ಸಾರಾಂಶ
ಬಿ-ಖಾತಾ ಅಸ್ಪಷ್ಟವಿದ್ದು, ಈ ಬಗ್ಗೆ ಪರಿಪೂರ್ಣ ಮಾಹಿತಿ ಪಡೆಯಬೇಕು. ಈ ವಿಚಾರವಾಗಿ ಅನುಭವಿ ಹೊಂದಿದ ಅಧಿಕಾರಿಗಳ ಅಥವಾ ಸಿಬ್ಬಂದಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುವುದು ಮುಖ್ಯವಾಗಿದೆ.
ಕನಕಗಿರಿ:
ಕನಕಗಿರಿ ಪಟ್ಟಣದ ಅಭಿವೃದ್ಧಿಗೆ ₹ ೨.೩೭ ಕೋಟಿ ಅನುದಾನ ಮಂಜೂರಾಗಿದ್ದು, ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಹೇಳಿದರು.ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 2025-26ನೇ ಸಾಲಿನ ಆಯವ್ಯಯದಲ್ಲಿ ₹ ೨.೩೭ ಕೋಟಿ ಅನುದಾನ ಬಂದಿದ್ದು ಇದರಲ್ಲಿ ₹ ೨ ಕೋಟಿಗೂ ಹೆಚ್ಚು ಕುಡಿಯುವ ನೀರಿಗಾಗಿ, ೧೫ನೇ ಹಣಕಾಸು ಯೋಜನೆಯಡಿ ₹ ೨ ಕೋಟಿಗೂ ಹೆಚ್ಚು ಹಣ ಮಂಜೂರಾಗಿದೆ. ಇನ್ನೂ ಎಸ್ಎಫ್ಸಿಯಿಂದ ₹ ೧೧ ಲಕ್ಷ, ಎಸ್ಸಿಪಿ ₹ ೧೭ ಲಕ್ಷ ಹಾಗೂ ಟಿಎಸ್ಪಿಯಿಂದ ₹ ೭ ಲಕ್ಷ ಅನುದಾನ ಬಂದಿದೆ ಎಂದರು.ಬಿ-ಖಾತಾ ರೂಲ್ ಗೊಂದಲ:
ಬಿ-ಖಾತಾ ಅಸ್ಪಷ್ಟವಿದ್ದು, ಈ ಬಗ್ಗೆ ಪರಿಪೂರ್ಣ ಮಾಹಿತಿ ಪಡೆಯಬೇಕು. ಈ ವಿಚಾರವಾಗಿ ಅನುಭವಿ ಹೊಂದಿದ ಅಧಿಕಾರಿಗಳ ಅಥವಾ ಸಿಬ್ಬಂದಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುವುದು ಮುಖ್ಯವಾಗಿದೆ. ಬಿ-ಖಾತಾಕ್ಕೆ ಸಂಬಂಧಿಸಿದಂತೆ ಡಬಲ್ ತೆರಿಗೆ ಕಟ್ಟುವವರು ಸಂಪೂರ್ಣ ಮಾಹಿತಿ ಪಡೆದು ಮುಂದುವರಿಯಬೇಕು. ಸಾರ್ವಜನಿಕರ ಅನುಕೂಲವಾಗುವ ನಿಟ್ಟಿನಲ್ಲಿ ಬಹುತೇಕ ಸದಸ್ಯರು ಬಿ-ಖಾತಾ ಗೊಂದಲ ತಿಳಿಗೊಳಿಸುವಂತೆ ಆಗ್ರಹಿಸಿದ ಬೆನ್ನಲ್ಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಸಿಒ ದತ್ತಾತ್ರೆಯ ಹಡೆಗೆ ತಿಳಿಸಿದರು. ಆಗ ಬಿ-ಖಾತಾ ವಾಗ್ವಾದ ತಿಳಿಗೊಂಡಿತು.ಕರವಸೂಲಿಗೆ ಕ್ರಮ ಕೈಗೊಳ್ಳಿ:
