ಗದಗ: ಸಾಮಾನ್ಯವಾಗಿ ಗ್ರಹಣವೆಂದರೆ ಅಶುಭ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎಂಬ ನಂಬಿಕೆ ಬಲವಾಗಿದೆ. ಆದರೆ, ನಗರದಲ್ಲಿ ಮಂಗಳವಾರ ಈ ಎಲ್ಲ ಕಟ್ಟುಪಾಡುಗಳನ್ನು ಮೀರಿ ಹೋಳಿ ಹುಣ್ಣಿಮೆ ಹಾಗೂ ಚಂದ್ರಗ್ರಹಣದ ದಿನದಂದೇ 22 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಂ. ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯುತ್ಸವದ ಅಂಗವಾಗಿ ಈ ಅರ್ಥಪೂರ್ಣ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ದಿ. ಕೆ.ಎಚ್. ಪಾಟೀಲ ಅಭಿಮಾನಿಗಳ ಬಳಗವು ಗದಗ ಎಪಿಎಂಸಿ ಆವರಣದ ಪುಟ್ಟರಾಜ ಗವಾಯಿಗಳ ಮಠದ ಆವರಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಜಾತಿ- ಮತದ ಭೇದವಿಲ್ಲದೆ ಸರ್ವಧರ್ಮದ ಒಟ್ಟು 22 ಜೋಡಿಗಳು ಗಣ್ಯರು ಹಾಗೂ ಮಠಾಧೀಶರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಗವಾಯಿಗಳ 112ನೇ ಜಯಂತಿಯ ಸ್ಮರಣಾರ್ಥ 112 ಕೆಜಿ ತೂಕದ ಬೃಹತ್ ಕೇಕ್ ಕತ್ತರಿಸುವ ಮೂಲಕ ವಿವಾಹ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಕಲ್ಲಯ್ಯಜ್ಜನವರು ಹಾಗೂ ತೋಂಟದ ಡಾ. ಸಿದ್ದರಾಮ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ನವಜೋಡಿಗಳನ್ನು ಆಶೀರ್ವದಿಸಿದರು. ಉಚಿತ ರಕ್ತದಾನ ಶಿಬಿರಗದಗ: ನಗರದ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ಮಂಗಳವಾರ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಜಯಂತಿ ಪ್ರಯುಕ್ತ ಭಾವಸಾರ ವಿಜನ್ ಇಂಡಿಯಾ, ಪಂ. ಪಂಚಾಕ್ಷರ ಗವಾಯಿಗಳ ಕಲಾ ಮಹಾವಿದ್ಯಾಲಯದ ಯುಥ್ ರೆಡ್ಕ್ರಾಸ್ ಹಾಗೂ ಅಂಬಿಕಾ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತಗುಂಪು ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ 30 ಜನರು ರಕ್ತದಾನ ಮಾಡಿದರು. 80ಕ್ಕೂ ಹೆಚ್ಚು ಜನರ ರಕ್ತಗುಂಪು ತಪಾಸಣೆ ಮಾಡಲಾಯಿತು. ಈ ವೇಳೆ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ, ಪ್ರಾ. ಆರ್.ಎಸ್. ದಾನರಡ್ಡಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಸವರಾಜ ಲಾಲಗಟ್ಟಿ, ಶ್ರೀಪಾದ ವೈಕುಂಠೆ, ರೋಹಿತ ಚವಾಣ, ಡಾ. ದತ್ತಾತ್ರೇಯ ವೈಕುಂಠೆ, ಅಶ್ವಥ್ ಸುಲಾಖೆ, ಆರ್.ಎಸ್. ತ್ರಿಮಲ್ಲೇ, ವೀರಣ್ಣ ಬೆಳಮಕರ, ವಿಜಯಾ ನವಲೆ, ಪ್ರೊ. ಬಸವರಾಜ ಪೂಜಾರ, ಪ್ರೊ. ಮಂಜುಳಾ ಹೊಂಬಾಳಿ, ಪ್ರೊ. ಜೋಬಾಳೆ, ಡಾ. ವಿ.ಎ. ನಿಂಗೋಜಿ ಮುಂತಾದವರಿದ್ದರು.
