಡ್ ವಿತರಣೆ ಮಾಡಲಾಯಿತು. ಅಲ್ಲದೆ ಅಂಗವಿಕಲರ ಮಾಸಾಶನ, ವೃದ್ಧಾಪ್ಯವೇತನ ಸ್ಥಳದಲ್ಲಿ ಮಂಜುರಾತಿ ಪತ್ರ ನೀಡಲಾಯಿತು.

ಆಶ್ರಯ ಮನೆ ಮಂಜೂರು, ಡಂಬಳ ಎಪಿಎಂಸಿಯಲ್ಲಿ ವಿದ್ಯುತ್ ದೀಪ ಅಳವಡಿಸುವುದು, ಎಪಿಎಂಸಿ ರಸ್ತೆಗೆ ಹೊಂದಿಕೊಂಡಿರುವ ಸಿದ್ಧಲಿಂಗಪ್ಪ ಪ್ಲಾಟ್‌ಗೆ ಹೋಗುವ ರಸ್ತೆಯಲ್ಲಿರುವ ಕಂಬಗಳಿಗೆ ಬೀದಿದೀಪ ಅಳವಡಿಸುವುದು, ಚರಂಡಿ, ಸಿಸಿ ರಸ್ತೆ ನಿರ್ಮಾಣ, ನೂತನ ಕೆರೆ ನಿರ್ಮಾಣ, ಸಾರ್ವಜನಿಕ ಶೌಚಾಲಯಕ್ಕೆ ಅರ್ಜಿ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಮನವಿಗಳು ಬಂದವು.

ಮುಂಡರಗಿ ಉಪತಹಸೀಲ್ದಾರ್‌ ಬಿ.ಎಸ್. ಕನ್ನೂರ, ಇಒ ವಿಜಯಕುಮಾರ ಬೆಣ್ಣಿ, ತೋಟಗಾರಿಕೆ ಹಿರಿಯ ಅಧಿಕಾರಿ ಮಹಮ್ಮದರಫೀಕ ತಾಂಬೋಟಿ, ಡಂಬಳ ಉಪತಹಸೀಲ್ದಾರ್‌ ಎಸ್.ಎಸ್. ಬಿಚಾಲಿ, ಮುಂಡರಗಿ ಅರಣ್ಯ ವಲಯ ಅಧಿಕಾರಿ ಮಂಜುನಾಥ ಮೇಗಲಮನಿ, ಪಶುವೈದ್ಯಾಧಿಕಾರಿ ಡಾ. ಎಸ್.ವಿ. ತಿಗರಿಮಠ, ಉಪತಹಸೀಲ್ದಾರ್‌ ಚಿದಾನಂದ ಬುಳವಟಗಿ, ಕಾರ್ಯಪಾಲಕ ಅಭಿಯಂತರರು ನಾಗೇಂದ್ರ ಪಟ್ಟಶೆಟ್ಟರ್, ಸಿಪಿಐ ಐಯನಗೌಡ ಪಾಟೀಲ್ , ಡಂಬಳ ಗ್ರಾಪಂ ಆಡಳಿತಾಧಿಕಾರಿ ಗುರುರಾಜ ಚವ್ಹಾಣ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ ಇದ್ದರು.