ಸಾರಾಂಶ
ಈ ಯೋಜನೆಯಡಿ ಬಾಡಿಗೆ/ಲೀಸ್ಗೆ ಮತ್ತು ಸ್ವಂತ ಕಟ್ಟಡ ಅಂಗಡಿ ಕೋಣೆಗಳಲ್ಲಿ ಕಿರು ಉದ್ಯಮವನ್ನು ಸ್ಥಾಪಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು, ಪುರುಷರು ಹಾಗೂ ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಕೋ-ಆಪರೇಟಿವ್ ಸೊಸೈಟಿಗಳು, ಖಾಸಗಿ ಮಾಲಿಕತ್ವದ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕ ಯೋಜನೆಯ (ಪಿಎಂಎಫ್ಎಂಇ) ಮೂಲಕ ಶೇ.50 ಸಹಾಯಧನ ಪಡೆದು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಬಗ್ಗೆ ೨೦೨೫-೨೬ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ೨೫೦ ಹೊಸ ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣಾ ಘಟಕಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಈ ಯೋಜನೆಯಡಿ ಬಾಡಿಗೆ/ಲೀಸ್ಗೆ ಮತ್ತು ಸ್ವಂತ ಕಟ್ಟಡ ಅಂಗಡಿ ಕೋಣೆಗಳಲ್ಲಿ ಕಿರು ಉದ್ಯಮವನ್ನು ಸ್ಥಾಪಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು, ಪುರುಷರು ಹಾಗೂ ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಕೋ-ಆಪರೇಟಿವ್ ಸೊಸೈಟಿಗಳು, ಖಾಸಗಿ ಮಾಲಿಕತ್ವದ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.ಪಿಎಂಎಫ್ಎಂಇ ಯೋಜನೆಯ ವಿಶಿಷ್ಟ್ಯತೆಯೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ.೫೦ರಷ್ಟು ಸಹಾಯಧನ ೧೫ ಲಕ್ಷ ರು. ಗರಿಷ್ಠ ಮಿತಿಯೊಂದಿಗೆ ಸಹಾಯಧನ ನೀಡಲಾಗುವುದು. ಹಿಂದೆ ಇತರ ಯೋಜನೆಯಡಿಯಲ್ಲಿ ಸಬ್ಸಿಡಿ ಸಹಾಯಧನ ಪಡೆದವರೂ ಈ ಯೋಜನೆಯಲ್ಲಿ ಪಡೆಯಲು ಅವಕಾಶವಿದೆ. ಈಗಾಗಲೇ ಈ ಕಾರ್ಯಕ್ರಮದಡಿ ೨೦೨೪-೨೫ ನೇ ಸಾಲಿನಲ್ಲಿ ೩೪೦ಕ್ಕೂ ಹೆಚ್ಚು ಕಿರು ಘಟಕಗಳು ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆಯಾಗಿದ್ದು, ಹಾಲಿ ವರ್ಷ ೨೫೦ ಘಟಕಗಳನ್ನು ಆರಂಭಿಸಲು ಯೋಜಿಸಲಾಗಿದೆ.ಈ ಯೋಜನೆಯಡಿ ಮೀನಿನ ಮೌಲ್ಯವರ್ಧಿತ ಪದಾರ್ಥಗಳು, ಹಿಟ್ಟಿನ ಗಿರಣಿಗಳು ಮತ್ತು ಪ್ಯಾಕಿಂಗ್ ಮೆಶಿನ್, ಎಣ್ಣೆ ಗಾಣಗಳು, ಬೇಕರಿ ಉತ್ಪನ್ನ, ಅರಿಶಿಣ ಸಂಸ್ಕರಣೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆ, ನಿಪ್ಪಟ್ಟು, ಪಾನಿಪುರಿ, ಕೋಡುಬಳೆ, ಮಿಕ್ಸರ್, ಚಿಪ್ಸ್ ತಯಾರಿಕೆ ಸಂಸ್ಕರಿಸಿದ ಚಪಾತಿ, ಪರೋಟ, ಪೂರಿ, ಹೋಳಿಗೆ ಉತ್ಪನ್ನಗಳ ತಯಾರಿಕೆ, ಮಸಾಲ ಪದಾರ್ಥಗಳು/ ಸಾಂಬಾರ್ ಉತ್ಪನ್ನಗಳ ತಯಾರಿಕೆ, ಹಾಲಿನ ಉತ್ಪನ್ನಗಳ ತಯಾರಿಕೆ, ಸಿಹಿ ತಿಂಡಿ, ಖಾರ ತಿಂಡಿಗಳ ತಯಾರಿಕೆ, ಬೆಲ್ಲ ಮತ್ತು ಮಿಠಾಯಿ ತಯಾರಿಕೆ ಘಟಕ, ಕಾಫಿ ಪುಡಿ, ಟೀ ಪುಡಿ ಸಂಸ್ಕರಣಾ ಘಟಕ, ಚಾಕ್ಲೇಟ್ ತಯಾರಿಕೆ ಘಟಕ, ಜೇನು ಸಂಸ್ಕರಣಾ ಘಟಕ, ಸಿರಿಧಾನ್ಯಗಳಿಂದ ಉಪ ಉತ್ಪನ್ನ ತಯಾರಿಕೆ, ಡ್ರೈ ಫೂಟ್ಸ್ ಸಂಸ್ಕರಣೆ, ಐಸ್ ಕ್ರೀಂ ತಯಾರಿಕೆ, ಹಸಿ ಮೆಣಸಿನಕಾಯಿ ಮತ್ತು ಟೋಮೆಟೋ ಪೇಸ್ಟ್ ಮತ್ತು ಸಾಸ್ ತಯಾರಿಕೆ, ಶಾವಿಗೆ, ರವಾ ನೂಡಲ್ಸ್ ತಯಾರಿಕೆ, ಕೋಳಿ ಮಾಂಸ ಸಂಸ್ಕರಣಾ ಘಟಕ, ಪಶು ಮತ್ತು ಮೀನಿನ ಆಹಾರ, ಮನುಷ್ಯರು ಮತ್ತು ಪ್ರಾಣಿಗಳು ಸೇವಿಸುವ ಎಲ್ಲಾ ಆಹಾರ ಪದಾರ್ಥಗಳು ಸಂಸ್ಕರಣೆ, ತಯಾರಿಕೆಗೆ ಅವಕಾಶವಿದೆ.ಈ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಹಾಕಲು ಅಲೆದಾಡಬೇಕಾದ ಅವಶ್ಯಕತೆ ಇಲ್ಲ. ಈ ಯೋಜನೆಗೆ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆಯಿಂದ ಸೂರಜ್ ಶೆಟ್ಟಿ (೯೦೧೯೦೭೫೦೫೧) ಅವರನ್ನು ನೇಮಿಸಿದ್ದು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರುವವರು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರು ಅವರನ್ನು ಸಂಪರ್ಕಿಸಬಹುದೆಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.