ಪಾಂಡವಪುರ ತಾಲೂಕಿನ ಬೇಬಿಗ್ರಾಮದ ಶ್ರೀದುದಂಡೇಶ್ವರ ಮಹಂತ ಶಿವಯೋಗಿಗಳ ಮಠದಲ್ಲಿ ಆಗಸ್ಟ್ 13 ರಂದು ಮಠದ ಸಂಸ್ಥಾಪಕ, ಶತಾಯುಷಿ ಲಿಂಗೈಕ್ಯ ಶ್ರೀಮರೀದೇವರು ಸ್ವಾಮೀಜಿಗಳ 18ನೇ ವರ್ಷದ ಪುಣ್ಯಸ್ಮರಣೆ ಹಾಗೂ 10ನೇ ವರ್ಷದ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿಗ್ರಾಮದ ಶ್ರೀದುದಂಡೇಶ್ವರ ಮಹಂತ ಶಿವಯೋಗಿಗಳ ಮಠದಲ್ಲಿ ಆಗಸ್ಟ್ 13 ರಂದು ಮಠದ ಸಂಸ್ಥಾಪಕ, ಶತಾಯುಷಿ ಲಿಂಗೈಕ್ಯ ಶ್ರೀಮರೀದೇವರು ಸ್ವಾಮೀಜಿಗಳ 18ನೇ ವರ್ಷದ ಪುಣ್ಯಸ್ಮರಣೆ ಹಾಗೂ 10ನೇ ವರ್ಷದ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಡಾ.ಶ್ರೀತ್ರಿನೇತ್ರ ಮಹಂತ ಶಿವಯೋಗಿಸ್ವಾಮೀಜಿ ತಿಳಿಸಿದರು.ಮಠದಲ್ಲಿ ಸುದ್ದಿಗೋಷ್ಠಿಸಿಸು ಮಾತನಾಡಿದ ಅವರು, ಕಾರ್ಯಕ್ರಮ ಅಂಗವಾಗಿ ಕರ್ತೃ ಗದ್ದುಗೆಗೆ ಏಕಾದಶ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಧ್ವಜಾರೋಹಣವನ್ನು ಬೆಳ್ಳಾವಿ ಶ್ರೀಕಾರದ ಮಠದ ಶ್ರೀಕಾರದ ವೀರಬಸವಮಹಾಸ್ವಾಮೀಜಿ ನೆರವೇರಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನಸ್ವಾಮೀಗಳು ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಿದ ಬಳಿಕ ಚಾಲನೆ ನೀಡಲಿದ್ದಾರೆ.
ಮಠದ ಆವರಣದಲ್ಲಿ ಆಗಸ್ಟ್ 13 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಸುತ್ತೂರು ಕ್ಷೇತ್ರದ ಶ್ರೀಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಮಹಾಸ್ವಾಮಿಗಳು, ಬೇಬಿಮಠದ ಡಾ.ಶ್ರೀತ್ರಿನೇತ್ರ ಮಹಂತ ಶಿವಯೋಗಿಸ್ವಾಮೀಜಿ ವಹಿಸಲಿದ್ದಾರೆ. ಸಾಲೂರು ಬೃಹನ್ಮಠದ ಶ್ರೀಶಾಂತಮಲ್ಲಿಕಾರ್ಜುನಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದರು.ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸಮಾರಂಭಕ್ಕೆ ಚಾಲನೆ ನೀಡುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಹಿರಿಯ ಶ್ರೀಗಳ ಭಾವಚಿತ್ರಕ್ಕೆಪುಷ್ಪಾರ್ಚನೆ ಮಾಡುವರು. ಸಚಿವ ಎಂ.ಬಿ.ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಸೆಸ್ಕ್ ಅಧ್ಯಕ್ಷ, ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಿರಿಯ ಶ್ರೀಗಳ ಕುರಿತ ಚಂದ್ರವನಕಂಪು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಉದ್ಯಮಿ ಎಂ.ಪಿ.ಮಧು, ಶಾಸಕರಾದ ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಡಾ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ರಾಜೇಶ್ ಗೂರೂಜಿ, ಎಂ.ರುದ್ರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಸಮಾಜ ಸೇವಕ ಆರ್ ಟಿಓ ಮಲ್ಲಿಕಾರ್ಜುನ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಅಂದು ಸಂಜೆ 6.30 ಕ್ಕೆ ಮಕ್ಕಳ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಲಿದೆ. ಬ್ಯಾಡಗಿ ಶಾಸಕ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ನೀಲಪ್ಪಶಿವಣ್ಣ ಚಾಲನೆ ನೀಡಲಿದ್ದಾರೆ. ಶ್ರೀಹನುಮಂತನಾಥಮಹಾಸ್ವಾಮೀಜಿ, ಗೌರಿಶಂಕರ ಸ್ವಾಮೀಜಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿಡಿಪಿಐ ಕೆ.ಯೋಗೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.ಸಚಿವ ರುದ್ರಪ್ಪಮಾನಪ್ಪಲಮಾಣಿಗೆ ಪ್ರಶಸ್ತಿ:
ಶ್ರೀದುದಂಡೇಶ್ವರ ಮಠ ಹಾಗೂ ಚಂದ್ರವನ ಆಶ್ರಮದ ವತಿಯಿಂದ ಪ್ರತಿವರ್ಷ ನೀಡಲಾಗುವ ಮಹಾಚೇತನ ಶ್ರೀಮರೀದೇವರು ಶಿವಯೋಗಿ ’ಜೀವನದಿ’ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಕ್ಕೆ ಈ ಬಾರಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಆಯ್ಕೆಯಾಗಿದ್ದಾರೆ.ರುದ್ರಪ್ಪಮಾನಪ್ಪಲಮಾಣಿ ಅವರು ಕ್ಷೇತ್ರದಲ್ಲಿ ಒಳ್ಳೆಯ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರುಗಳಾಗಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ರೂಡಿಸಿಕೊಂಡಿದ್ದಾರೆ. ಸಭಾಪತಿ, ಉಪಾಸಭಾಪತಿಗಳಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಜತೆಗೆ ಧಾರ್ಮಿಕವಾಗಿಯೂ ಭಕ್ತಿಶ್ರದ್ದೆ ಹೊಂದಿದ್ದು, ಶ್ರೀಮಠದ ಭಕ್ತರಾಗಿದ್ದಾರೆ. ಹಾಗಾಗಿ ಶ್ರೀಗಳ ಜೀವನದಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಜೀವನದಿ ಪ್ರಶಸ್ತಿ ಎಂದರೆ ಹರಿಯುವ ನದಿಗಳು ಸಹ ಒಮ್ಮೊಮ್ಮೆ ಬತ್ತಿ ಹೋಗುತ್ತವೆ. ಆದರೆ, ಸಂತನ ಜ್ಞಾನ ಎನ್ನುವ ನದಿ ಎಂದಿಗೂ ಬತ್ತುವುದಿಲ್ಲ. ಹಾಗಾಗಿ ಹಿರಿಯ ಶ್ರೀಗಳ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ ಜೀವನದಿ ಎಂಬ ಹೆಸರು ಇಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಡಳಿತ ಅಧಿಕಾರಿ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ಬಿಡದಿ ನವೀನ್, ವೆಂಕಟೇಶಪ್ಪ, ಕೃಷ್ಣಪ್ಪ ಹಾಜರಿದ್ದರು.