ಸಾರಾಂಶ
ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಕಾಲು ಜಾರಿ ಬಿದ್ದು ಅಸುನೀಗಿರುವ ಘಟನೆ ತಾಲೂಕಿನ ಸಿರಾಫನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಳಲ್ಕೆರೆ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಕಾಲು ಜಾರಿ ಬಿದ್ದು ಅಸುನೀಗಿರುವ ಘಟನೆ ತಾಲೂಕಿನ ಸಿರಾಫನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿರಾಫನಹಳ್ಳಿಯ ಆದಿತ್ಯ(15), ಅಪ್ಪರಸನಹಳ್ಳಿ ಗ್ರಾಮದ ಯರಗುಂಟೇಶ್ವರ(14) ಮೃತರು. ಬೇಸಗೆ ಬಿಸಿಲಿನಿಂದ ಪಾರಾಗಲು ಜಮೀನಿನಲ್ಲಿರುವ ಕೃಷಿ ಹೊಂಡಕ್ಕೆ ತೆರಳಿ ಈಜಲು ಮುಂದಾಗಿದ್ದಾರೆ. ಕೃಷಿ ಹೊಂಡದ ಒಳ ಭಾಗದಲ್ಲಿ ಪ್ಲಾಸ್ಟಿಕ್ ತಾಡಪಾಲು ಹಾಕಿರುವುದರಿಂದ ಪಾಚಿ ಕಟ್ಟಿದ್ದು, ಕಾಲು ಜಾರಿ ದಡ ಸೇರಲು ಸಾಧ್ಯವಾಗದೇ ನೀರಲ್ಲಿ ಮುಳುಗಿ ಅಸುನೀಗಿದ್ದಾರೆ.ಜಿಲ್ಲೆಯಾದ್ಯಂತ ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಕೃತಕ ಕೃಷಿ ಹೊಂಡ ನಿರ್ಮಿಸಿ ಅದಕ್ಕೆ ಟ್ಯಾಂಕರ್ ಇಲ್ಲವೇ ಕೊಳವೆ ಬಾವಿ ಮೂಲಕ ನೀರು ಭರ್ತಿ ಮಾಡಿ ನಂತರ ತೋಟಕ್ಕೆ ಹಾಯಿಸುತ್ತಾರೆ. ಬಿಸಿಲಿನ ಝಳಕ್ಕೆ ಕೃಷಿ ಹೊಂಡದ ಒಳಭಾಗದ ತಾಡಪಾಲು ಪಾಚಿಕಟ್ಟಿ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಇಂತಹ ಹಲವಾರು ಪ್ರಕರಣಗಳು ಜಿಲ್ಲೆಯಾದ್ಯಂತ ನಡೆದಿದ್ದರೂ ಮುಂಜಾಗ್ರತೆ ಕ್ರಮಗಳ ಅನುಸರಿಸಲಾಗುತ್ತಿಲ್ಲ. ಚಿತ್ರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.