ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರದ ಶ್ರೀನಗರ ಉದ್ಯಾನದ ಸಮೀಪ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಿ.ಸ.ನಂ 1316, 3ಕ್ಕೆ ಸಂಬಂಧಿಸಿದಂತೆ ಗಂಭೀರ ಭೂ ಹಗರಣದ ಆರೋಪ ಕೇಳಿಬಂದಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.ಸುಮಾರು 5 ಎಕರೆ 34 ಗುಂಟೆ ಈ ಜಮೀನು ಹಿಂದಿನಿಂದಲೂ ಪಹಣಿ ದಾಖಲೆಗಳಲ್ಲಿ ಪೊಲೀಸ್ ಗೋಲಿಬಾರ ಕಡೆ ಎಂದು ನಮೂದಾಗಿದ್ದು ಸರ್ಕಾರಕ್ಕೆ ಸೇರಿರುವ ಆಸ್ತಿಯಾಗಿದೆ. ಆದರೆ 1975- 76ರ ಅವಧಿಯಲ್ಲಿ ಹಕ್ಕು ದಾಖಲೆ ಸಂಖ್ಯೆ 6907 ಆಧಾರವಾಗಿ ಮೂಲ ದಾಖಲೆಗಳನ್ನು ತಿರುಚಿ ಖಾಸಗಿ ವ್ಯಕ್ತಿಗಳ ಹೆಸರನ್ನು ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಜಮೀನಿನ ಮೌಲ್ಯ ₹200 ಕೋಟಿಗೂ ಅಧಿಕವಾಗಿದ್ದು ,ಅಧಿಕಾರಿಗಳು ಭೂಗಳ್ಳರು ಹಾಗೂ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ರಿಸನಂ 1316, 3ಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ಕೇಳಿದಾಗ ಭೂ ಮಾಪನ ಇಲಾಖೆ ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಚೇರಿಗಳಲ್ಲಿ ದಾಖಲೆಗಳು ಲಭ್ಯವಾಗುತ್ತಿಲ್ಲ. ಹಕ್ಕು ದಾಖಲೆ ಸಂಖ್ಯೆ 6907 ಇದು ವಾಸ್ತವವಾಗಿ ರಿಸನಂ 1062 2ಕ್ಕೆ ಸಂಬಂಧಿಸಿದ್ದು 1316, 3ಕ್ಕೆ ಸಂಬಂಧಿಸದು ಎಂದು ತಹಶೀಲ್ದಾರರು ಮಾಹಿತಿ ಹಕ್ಕಿನ ಉತ್ತರದಲ್ಲಿ ತಿಳಿಸಿದ್ದಾರೆ.ಆದರೂ 1316, 3ರಲ್ಲಿ ಖಾಸಗಿ ಹೆಸರುಗಳನ್ನು ಸೇರಿಸಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಕುರಿತು 2002ರಲ್ಲಿ ತಹಶೀಲ್ದಾರರು ಜಿಲ್ಲಾಧಿಕಾರಿಗೆ ಪತ್ರ ಬರೆದು ಖಾಸಗಿ ಹೆಸರುಗಳನ್ನು ತೆಗೆದು ಪೊಲೀಸ್ ಗೋಲಿಬಾರ ಕಡೆ ಎಂದು ಮರು ನಮೂದಿಸಲು ಸೂಚನೆ ನೀಡಿರುವ ದಾಖಲೆಗಳನ್ನೂ ಲಗತ್ತಿಸಲಾಗಿದೆ. 2024ರಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಈ ಜಮೀನಿಗೆ ಕರ್ನಾಟಕ ಸರ್ಕಾರ ಎಂದು ಹಕ್ಕು ದಾಖಲಿಸಲು ಆದೇಶ ಹೊರಡಿಸಿರುವುದು ಹಾಗೂ 2025ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಜಮೀನು ಪೊಲೀಸ್ ಇಲಾಖೆಗೆ ಸೇರಿದೆ ಎಂದು ಸ್ಪಷ್ಟಪಡಿಸಿರುವ ಪತ್ರವೂ ಉಲ್ಲೇಖಿಸಲಾಗಿದೆ. 1975 - 76ರಲ್ಲಿ ಸೃಷ್ಟಿಸಲಾದ ಹೊಸ ಹಿಸ್ಸಾಗಳು ಭೂ ಮಾಪನ ಇಲಾಖೆಯ ಅಧಿಕೃತ ದಾಖಲೆಗಳಲ್ಲಿ ಇಲ್ಲ ಎಂದು ಅಭಿಲೇಖಪಾಲಕರ ವರದಿ ತಿಳಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಭೂಗಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರದ ಆಸ್ತಿಯನ್ನು ಪೊಲೀಸ್ ಗೋಲಿಬಾರ ಕಡೆ ಎಂದು ಮರು ನಮೂದಿಸಬೇಕು ಎಂದು ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.