ಪಪಂ ವ್ಯಾಪ್ತಿಯ ಕರವಸೂಲಿ ಪ್ರಮಾಣ ಆಧರಿಸಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಲಿದೆ. ಈ ನಿಟ್ಟಿನಲ್ಲಿ ಕರವಸೂಲಿ ಪ್ರಮಾಣ ಹೆಚ್ಚಿಸಲು ಸೂಕ್ತ ಕ್ರಮವಹಿಸಿದರೆ ನಮ್ಮ ಪಂಚಾಯಿತಿಗೆ ಹೆಚ್ಚು ಅನುದಾನ ಪಡೆಯಲು ಅನುಕೂಲವಾಗಲಿದೆ. ಕರ ವಸೂಲಿಗೆ ತಕ್ಷಣಕ್ಕೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸದಸ್ಯ ಅಭಿಷೇಕ ಕಲುಬಾಗಿಲಮಠ ಸೂಚಿಸಿದರು. ಕಾಂಪೌಂಡ್ ನಿರ್ಮಿಸಿ:ಎಪಿಎಂಸಿಗೆ ಸಂಬಂಧಿಸಿದ ಜಾಗೆಯಲ್ಲಿದ್ದ ಡಬ್ಬಾ ಅಂಗಡಿ ತೆರವು ಮಾಡಿದ್ದರಿಂದ ಮತ್ತು ಈ ಮೊದಲು ಶಿಥಿಲಗೊಂಡಿದ್ದ ಕಾಂಪೌಂಡ್ ಕುಸಿದು ಬಿದ್ದಿದೆ. ಆದ್ದರಿಂದ ಎಪಿಎಂಸಿ ಕಾಂಪೌಂಡ್ ನಿರ್ಮಿಸಿ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ಸಂಗಪ್ಪ ಸಜ್ಜನ್ ಹೇಳಿದರು. ಆಗ ಕೆಲ ಸದಸ್ಯರು ಎಪಿಎಂಸಿ ಕಾಂಪೌಂಡ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಸಿ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಎಪಿಎಂಸಿ ಕಾಂಪೌಂಡ್ ಪಕ್ಕದ ಜಾಗೆದಲ್ಲಿದ್ದ ಪುಟ್ಬಾತ್ ತೆರವಿನಲ್ಲಿ ಕೆಲ ಅಧಿಕಾರಿಗಳು ಮತ್ತು ಪ್ರಭಾವಿಗಳು ಲಂಚ ಪಡೆದಿದ್ದಾರೆನ್ನುವ ಆರೋಪ ಸಭೆಯಲ್ಲಿ ಕೇಳಿ ಬಂದಿತು. ಆಗ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಮೌನವಹಿಸಿದರು. ಆಗ ಈ ವಿಷಯ ಬಿಟ್ಟು ಮುಂದಿನ ವಿಷಯ ತೆಗೆದುಕೊಂಡು ಚರ್ಚಿಸಿದರು. ಅಧ್ಯಕ್ಷ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಅನಿಲ ಬಿಜ್ಜಳ, ಶರಣೇಗೌಡ, ನೂರಸಾಬ್ ಗಡ್ಡಿಗಾಲ, ಸುರೇಶ ಗುಗ್ಗಳಶೆಟ್ರ, ರಾಜಸಾಬ್ ನಂದಾಪುರ, ತನುಶ್ರೀ ಟಿಜೆ, ಶಭನಾಬೇಂ ಹುಸೇನಬೀ ಸಂತ್ರಾಸ್, ಗುಡಿಹಿಂದಲ, ರಾಕೇಶ ಕಂಪ್ಲಿ, ಗಂಗಾಧರ ಚೌಡ್ಕಿ, ಶಾಂತಪ್ಪ ಬಸರಿಗಿಡದ ಇದ್ದರು.