ವೆನ್ಲಾಕ್‌, ಲೇಡಿಗೋಷನ್‌ ಸರ್ಕಾರಿ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆ

| Published : Sep 24 2025, 01:02 AM IST

ವೆನ್ಲಾಕ್‌, ಲೇಡಿಗೋಷನ್‌ ಸರ್ಕಾರಿ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಫಾದರ್‌ ಮುಲ್ಲರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಭಾನುವಾರ ವೆನ್ಲಾಕ್‌, ಲೇಡಿಗೋಷನ್‌ ಮತ್ತು ಕೆ.ಎಂ.ಸಿ ಆಸ್ಪತ್ರೆಗಳ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಹಾಗೂ ವೆನ್ಲಾಕ್‌, ಲೇಡಿಗೋಷನ್‌ ಸರ್ಕಾರಿ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆ ಸಮಾರಂಭ ನೆರವೇರಿತು.

ಮಂಗಳೂರು: ಇನ್ನಷ್ಟು ಗುಣಮಟ್ಟದ ಆರೋಗ್ಯ ಸೇವೆಗಳ ನೀಡುವ ಉದ್ದೇಶದಿಂದ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಾದ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ, ಜಯದೇವ ಹೃದಯ ಆಸ್ಪತ್ರೆ, ನಿಮಾನ್ಸ್‌ ಮಾನಸಿಕ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರವನ್ನು ವೆನ್ಲಾಕ್‌ನಲ್ಲಿ ಸ್ಥಾಪನೆಗೆ ಮಹತ್ತರ ಯೋಜನೆ ರೂಪಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಫಾದರ್‌ ಮುಲ್ಲರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಭಾನುವಾರ ವೆನ್ಲಾಕ್‌, ಲೇಡಿಗೋಷನ್‌ ಮತ್ತು ಕೆ.ಎಂ.ಸಿ ಆಸ್ಪತ್ರೆಗಳ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಹಾಗೂ ವೆನ್ಲಾಕ್‌, ಲೇಡಿಗೋಷನ್‌ ಸರ್ಕಾರಿ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜ್ಯದ ಪ್ರಮುಖ ಆಸ್ಪತ್ರೆಗಳ ಉಪಕೇಂದ್ರ ಆರಂಭಗೊಂಡರೆ ವೆನ್ಲಾಕ್‌, ಲೇಡಿಗೋಷನ್‌ ಆಸ್ಪತ್ರೆಗಳ ಒತ್ತಡ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ವಾಮಂಜೂರು ಸುತ್ತಮುತ್ತ ಲಭ್ಯ ನಿವೇಶನದಲ್ಲಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಇಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದರಿಂದಲೇ ರಾಜ್ಯದ ಮೂಲೆ ಮೂಲೆಯಿಂದಲೂ ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಗುಣಮಟ್ಟದ ಸೇವೆಯೇ ನಮಗೆ ಹೆಮ್ಮೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸಮಾರಂಭ ಉದ್ಘಾಟಿಸಿ, ವೆನ್ಲಾಕ್‌, ಲೇಡಿಗೋಷನ್‌ ಆಸ್ಪತ್ರೆಗಳ 175ನೇ ಸಂಭ್ರಮಾಚರಣೆ ಎಂದರೆ ಇಡೀ ದೇಶ ಸಂಭ್ರಮಿಸುವಂತದ್ದು. ಈ ಹಿನ್ನೆಲೆಯಲ್ಲಿ ವೆನ್ಲಾಕ್‌ನ್ನು ರಾಜ್ಯದ ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆ ಸಿದ್ಧಗೊಂಡಿದೆ. ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತಲೂ ಹೆಚ್ಚಿನ ಗುಣಮಟ್ಟದ ಆರೋಗ್ಯ ಸೇವೆ ವೆನ್ಲಾಕ್‌ ನೀಡಲಿದೆ ಎಂದರು.

ಶಾಸಕ ವೇದವ್ಯಾಸ್‌ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕರಾದ ಭಾಗೀರಥಿ ಸುಳ್ಯ, ಐವನ್‌ ಡಿಸೋಜಾ, ಕೇಂದ್ರ ಮಾಜಿ ಸಚಿವರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್‌, ಅಭಯಚಂದ್ರ ಜೈನ್‌, ಜಿಲ್ಲಾಧಿಕಾರಿ ದರ್ಶನ್‌, ಮಣಿಪಾಲ ವಿವಿ ಪ್ರೊ. ಚಾನ್ಸಲರ್‌ ಡಾ. ಎಚ್‌. ಎಸ್‌. ಬಲ್ಲಾಳ್‌, ಡಿಎಚ್‌ಒ ಡಾ. ತಿಮ್ಮಯ್ಯ, ಪ್ರಮುಖರಾದ ಡಾ. ಕೆ. ಆರ್‌. ಕಾಮತ್‌, ಡಾ. ಎಂ. ಅಣ್ಣಯ್ಯ ಕುಲಾಲ್‌ ಉಳ್ತೂರು, ಡಾ.ದುರ್ಗಾಪ್ರಸಾದ್‌ ಮತ್ತಿತರರಿದ್ದರು.

175ನೇ ವರ್ಷಾಚರಣಾ ಸಮಿತಿ ಅಧ್ಯಕ್ಷ ಡಾ. ಎಂ. ಶಾಂತರಾಮ ಶೆಟ್ಟಿ ಸ್ವಾಗತಿಸಿದರು. ವೆನ್ಲಾಕ್‌ ಅಧೀಕ್ಷಕ ಡಾ. ಶಿವಪ್ರಕಾಶ್‌ ಪ್ರಸ್ತಾವಿಕ ಮಾತನಾಡಿದರು.