ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ನಲ್ಲಿ ಪ್ರಾಕೃತಿಕ ತೊಂದರೆ ಸಲುವಾಗಿ ರಾತ್ರಿ ವಾಹನ ಸಂಚಾರ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಕರಾವಳಿ ಭಾಗಕ್ಕೆ ಶೇ.25ರಷ್ಟು ಮಲ್ಟಿ ಆ್ಯಕ್ಸಿಲ್ ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರ ರದ್ದುಗೊಂಡಿದೆ. ಕೆಎಸ್ಸಾರ್ಟಿಸಿ ಸೇರಿದಂತೆ ಕೆಲವು ಖಾಸಗಿ ಬಸ್ಗಳು ನಸುಕಿನ ಜಾವ ಶಿರಾಡಿ ತಲುಪಿ, ಬೆಳಗಾಗುತ್ತಿದ್ದಂತೆ ಬೆಂಗಳೂರಿನತ್ತ ಸಂಚಾರ ಆರಂಭಿಸುತ್ತಿವೆ. ಇದೇ ರೀತಿ ಮಡಿಕೇರಿ ಘಾಟ್ನಲ್ಲೂ ಬಸ್ಗಳು ಸಂಚರಿಸುತ್ತಿವೆ. ಹೆಚ್ಚಿನ ಖಾಸಗಿ ಬಸ್ಗಳು ಸಂಚಾರವನ್ನೇ ಮೊಟಕುಗೊಳಿಸಿವೆ. ಇನ್ನಷ್ಟು ಕುಸಿತ ಭೀತಿ ಕಾರಣ ಶಿರಾಡಿ ಹಾಗೂ ಮಡಿಕೇರಿ ಘಾಟ್ನಲ್ಲಿ ವಾಹನಗಳಿಗೆ ರಾತ್ರಿ ಸಂಚಾರಕ್ಕೆ ಅವಕಾಶ ಇಲ್ಲ. ಏನಿದ್ದರೂ ಬೆಳಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಸಂಚರಿಸಬಹುದು. ಹಾಗೆಂದು ಚಾರ್ಮಾಡಿ ಮೂಲಕ ಸಂಚಾರಕ್ಕೆ ಅವಕಾಶ ಇದ್ದರೂ ಅಲ್ಲಿ ಮಲ್ಟಿ ಆ್ಯಕ್ಸಿಲ್ ಬಸ್ಗಳು ಸಂಚರಿಸುತ್ತಿಲ್ಲ. ಎಕ್ಸ್ಪ್ರೆಸ್ ಹಾಗೂ ರಾಜಹಂಸ ಬಸ್ಗಳು ಮಾತ್ರ ಸಂಚರಿಸುತ್ತಿವೆ.ಉಡುಪಿ ಜಿಲ್ಲೆಯ ಹುಲಿಕಲ್ ಘಾಟ್ ಮೂಲಕ ಬೆಂಗಳೂರಿಗೆ 120 ಕಿ.ಮೀ. ಸುತ್ತು ಬಳಸಿ ಕ್ರಮಿಸಬೇಕು. ಕುದುರೆಮುಖ-ಕಳಸ-ಎಸ್.ಕೆ.ಬಾರ್ಡರ್ ಆಗಿ ಚಿಕ್ಕಮಗಳೂರು ಮೂಲಕ 45 ಕಿ.ಮೀ. ಹೆಚ್ಚು ಕ್ರಮಿಸಬೇಕು. ಆದರೆ ಈ ರಸ್ತೆ ಕಿರಿದಾಗಿದ್ದು, ದೊಡ್ಡ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬಿಸಿಲೆ ಘಾಟ್ ಮೂಲಕ ಸಂಚಾರಕ್ಕೆ ಚಿಂತನೆ ನಡೆಸಿದ್ದರೂ ಸುಬ್ರಹ್ಮಣ್ಯ ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿರುವುದು ತೊಂದರೆಯಾಗಿದೆ. ಹೀಗಾಗಿ ಮಲ್ಟಿ ಆ್ಯಕ್ಸಿಲ್ ಬಸ್ಗಳನ್ನು ಅನಿವಾರ್ಯವಾಗಿ ಶಿರಾಡಿ ಘಾಟ್ ಮೂಲಕವೇ ಓಡಿಸಬೇಕಾಗಿದೆ.
ನಸುಕಿಗೆ ತಲುಪಿ, ಬೆಳಗ್ಗೆ ಸಂಚಾರ: ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುವ ಮಲ್ಟಿ ಆ್ಯಕ್ಸಿಲ್ ಕೆಎಸ್ಆರ್ಟಿಸಿ ಬಸ್ಗಳು ನಿಗದಿತ ಸಮಯಕ್ಕೆ ಹೊರಡುತ್ತವೆ. ಬಳಿಕ ಗುಂಡ್ಯ ತಲುಪುವಾಗ ಸಾಮಾನ್ಯವಾಗಿ ಮಧ್ಯರಾತ್ರಿ ಕಳೆದು ನಸುಕಿನ ಜಾವ ಬಂದಿರುತ್ತದೆ. ಬಳಿಕ ಮೂರ್ನಾಲ್ಕು ಗಂಟೆಗಳ ಕಾಲ ಕಾದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ಸಂಚಾರ ಮುಂದುವರಿಸುತ್ತಿವೆ. ಇದೇ ರೀತಿ ಮಡಿಕೇರಿ ಘಾಟ್ ಮೂಲಕ ಮೈಸೂರು ಕಡೆಗೆ ಸಂಚರಿಸುವ ವಾಹನಗಳೂ ಸಂಪಾಜೆ ಬಳಿ ರಾತ್ರಿ ಕಳೆದು, ಬೆಳಗ್ಗೆ 6 ಗಂಟೆಗೆ ಹೊರಡುತ್ತವೆ. ಅಲ್ಲಿವರೆಗೆ ಪ್ರಯಾಣಿಕರೂ ಬಸ್ನಲ್ಲೇ ಕಳೆಯುವಂತಾಗಿದೆ. ರಾತ್ರಿ ಗುಂಡ್ಯ ಹಾಗೂ ಸಂಪಾಜೆಯಲ್ಲಿ ಕಾಯುವ ಬಗ್ಗೆ ಪ್ರಯಾಣಿಕರಿಗೆ ತಿಳಿಸಿಯೇ ಬಸ್ಗಳು ಸಂಚಾರ ನಡೆಸುತ್ತಿವೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.ರೈಲುಗಳ ಉಪಯೋಗ: ಶಿರಾಡಿ ಮತ್ತು ಮಡಿಕೇರಿ ಘಾಟ್ಗಳು ಕೈಕೊಟ್ಟ ಕಾರಣ ರಾತ್ರಿ ಸಂಚಾರಕ್ಕೆ ಪ್ರಯಾಣಿಕರು ರೈಲನ್ನು ಹೆಚ್ಚಾಗಿ ಆಶ್ರಯಿಸುತ್ತಿದ್ದಾರೆ. ಈಗಾಗಲೇ ಘಾಟ್ ಸಮಸ್ಯೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಓಡಾಟ ನಡೆಸುತ್ತಿದೆ. ಅಲ್ಲದೆ ಮಂಗಳೂರು-ಮಡ್ಗಾಂವ್ ಮಧ್ಯೆಯೂ ವಿಶೇಷ ರೈಲು ಏರ್ಪಡಿಸಲಾಗಿದೆ. ಇದು ಪ್ರಯಾಣಿಕರಿಗೆ ವರವಾಗಿದ್ದು, ಈ ರೈಲುಗಳು ಭರ್ತಿಯಾಗಿ ಸಂಚರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.