ಮಕರ ಸಂಕ್ರಾಂತಿಯ ಗುರುವಾರ ಪ್ರತಿ ವರ್ಷದಂತೆ ಹರಿಹರದಲ್ಲಿ ನಡೆಯಲಿರುವ ಹರಜಾತ್ರೆಗೆ ರಾಜ್ಯಾದ್ಯಂತದಿಂದ 25 ಸಾವಿರಕ್ಕೂ ಹೆಚ್ಚು ಸಂಖ್ಯೆ ಭಕ್ತರು ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸೇರಿದಂತೆ ದೇಶ- ವಿದೇಶಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುವುದು ಎಂದು ವೀರಶೈವ ಪಂಚಮಸಾಲಿ ಸಮಾಜ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದ್ದಾರೆ.

- ವೀರಶೈವ ಪಂಚಮಸಾಲಿ ಸಮಾಜ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾಹಿತಿ

- - - - ರೈಲ್ವೆ ಸಚಿವ ವಿ.ಸೋಮಣ್ಣ, ಸಚಿವರು, ಸಂಸದರು, ಶಾಸಕರು ಇನ್ನಿತರ ಗಣ್ಯರು ಭಾಗಿ

- ಜಾತ್ರೆಗೆ ಸಮಾಜದಿಂದ 50 ಸಾವಿರ ರೊಟ್ಟಿ, ಅಕ್ಕಿ ಸೇರಿದಂತೆ ದವಸ ಧಾನ್ಯಗಳ ಕೊಡುಗೆ

- ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ₹200 ಮೌಲ್ಯದ ನಾಣ್ಯವನ್ನು ಬಿಡುಗಡೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಮಕರ ಸಂಕ್ರಾಂತಿಯ ಗುರುವಾರ ಪ್ರತಿ ವರ್ಷದಂತೆ ಹರಿಹರದಲ್ಲಿ ನಡೆಯಲಿರುವ ಹರಜಾತ್ರೆಗೆ ರಾಜ್ಯಾದ್ಯಂತದಿಂದ 25 ಸಾವಿರಕ್ಕೂ ಹೆಚ್ಚು ಸಂಖ್ಯೆ ಭಕ್ತರು ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸೇರಿದಂತೆ ದೇಶ- ವಿದೇಶಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುವುದು ಎಂದು ವೀರಶೈವ ಪಂಚಮಸಾಲಿ ಸಮಾಜ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಹರ ಜಾತ್ರೆಯ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ಮಾಹಿತಿ ನೀಡಿದರು. ರೈಲ್ವೆ ಸಚಿವ ವಿ.ಸೋಮಣ್ಣ, ಹಾಲಿ ಸಚಿವರು, ಸಂಸದರು, ಹಾಲಿ ಶಾಸಕರು, ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ. ಈ ವರ್ಷ ಹರ ಜಾತ್ರೆಗೆ ಬರುವವರಿಗೆ ಕುಂಕುಮ, ವಿಭೂತಿ, ಕಂಕಣವನ್ನು ನೀಡುವ ಮೂಲಕ ಬರಮಾಡಿಕೊಳ್ಳಲಾಗುವುದು. ಜಾತ್ರೆ ಸಮಯದಲ್ಲಿ ರಕ್ತದಾನ ಶಿಬಿರ, ವಧು- ವರ ಅನ್ವೇಷಣೆ ಕಾರ್ಯಕ್ರಮವೂ ಇರಲಿದೆ ಎಂದರು.

ಜಾತ್ರೆ ಯಶಸ್ವಿಗೊಳಿಸಿ:

ಜಾತ್ರೆಗೆ ನಮ್ಮ ಸಮಾಜದಿಂದ 50 ಸಾವಿರ ರೊಟ್ಟಿ, ಅಕ್ಕಿ ಸೇರಿದಂತೆ ದವಸ ಧಾನ್ಯಗಳನ್ನು ಭಕ್ತರು ನೀಡುತ್ತಿದ್ದಾರೆ. ಹಣಕ್ಕಿಂತ ದವಸ ಧಾನ್ಯ ಮುಖ್ಯ. ₹50 ಕೋಟಿ ವೆಚ್ಚದಲ್ಲಿ ಧ್ಯಾನ ಮಂದಿರ, ದಾಸೋಹ ಮಂದಿರ, ಭಕ್ತರು ಬಂದರೆ ಉಳಿದುಕೊಳ್ಳಲಿಕ್ಕೆ ನೂತನ ಕೊಠಡಿಗಳ ವ್ಯವಸ್ಥೆ, ಖಾಲಿ ಇರುವ ಜಾಗದಲ್ಲಿ ವಿವಿಧ ಬಗೆಯ ಔಷಧಿ ಸಸ್ಯಗಳನ್ನು ಬೆಳೆಸಲಾಗಿದೆ. ತಾಲೂಕಿನ ಸುತ್ತಮುತ್ತಲು ಹಳ್ಳಿಗಳಿಂದ ನಮ್ಮ ಸಮಾಜ ಸೇರಿದಂತೆ ಬೇರೆ ಸಮಾಜದ ಎಲ್ಲ ಮಹಿಳೆಯರು ಹಾಗೂ ಪುರುಷರು ಭಕ್ತರು ಜಾತ್ರೆಗೆ ಬರಬೇಕು ಎಂದು ಮನವಿ ಮಾಡಿದರು.

