ಸಾರಾಂಶ
ಭಟ್ಕಳ: ಇಲ್ಲಿನ ಹಿರಿಯ ಶ್ರೇಣಿಯ ನ್ಯಾಯಾಲಯ, ಪ್ರಥಮ ದರ್ಜೆಯ ನ್ಯಾಯಾಲಯ ಹಾಗೂ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತ್ನಲ್ಲಿ ೧೮೯೯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ೫೦೧ ಪ್ರಕರಣಗಳು, ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ೭೪೧ ಪ್ರಕರಣಗಳು, ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ೫೬೫ ಪ್ರಕರಣಗಳನ್ನು ಬಗೆಹರಿದಿವೆ.
ಲೋಕ ಅದಾಲತ್ನಲ್ಲಿ ಒಟ್ಟು ₹೯,೦೫,೩೯,೨೬೪ನ್ನು ವಿವಿಧ ಪರಿಹಾರ ಹಾಗೂ ದಂಡದ ರೂಪದಲ್ಲಿ ಕೊಡಿಸಲಾಯಿತು. ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ನಡೆದ ನ್ಯಾಯಿಕ ಸಂಧಾನಕಾರರಾಗಿ ಹಿರಿಯ ಶ್ರೇಣಿಯ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಾಂತ ಕುರಣಿ ನ್ಯಾಯಿಕ ಸಂಧಾನಕಾರರಾಗಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ವಕೀಲ ಗಣೇಶ ಮುರ್ಡೇಶ್ವರ ಭಾಗವಹಿಸಿದ್ದರು. ಒಟ್ಟು ೩೫೬ ಪ್ರಕರಣಗಳನ್ನು ಸಂಧಾನಕ್ಕೆ ಕರೆಯಲಾಗಿದೆ, ಒಟ್ಟು ೭೪೧ ಪ್ರಕರಣಗಳು ಇತ್ಯರ್ಥವಾದವು. ವಿವಿಧ ಪ್ರಕರಣಗಳಲ್ಲಿ ಪರಿಹಾರ, ಸರ್ಕಾರಕ್ಕೆ ದಂಡದ ರೂಪದಲ್ಲಿ ₹೩,೯೧,೧೦,೦೦೪ ಘೋಷಿಸಲಾಯಿತು.ಪ್ರಥಮ ದರ್ಜೆ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ದೀಪಾ ಅರಳಗುಂಡಿ ನ್ಯಾಯಿಕೇತರ ಸಂಧಾನಕಾರರಾಗಿ ವಕೀಲ ಶಹಬಾಜ್ ಅಹಮ್ಮದ್ ಭಾಗವಹಿಸಿದ್ದರು. ರಾಜೀ ಸಂಧಾನಕ್ಕೆ ಇಡಲಾಗಿದ್ದ ೮೩೩ ಪ್ರಕರಣಗಳಲ್ಲಿ ೭೪೧ ಪ್ರಕರಣಗಳು ಇತ್ಯರ್ಥಪಡಿಸಲಾಗಿದ್ದು, ವಿವಿಧ ಪ್ರಕರಣಗಳಲ್ಲಿ ಪರಿಹಾರ, ಸರ್ಕಾರಕ್ಕೆ ದಂಡದ ರೂಪದಲ್ಲಿ ₹೨,೮೨,೬೦,೦೭೬-೦೦ ಘೋಷಿಸಲಾಯಿತು.
ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶೆ ಧನವತಿ ನ್ಯಾಯಿಕೇತರ ಸಂಧಾನಕಾರರಾಗಿ ವಕೀಲ ಗಂಗಾಧರ ನಾಯ್ಕ ಭಾಗವಹಿಸಿದ್ದರು. ರಾಜೀ ಸಂಧಾನಕ್ಕೆ ಇಡಲಾಗಿದ್ದ ೬೭೦ ಪ್ರಕರಣಗಳಲ್ಲಿ ೬೫೬ ಪ್ರಕರಣಗಳು ಇತ್ಯರ್ಥಪಡಿಸಲಾಗಿದ್ದು, ವಿವಿಧ ಪ್ರಕರಣಗಳಲ್ಲಿ ಪರಿಹಾರ, ಸರ್ಕಾರಕ್ಕೆ ದಂಡದ ರೂಪದಲ್ಲಿ ₹೨,೩೧,೬೯,೧೮೪ ಘೋಷಿಸಲಾಯಿತು.ಲೋಕ ಅದಾಲತ್ನಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ, ಕಾರ್ಯದರ್ಶಿ ಆರ್.ಜಿ. ನಾಯ್ಕ, ಉಪಾಧ್ಯಕ್ಷ ನಾಗರಾಜ ಎಸ್. ನಾಯ್ಕ ಹಿರಿಯ ವಕೀಲ ನಾಗರಾಜ ಈ.ಎಚ್., ಸಹಾಯಕ ಸರ್ಕಾರಿ ಅಭಿಯೋಜಕ ವಿವೇಕ ನಾಯ್ಕ, ಶೇಖರ ಹರಿಕಾಂತ, ವಕೀಲರ ಸಂಘದ ಮಾಜಿ ಅಧ್ಯಕ್ಷ ಗಣೇಶ ಎಂ. ನಾಯ್ಕ, ನಾಗರಾಜ ಹೆಗಡೆ, ಮಹೇಶ ನಾಯ್ಕ, ಪಾಂಡು ನಾಯ್ಕ, ಗುರುದಾಸ ಮೊಗೇರ, ಎಂ.ಟಿ. ನಾಯ್ಕ, ಶ್ರಾವ್ಯಾ, ನಾಗರತ್ನಾ ಕೆ. ನಾಯ್ಕ, ನಾಗರತ್ನಾ ಟಿ. ನಾಯ್ಕ, ಕ್ರಿಸ್ಟಿನಾ, ತಮೀಮ್ ಭಾಗವಹಿಸಿದ್ದರು.