24 ಹಳ್ಳಿಗಳಲ್ಲಿ ಜೀವಜಲಕ್ಕೆ ಹಾಹಾಕಾರ

| Published : Feb 27 2024, 01:38 AM IST

ಸಾರಾಂಶ

ಹರಪನಹಳ್ಳಿ ತಾಲೂಕಿನ 24 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಹಲವೆಡೆ ಖಾಸಗಿ ಬೋರ್‌ವೆಲ್‌, ಬಾಡಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಮೂಲಕ ಸಮಸ್ಯೆಗೆ ತುಸು ಪರಿಹಾರ ಕಂಡುಕೊಳ್ಳಲಾಗಿದೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಫೆಬ್ರವರಿ ತಿಂಗಳಲ್ಲೇ ಬಿರುಬಿಸಿಲು ಪ್ರಖರವಾಗತೊಡಗಿದ್ದು, ಈಗಲೇ ಈ ಪರಿ ಬಿಸಿಲಿದ್ದರೆ ಏಪ್ರಿಲ್‌, ಮೇ ತಿಂಗಳಲ್ಲಿ ಹೆಂಗಪ್ಪಾ ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ. ಇನ್ನೊಂದೆಡೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜೀವಜಲಕ್ಕೂ ತತ್ವಾರ ಉಂಟಾಗಿದೆ.

ತಾಲೂಕಿನ 24 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಹಲವೆಡೆ ಖಾಸಗಿ ಬೋರ್‌ವೆಲ್‌, ಬಾಡಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಮೂಲಕ ಸಮಸ್ಯೆಗೆ ತುಸು ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ ದಿನದಿಂದ ನೀರಿನ ಸಮಸ್ಯೆ ಉಲ್ಬಣವಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ಎಲ್ಲೆಲ್ಲಿ ಸಮಸ್ಯೆ?: ಹುಣಸಿಕಟ್ಟೆ, ಅಣಜಿಗೇರಿ, ಶ್ರೀನಿವಾಸಪುರ, ಗಡಿಗುಡಾಳು, ಹನುಮನಹಳ್ಳಿ, ಬೂದಿಹಾಳ್, ಕಂಚಿಕೇರಿ, ಚಿಗಟೇರಿ, ಯು. ಬೇವಿನಹಳ್ಳಿ, ಉಚ್ಚಂಗಿದುರ್ಗ, ಜೋಷಿಲಿಂಗಾಪುರ, ಪವನಪುರ, ಕ್ಯಾರಕಟ್ಟಿ, ಯರಬಳ್ಳಿ, ಕಡೇಕಲ್‌ ತಾಂಡಾ, ಪುಣಭಗಟ್ಟಿ ತಾಂಡಾ, ಚೆನ್ನಾಪುರ ತಾಂಡಾ, ಕಮ್ಮತ್ತಹಳ್ಳಿ, ಯು. ಕಲ್ಲಹಳ್ಳಿ, ಮೈದೂರು, ನಿಲುವಂಜಿ, ಬಾಪೂಜಿನಗರ, ಗೋವೇರಹಳ್ಳಿ ಹೀಗೆ 24ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.

ಇವುಗಳಲ್ಲದೆ ಇನ್ನೂ ಅನೇಕ ಗ್ರಾಮಗಳಲ್ಲಿ ಪ್ರತಿದಿನ ನೀರಿನ ಸಮಸ್ಯೆಯ ದೂರು ಗ್ರಾಪಂ, ತಾಲೂಕು ಆಡಳಿತಕ್ಕೆ ಬರುತ್ತಿವೆ. ಹೀಗಾಗಿ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಸಂಖ್ಯೆ ಹೆಚ್ಚುತ್ತಿವೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ತಾಲೂಕು ಆಡಳಿತದವರು ಖಾಸಗಿ ಕೊಳವೆಬಾವಿಗಳ ರೈತರಿಂದ ಬಾಡಿಗೆ ಆಧಾರದ ಮೇಲೆ ಪಡೆದು ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.ಟ್ಯಾಂಕರ್‌ ನೀರು: ಹುಣಸಿಕಟ್ಟೆ ಗ್ರಾಮದಲ್ಲಿ ಖಾಸಗಿ ಬೋರ್‌ವೆಲ್‌ನವರು ನೀರು ಕೊಡಲು ಒಪ್ಪದ ಕಾರಣ ಅಲ್ಲಿ ಮಾತ್ರ ಬಾಡಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಹಣ ಮಂಜೂರು: ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ₹24 ಲಕ್ಷ ಮಂಜೂರಾಗಿದ್ದು, ಆ ಹಣದಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಇದೀಗ ಪುನಃ ₹25 ಲಕ್ಷ ಅನುದಾನ ಜಿಲ್ಲಾಡಳಿತದಿಂದ ಬಿಡುಗಡೆಯಾಗಿದೆ. ಕ್ರಿಯಾಯೋಜನೆ ತಯಾರಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಾಪಾಲಕ ಎಂಜಿನಿಯರ್‌ ಆರ್. ಕಿರಣ ನಾಯ್ಕ ತಿಳಿಸಿದರು.

