ಸಾರಾಂಶ
ಶಹಾಪುರ/ಚಿತ್ರದುರ್ಗ : ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಬಿಸಿಲಿನ ತಾಪಕ್ಕೆ ಸೋಮವಾರ ಇಬ್ಬರು ವೃದ್ಧ ಮಹಿಳೆಯರು ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕುರಕುಂದಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾಗ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಹಣಮಂತಿ ಮಲ್ಲಿಕಾರ್ಜುನಪ್ಪ (52) ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಮಧ್ಯೆ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗ್ರಾಮದ ರತ್ನಮ್ಮ(76) ಎಂಬ ವೃದ್ಧೆ ಬಿಸಿಲಿನ ತಾಪದಿಂದ ದಾರಿ ಮಧ್ಯೆಯೇ ಕುಸಿದು ಬಿದ್ದು, ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ನಡೆಯುವ ವೇಳೆ ಬಿಸಿಲಿನ ಝಳಕ್ಕೆ ಕಾಲುಗಳಲ್ಲಿ ಬೊಬ್ಬೆ ಬಂದಿದ್ದು, ಮುಂದಕ್ಕೆ ಚಲಿಸಲಾಗದೆ ಅವರು ರಸ್ತೆಯಲ್ಲೇ ಕುಸಿದು ಬಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಾಯಚೂರಲ್ಲಿ 43 ಡಿಗ್ರಿ ತಾಪಮಾನ ದಾಖಲು:
ರಾಜ್ಯದಲ್ಲಿ ಸೋಮವಾರ ಅತಿ ಹೆಚ್ಚು ತಾಪಮಾನ ರಾಯಚೂರಿನಲ್ಲಿ (43.0) ದಾಖಲಾಗಿತ್ತು. ಉಳಿದಂತೆ ಕಲಬುರಗಿಯಲ್ಲಿ (42.9), ಕೊಪ್ಪಳದಲ್ಲಿ (42.0), ಗದಗದಲ್ಲಿ (40.2) ಹಾಗೂ ಚಾಮರಾಜನಗರದಲ್ಲಿ (40.1) ಡಿಗ್ರಿಗಳಷ್ಟು ತಾಪಮಾನ ದಾಖಲಾಗಿತ್ತು. ಇದೇ ವೇಳೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 2ರವರೆಗೆ ಗರಿಷ್ಠ ತಾಪಮಾನ ಹಾಗೂ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.