ಚಿನ್ನದಂಗಡಿ ಮಾಲೀಕನಿಗೆ ಗನ್‌ತೋರಿಸಿ 2.5 ಕೇಜಿ ಚಿನ್ನ ಲೂಟಿ

| N/A | Published : Jul 11 2025, 11:48 PM IST / Updated: Jul 12 2025, 10:52 AM IST

ಸಾರಾಂಶ

ಸಿನಿಮೀಯ ರೀತಿಯಲ್ಲಿ ಚಿನ್ನದಂಗಡಿಯಲ್ಲಿ ದರೋಡೆ ನಡೆದಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

 ಕಲಬುರಗಿ :  ಸಿನಿಮೀಯ ರೀತಿಯಲ್ಲಿ ಚಿನ್ನದಂಗಡಿಯಲ್ಲಿ ದರೋಡೆ ನಡೆದಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಮಟಮಟ ಮಧ್ಯಾಹ್ನವೇ ನಗರದ ಮಧ್ಯಭಾಗ ಹಾಗೂ ಜನನಿಬಿಡವಾದ ಪ್ರದೇಶವಾದ ಸರಾಫ್‌ ಬಜಾರನಲ್ಲಿರುವ ಮಾಲೀಕ್ ಎಂಬ ಚಿನ್ನದ ಅಂಗಡಿಗೆ ನುಗ್ಗಿದ ನಾಲ್ವರು ಮುಸುಕು ಧಾರಿ ದರೋಡೆಕೋರರು ಚಿನ್ನದ ಅಂಗಡಿಯ ಮಾಲೀಕನ ಕೈಕಾಲುಗಳನ್ನು ಕಟ್ಟಿ ಹಾಕಿ, ಗನ್ ತೋರಿಸಿ, ಅಂಗಡಿಯಲ್ಲಿಟ್ಟಿದ್ದ 2.5 ಕೆ.ಜಿ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಶುಕ್ರವಾರ ಬೆಳಗ್ಗೆ 12ರ ಸುಮಾರಿಗೆ ನಾಲ್ಕು ಜನ ಮುಸುಕಧಾರಿಗಳು ಮೊದಲನೆ ಮಹಡಿಯಲ್ಲಿರುವ ಮಾಲೀಕ್ ಚಿನ್ನದ ಅಂಗಡಿಗೆ ಹೋಗಿದ್ದಾರೆ. ಆಗ ಅಂಗಡಿಯಲ್ಲಿ ಮಾಲೀಕ ಮಾತ್ರ ಇದ್ದ ಎನ್ನಲಾಗಿದೆ. ನೇರವಾಗಿ ಚಿನ್ನದ ಅಂಗಡಿಗೆ ನುಗ್ಗಿದ ದರೋಡೆಕೋರರು, ಮೊದಲು ಮಾಲೀಕನ ಕೈಕಾಲು ಕಟ್ಟಿದ್ದಾರೆ. ನಂತರ ಆತನ ತಲೆಗೆ ಗನ್ ಇಟ್ಟು ಲಾಕರ್‌ನಲ್ಲಿರುವ ಚಿನ್ನಾಭರಣವನ್ನೆಲ್ಲವನ್ನು ತೆಗೆದಕೊಂಡು ಪರಾರಿಯಾಗಿದ್ದಾರೆ. ಇಬ್ಬರು ಮುಸುಕುಧಾರಿಗಳು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ದರೋಡೆಯಾದ ಬಳಿಕ ಅಂಗಡಿ ಮಾಲೀಕ ಕಿರುಚಿಕೊಂಡ್ರು. ಅದನ್ನು ಕೇಳಿ ನಾನು ಓಡಿ ಹೋಗಿ ಅವರನ್ನು ನೋಡಿದೆ. ಜುವೆಲ್ಲರಿ ಮಾಲೀಕನ ಬಾಯಿಗೆ ಸೆಲ್ಲೋ ಟೇಪ್ ಹಾಕಿ ಕೈಕಾಲು ಕಟ್ಟಿದ್ದರು. ಅವರು ಗಾಬರಿಯಿಂದ ಶಟರ್ ಓಪನ್ ಮಾಡಿದ್ದರು. ನಾನು ಓಡಿ ಹೋಗವಷ್ಟರಲ್ಲಿ ದರೋಡೆಕೋರರು ಪರಾರಿ ಆಗಿದ್ದರು ಎಂದು ಪ್ರತ್ಯಕ್ಷದರ್ಶಿ ರಾಜಶೇಖರ್ ತಿಳಿಸಿದ್ದಾರೆ.

ದರೋಡೆಕೋರರ ಪತ್ತೆಗೆ ಐದು ತಂಡ ರಚನೆ ಮಾಡಿದ್ದು, ಆದಷ್ಟು ಬೇಗ ದರೋಡೆಕೋರರ ಬಂಧನ ಮಾಡುತ್ತೇವೆ.

-ಡಾ। ಶರಣಪ್ಪ, ನಗರ ಪೊಲೀಸ್ ಕಮಿಷನರ್, ಕಲಬುರಗಿ.

ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಕಮೀಷನರ್ ಡಾ.ಶರಣಪ್ಪ, ಡಿಸಿಪಿ ಕನೀಕಾ ಸಿಕ್ರೆವಾಲ್, ಎಸಿಪಿ, ಪಿಐ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read more Articles on