ಪ್ರತಿ ಮನೆ ಮನೆಗೂ ನಳ ಅಳವಡಿಸುವ ಜಲಜೀವನ ಮಿಷನ್‌ ಯೋಜನೆಯ ಕೆಲಸ 126 ಹಳ್ಳಿಗಳಲ್ಲಿ ಪೂರ್ಣಗೊಂಡು ನೀರು ನೀಡಲಾಗುತ್ತದೆ ಎಂದು ಎಂಜಿನಿಯರ್‌ ಹೇಳುತ್ತಾರೆ.

ಅದೇ ರೀತಿ 107 ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗುತ್ತಿದೆ. ಬಹುಗ್ರಾಮ ಯೋಜನೆಯಲ್ಲೂ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಬೇಕಿದೆ. ಆದರೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿಲ್ಲ ಎಂಬುದು ಸಮಾಧಾನದ ಸಂಗತಿ.ಗ್ರಾಮೀಣ ಭಾಗದಲ್ಲಿ ಇರುವ 171 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 168 ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಅರಸಿಕೇರಿ, ರಾಮನಗರ, ಹೊಂಬಳಗಟ್ಟಿಗಳಲ್ಲಿ ಮಾತ್ರ ದುರಸ್ತಿಯಲ್ಲಿವೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಮೈಲಾರ ಜಾತ್ರೆಗೆ ಭದ್ರಾ ಡ್ಯಾಂನಿಂದ ನೀರು ಹರಿಸಿರುವುದರಿಂದ ಹರಪನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಸರಬರಾಜಿನಲ್ಲಿ ಅಂದಾಜು ಒಂದೂವರೆ ತಿಂಗಳು ಯಾವುದೇ ಸಮಸ್ಯೆ ಇರುವುದಿಲ್ಲ. ನಂತರ ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಹರಪನಹಳ್ಳಿ ಪಟ್ಟಣಕ್ಕೆ ನೀರಿನ ಸಮಸ್ಯೆಯಾದರೆ ಎದುರಿಸಲು ಪುರಸಭೆಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು, ತಾಲೂಕು ಆಡಳಿತ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಂಡು ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕಿದೆ.ಅನುದಾನ ಬಿಡುಗಡೆ: ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಲೂಕಿನ 190 ಗ್ರಾಮಗಳಲ್ಲಿ 259 ಖಾಸಗಿ ಕೊಳವೆಬಾವಿಗಳನ್ನು ಗ್ರಾಪಂವಾರು ಗುರುತಿಸಿದ್ದೇವೆ. ನೀರಿನ ಸಮಸ್ಯೆಯಾದರೆ ಗುರುತಿಸಿರುವ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಕೊಡುತ್ತೇವೆ. ಅವಕಾಶವಿದ್ದ ಕಡೆ ಹೊಸ ಬೋರ್‌ವೆಲ್‌ ಕೊರೆಸುತ್ತೇವೆ. ಇದಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಆರ್‌. ಕಿರಣ್‌ ನಾಯ್ಕ ತಿಳಿಸಿದರು.

ಟ್ಯಾಂಕರ್‌ಗಾಗಿ ಟೆಂಡರ್‌: ಹರಪನಹಳ್ಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಮರ್ಪಕವಾಗಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಖಾಸಗಿ ಟ್ಯಾಂಕರ್‌ಗಳ ಪಡೆಯಲು ಟೆಂಡರ್‌ ಕರೆದಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದರು.