21ರಿಂದ ಐದು ದಿನ ಶರಣ ಸಂಸ್ಕೃತಿ ಉತ್ಸವ

| Published : Oct 17 2023, 12:30 AM IST

ಸಾರಾಂಶ

ಬಸವಕೇಂದ್ರ ಮುರುಘಾಮಠದಿಂದ ಪ್ರತಿ ವರ್ಷ ದಸರಾ ವೇಳೆ ಆಚರಿಸಲ್ಪಡುವ ಶರಣ ಸಂಸ್ಕೃತಿ ಉತ್ಸವ ಅಕ್ಟೋಬರ್ 21ರಿಂದ 25ರವರೆಗೆ ಸರಳವಾಗಿ ನಡೆಯಲಿದೆ ಎಂದು ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು. ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿದಿನ ದಾಸೋಹ ನಡೆಯುತ್ತದೆ. ಉತ್ಸವದ ಪ್ರಮಖ ಘಟ್ಟವಾದ ಪೀಠಾರೋಹಣ ವಿಶಿಷ್ಟವಾಗಿ ನಡೆಯಲಿದೆ. ಮುರುಗಿ ಶಾಂತವೀರ ಸ್ವಾಮಿಗಳ ಭಾವಚಿತ್ರವನ್ನು ಇಟ್ಟು ಶೂನ್ಯಪೀಠಾರೋಹಣ ಕಾರ್ಯಕ್ರಮ ನೆರವೇರಿಸಲಾಗುವುದು ಎಂದರು.
ಮುರುಗಿ ಶಾಂತವೀರಶ್ರೀ ಗಳ ಭಾವಚಿತ್ರವಿಟ್ಟು ಪೀಠಾರೋಹಣ । ಸುದ್ದಿಗೋಷ್ಠಿಯಲ್ಲಿ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮಾಹಿತಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದಿಂದ ಪ್ರತಿ ವರ್ಷ ದಸರಾ ವೇಳೆ ಆಚರಿಸಲ್ಪಡುವ ಶರಣ ಸಂಸ್ಕೃತಿ ಉತ್ಸವ ಅಕ್ಟೋಬರ್ 21ರಿಂದ 25ರವರೆಗೆ ಸರಳವಾಗಿ ನಡೆಯಲಿದೆ ಎಂದು ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು. ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿದಿನ ದಾಸೋಹ ನಡೆಯುತ್ತದೆ. ಉತ್ಸವದ ಪ್ರಮಖ ಘಟ್ಟವಾದ ಪೀಠಾರೋಹಣ ವಿಶಿಷ್ಟವಾಗಿ ನಡೆಯಲಿದೆ. ಮುರುಗಿ ಶಾಂತವೀರ ಸ್ವಾಮಿಗಳ ಭಾವಚಿತ್ರವನ್ನು ಇಟ್ಟು ಶೂನ್ಯಪೀಠಾರೋಹಣ ಕಾರ್ಯಕ್ರಮ ನೆರವೇರಿಸಲಾಗುವುದು ಎಂದರು. ಅಕ್ಟೋಬರ್ 21ರಂದು ಬೆಳಗ್ಗೆ 10ಗಂಟೆಗೆ ಬಸವತತ್ವ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅದೇದಿನ ಬೆಳಗ್ಗೆ 11ಗಂಟೆಗೆ ಕೃಷಿಮೇಳ, ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನ ನಡೆಯಲಿದ್ದು, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಬಸವತತ್ವ ಸಮಾವೇಶದಲ್ಲಿ ಸಚಿವರಾದ ಡಿ.ಸುಧಾಕರ್,ಈಶ್ವರ ಖಂಡ್ರೆ, ಚಿತ್ರನಟ ದೊಡ್ಡಣ್ಣ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ ಗೋಪಾಲಕೃಷ್ಣ ಮುಂತಾದವರು ಭಾಗವಹಿಸುವರು. 22 ರಂದು ಬೆಳಗ್ಗೆ 10 ಕ್ಕೆ ಮಹಿಳಾ ಕ್ರೀಡಾಕೂಟ, ಸಂಜೆ 6.30 ಗಂಟೆಗೆ ಯುವಜನ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವ ಭಗವಂತ ಖೂಬ, ರಾಜ್ಯಸಚಿವರಾದ ಎಂ.ಬಿ.ಪಾಟೀಲ, ಬಿ.ನಾಗೇಂದ್ರ, ಶಾಸಕ ಬಿ.ವೈ. ವಿಜಯೇಂದ್ರ ಮೊದಲಾದವರು ಭಾಗವಹಿಸುವರು. 23ರಂದು ಸಂಜೆ 6.30 ಕ್ಕೆ ನಡೆಯುವ ಮಹಿಳಾ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕಿ ಶಶಿಕಲಾ ಜೊಲ್ಲೆ ಮೊದಲಾದವರು ಭಾಗವಹಿಸುವರು. 24ರಂದು ಅಪರಾಹ್ನ 4 ಗಂಟೆಗೆ ಮೇಲುದುರ್ಗದ ಶ್ರೀ ಮುರುಘಾಮಠದ ಆವರಣದಲ್ಲಿ ನಾಯಕ ವಂಶಸ್ಥರಿಂದ ಶ್ರೀಗಳಿಗೆ ಭಕ್ತಿ ಸಮರ್ಪಣೆ ನಡೆಯಲಿದೆ. ಶ್ರೀಮಠದಲ್ಲಿ ಸಂಜೆ 6.30ಕ್ಕೆ ಮಕ್ಕಳ ಸಂಭ್ರಮ ಏರ್ಪಡಿಸಲಾಗಿದ್ದು, ಬಾಲಪ್ರತಿಭೆಗಳು ಭಾಗವಹಿಸಲಿದ್ದಾರೆ. ಕೊನೆಯ ದಿನ 25ರಂದು ಬೆಳಗ್ಗೆ 10ಗಂಟೆಗೆ ಶೂನ್ಯಪೀಠಾರೋಹಣ, 12ಕ್ಕೆ ಶ್ರೀ ಜಗದ್ಗುರು ಜಯದೇವ ಜಂಗೀಕುಸ್ತಿ, ಸಂಜೆ 6.30ಕ್ಕೆ ಶರಣಸಂಸ್ಕೃತಿ ಉತ್ಸವ ಸಮಾರೋಪ ನಡೆಯಲಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಂಸದ ಜಿ.ಎಂ ಸಿದ್ದೇಶ್ವರ, ಮಾಜಿಸಚಿವ ಎಚ್.ಎಂ ರೇವಣ್ಣ ಮೊದಲಾದವರು ಪಾಲ್ಗೊಳ್ಳುವರು ಎಂದು ಬಸವಪ್ರಭು ಸ್ವಾಮೀಜಿ ಮಾಹಿತಿ ನೀಡಿದರು. ಉತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಬಸವ ಸ್ವಾಮಿಗಳು, ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ಎಸ್.ಜೆಎಂ ವಿದ್ಯಾಪೀಠದ ಸಿಇಓ ಎಂ.ಭರತ್‌ಕುಮಾರ್, ಉಮೇಶ್ ವಕೀಲರು, ಎಸ್.ಪರಮೇಶ್ವರ್ ಇದ್ದರು.