₹200 ಮೌಲ್ಯದ ನಾಣ್ಯ ಬಿಡುಗಡೆ:

ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ನಾಗರಾಜ್ ಮಾತನಾಡಿ, ಮಕರ ಸಂಕ್ರಾಂತಿಯ ಸಮಯದಲ್ಲಿ ತಾವು ಬೆಳೆದ ಬೆಳೆಗಳನ್ನು ಹರ ಜಾತ್ರೆಗೆ ತಂದು ಆಚರಣೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ₹200 ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು. ಪಲ್ಲಕ್ಕಿ ಉತ್ಸವ ಇರಲಿದ್ದು, ಎಲ್ಲರೂ ಟೀಮ್ ಆಗಿ ಕೆಲಸ ಮಾಡಬೇಕು ಎಂದರು.

ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ಇರುತ್ತದೆ. ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟದ ಫಲವಾಗಿ 200 ವರ್ಷಗಳು ತುಂಬಿವೆ. ಹಲವಾರು ಮಠಗಳ ಸ್ವಾಮೀಜಿಗಳೂ ಬರಲಿದ್ದಾರೆ. ಇದು ಒಂದು ಶಕ್ತಿಕೇಂದ್ರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಬೇಕು ಎಂದರು.

ಮುಖಂಡ ಎಂ.ಎಸ್. ಪಾಟೀಲ್ ಮಾತನಾಡಿ. ನಮ್ಮ ತಾಲೂಕಿನಲ್ಲಿ ಕೊರೋನಾ ಕಾಲದಿಂದಲೂ ಸಮಾಜ ಸಂಘಟನೆಯ ಚಟುವಟಿಕೆಗಳು ಕುಂಠಿತವಾಗಿದ್ದವು. ಮುಂದಿನ ದಿನಗಳಲ್ಲಿ ಉತ್ತಮವಾದ ಸಂಘಟನೆಯನ್ನು ಮಾಡಲಾಗುವುದು. ಎಲ್ಲ ಕಾರ್ಯಕ್ರಮಗಳಿಗೂ ನಮ್ಮ ಸಮಾಜ ಜನರನ್ನು ಕರೆತರಲಾಗುವುದು ಎಂದು ಹೇಳಿದರು.

ಈ ಸಂದರ್ಭ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ್, ನೌಕರರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ್, ಶಂಭುಲಿಂಗಪ್ಪ, ಗಡಿಮಾಕುಂಟೆ ಸಿದ್ದೇಶ್, ಬಾದಾಮಿ ಚನ್ನಬಸಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸಕೆರೆ ಮುಕುಂದ, ವಾಣಿ, ವೀರಶೈವ ಸಮಾಜದ ಅಧ್ಯಕ್ಷ ಅಜ್ಜಪ್ಪ ನಾಡಿಗರ್, ಚಿಕ್ಕ ಬನ್ನಿಹಟ್ಟಿ ಪರಮೇಶ್, ಹೊಸಕೆರೆ ಗ್ರಾಪಂ ಅಧ್ಯಕ್ಷ ವೃಷಭೇಂದ್ರ, ಹೊಸಕೆರೆ ಮುರಿಗೆಪ್ಪ, ಎಚ್ಎಸ್ ಸಿದ್ದೇಶ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

- - -

-11ಜೆಎಲ್ಆರ್01:

ಜಗಳೂರಲ್ಲಿ ವೀರಶೈವ ಪಂಚಮಸಾಲಿ ಸಮಾಜ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹರಿಹರದಲ್ಲಿ ನಡೆಯುವ ಹರ ಜಾತ್ರೆ ಕುರಿತು ಮಾಹಿತಿ ನೀಡಿದರು.