ಸಾರಾಂಶ
ಚಿಕ್ಕಬಳ್ಳಾಪುರ : ಯುದ್ಧಪೀಡಿತ ಇರಾನ್ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ 7 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಕೂಡಲೇ ರಕ್ಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದ ನಿವಾಸಿಗಳಾದ ಇರ್ಫಾನ್ ಹೈದರ್, ರಾಜಾ ಅಬ್ಬಾಸ್, ಹಬೀಬ್ ರಾಜಾ, ಶಬ್ಬಿರ್ ಅಲಿ, ಇಲ್ದಾನ್ ಅಲಿ, ಹಬೀಬ್ ಹುಸೇನ್, ನಕೀರ್ ರಾಜಾ ಅವರು ತೆಹರಾನ್ನಲ್ಲಿ ಸಿಲುಕಿಕೊಂಡಿದ್ದು, ಆತಂಕಗೊಂಡಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ತೆರಳಿದ ಈ ಏಳು ಜನರನ್ನು ಅಲ್ಲಿಂದ ಸ್ಥಳಾಂತರಿಸುವಂತೆ ಗೌರಿಬಿದನೂರಿನ ಹಸನ್ ಸೈಯದ್ ಎಂಬುವವರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಮ್ಮನ್ನು ರಕ್ಷಿಸುವಂತೆ ಸಿಎಂ, ಪ್ರಧಾನಿಗೆ ಕೋರಿದ್ದಾರೆ.
ಈ ಮಾಹಿತಿ ಆಧರಿಸಿ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಅವರು ಸಹ ಕೂಡಲೇ ವಿದ್ಯಾರ್ಥಿಗಳಿಗೆ ರಕ್ಷಣೆಗೆ ಧಾವಿಸುವಂತೆ ಎಕ್ಸ್ ಖಾತೆಯಲ್ಲಿ ಸಿಎಂ ಮತ್ತು ಪ್ರಧಾನಮಂತ್ರಿ ಅವರಿಗೆ ಕೋರಿದ್ದಾರೆ.ಇಸ್ರೇಲ್ನಲ್ಲಿರುವ ಹಾಸನ ಜಿಲ್ಲೆಯ 19 ಜನ ಸುರಕ್ಷಿತ:ಇರಾನ್ ಹಾಗೂ ಇಸ್ರೇಲ್ ದೇಶಗಳ ನಡುವಿನ ಯುದ್ಧ ತಾರಕಕ್ಕೇರಿದ್ದು, ಈ ನಡುವೆ ಕೇರ್ ಟೇಕರ್ ಕೆಲಸ ಅರಸಿ ಇಸ್ರೇಲ್ಗೆ ತೆರಳಿರುವ ಹಾಸನ ಜಿಲ್ಲೆ ಆಲೂರು ತಾಲೂಕಿನ ಮಗ್ಗೆ ಹೋಬಳಿಯ 5 ಗ್ರಾಮಗಳ ಒಟ್ಟು 19 ಜನರು ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ತಮ್ಮ ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಮಠದ ಕೊಪ್ಪಲಿನ ನಿವಾಸಿಗಳಾದ ಅಜಿತ್ ಕಿರಣ್, ಕೃತಿಕ್ ವಿಜಯ್, ರೋಹನ್ ಜೋಸೆಫ್, ರೋಹಿಲ, ಅನುಷಾ, ನಿಶಾಂತ್ ಆಂಟೋನಿ, ನಿಖಿಲ್ ಜೋಸೆಫ್, ಜಾಡ್ವಿನ್ ಲ್ಯಾನ್ಸಿ, ಆಶಾ ಮೇರಿ. ದಿಣ್ಣೆ ಕೊಪ್ಪಲಿನ ಸೆಲಿನಾ ಲಾರೆನ್ಸ್, ಜಾನ್ಸಿ ಏಸು ಕುಮಾರ್, ಸ್ಟೆಲ್ಲಾ ಮೇರಿ. ಕಲ್ಲು ಕೊಪ್ಪಲಿನ ಮೆಲ್ವಿನ್ ಬಲ್ವೇಂದ್ರ, ರಾಯಪ್ಪ. ಹಾರೋಹಳ್ಳಿಯ ರಾಜೇಶ್ ಆಂಟೋನಿ, ವಿನೋದ್ ಪ್ರಭು, ಅನ್ಸಿಲ್ಲಾ ರಾಣಿ ಹಾಗೂ ಬಡಗಿಕೊಪ್ಪಲಿನ ಸುಜಾತಾ ಸಬಾಸ್ ರಾಯಪ್ಪ, ಶಾಂತಿ ಆಂಟೋನಿಸ್ವಾಮಿ ಇವರೆಲ್ಲರೂ ನರ್ಸಿಂಗ್ ವಿದ್ಯಾಭ್ಯಾಸ ಮಾಡಿದ್ದು, ಇಸ್ರೇಲಿನಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಾರೆ.
ವಯಸ್ಸಾದವರನ್ನು ಹಾಗೂ ರೋಗಿಗಳನ್ನು, ಮಕ್ಕಳನ್ನು ನೋಡಿಕೊಳ್ಳುತ್ತಿರುವ ಇವರೆಲ್ಲರೂ ಅಕ್ಕಪಕ್ಕದ ಗ್ರಾಮದವರಾಗಿದ್ದಾರೆ.ಇರಾನ್ ದಾಳಿ ನಡೆಸುತ್ತಿರುವ ಪ್ರದೇಶಗಳಿಂದ ಇವರೆಲ್ಲರೂ ದೂರದಲ್ಲಿದ್ದು, ಸೈರನ್ ಹೊಡೆಯುತ್ತಿದ್ದಂತೆ ಬಂಕರ್ಗೆ ಹೋಗಿ ರಕ್ಷಣೆ ಪಡೆಯುತ್ತೇವೆ. ಇಲ್ಲಿ ಯಾವುದೇ ತೊಂದರೆ ಇಲ್ಲ ಎಂದು ತಮ್ಮವರೊಂದಿಗೆ ವಾಟ್ಸಾಪ್ ಕರೆಯಲ್ಲಿ ಹೇಳಿಕೊಂಡಿದ್ದಾರೆ.