ಸಾರಾಂಶ
ಕನಕಗಿರಿ ಹೊಸ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿ ನೀಡಿದ್ದು ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.
ಕನಕಗಿರಿ:
ತಾಲೂಕಿನ ಸುಳೇಕಲ್ ಸೀಮಾ ವ್ಯಾಪ್ತಿಯ ಸರ್ವೇ ನಂ. 134ರಲ್ಲಿನ 13 ಎಕರೆ 25 ಗುಂಟೆ ಜಮೀನಿನ ಪೈಕಿ 2 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಂಗಳವಾರ ಕಂದಾಯ ಇಲಾಖೆಯಿಂದ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಲಾಯಿತು.ತಹಸೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, 2 ಎಕರೆ ಭೂಮಿಯನ್ನು ಅಗ್ನಿಶಾಮಕ ಠಾಣೆಯ ಕಟ್ಟಡ ನಿರ್ಮಾಣಕ್ಕಾಗಿ ನೀಡಲಾಗಿದೆ. ಇದೇ ಸರ್ವೇ ನಂಬರ್ನಲ್ಲಿ ಇನ್ನೂ 3 ಎಕರೆ ಭೂಮಿಯನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಿದ್ದು ಇಲಾಖೆಗಳ ಹೆಸರಿನಲ್ಲಿ ನಾಮಫಲಕ ಅಳವಡಿಸಲಾಗಿದೆ ಎಂದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಮಪ್ಪ ಮಾತನಾಡಿ, ಕನಕಗಿರಿ ಹೊಸ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿ ನೀಡಿದ್ದು ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಸಹ ಕಚೇರಿ ಕಟ್ಟಡಕ್ಕೆ ಮುತುವರ್ಜಿ ವಹಿಸಿದ್ದಾರೆ. ಕಂದಾಯ ಇಲಾಖೆ ನೀಡಿದ ಭೂಮಿಯನ್ನು ಹದ್ದುಬಸ್ತು ಮಾಡಿಕೊಂಡು ನಾಮಫಲಕ ಅಳವಡಿಸಿರುವುದಾಗಿ ತಿಳಿಸಿದರು.ಈ ವೇಳೆ ಭೂ ಮಾಪಕ ರಮೇಶ, ಕಂದಾಯ ನಿರೀಕ್ಷಕ ಮಂಜುನಾಥ, ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ರಂಗನಾಥ, ಮಹಿಬೂಬು, ಕಿರಣ್, ಮಲ್ಲಪ್ಪ ಜಗದೀಶ ಸೇರಿದಂತೆ ಇದ್ದರು.