ವರ್ಣಾಶ್ರಮದಿಂದ ಅಸಮಾನತೆ ಸೃಷ್ಟಿಯಾಯಿತು: ಸಿಎಂ

| Published : May 25 2024, 01:30 AM IST / Updated: May 25 2024, 12:58 PM IST

ಸಾರಾಂಶ

ಅತ್ಯಂತ ಕಡು ಬಡವ ಮೇಲ್ಜಾತಿಯವರನ್ನು ನಾವು ಬುದ್ಧಿ, ಸ್ವಾಮಿ ಅಂತ ಗೌರವಿಸುತ್ತೇವೆ. ಅದೇ ಅನೂಕಲಸ್ಥ ಕೆಳ ಜಾತಿಯವರನ್ನು ಏಕವಚನದಲ್ಲಿ ಅಗೌರವದಿಂದ ಕರೆಯುತ್ತೇವೆ.

 ಮೈಸೂರು :  ಜಾತಿ ವ್ಯವಸ್ಥೆ, ವರ್ಣಾಶ್ರಮದಿಂದ ಮನುಷ್ಯ ಮನುಷ್ಯನನ್ನು ಶೋಷಿಸುವ ಅಸಮಾನತೆ ಸೃಷ್ಟಿಯಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ವೈಶಾಖ ಬುದ್ಧ ಪೂರ್ಣಿಮ ಹಾಗೂ ಭಗವಾನ್ ಬುದ್ಧರ 2568ನೇ ಜಯಂತಿಯನ್ನು ಗುರುವಾರ ರಾತ್ರಿ ಉದ್ಘಾಟಿಸಿ ಮಾತನಾಡಿದ ಅವರು, ಅಸಮಾನತೆ ಪೋಷಿಸುವ ಜಾತಿ ವ್ಯವಸ್ಥೆ ಅಳಿಸಲು ಬುದ್ಧ, ಬಸವ, ಅಂಬೇಡ್ಕರ್ ರೀತಿ ಹಲವು ಮಹನೀಯರು ಶ್ರಮಿಸಿದರು ಎಂದರು.ಅತ್ಯಂತ ಕಡು ಬಡವ ಮೇಲ್ಜಾತಿಯವರನ್ನು ನಾವು ಬುದ್ಧಿ, ಸ್ವಾಮಿ ಅಂತ ಗೌರವಿಸುತ್ತೇವೆ. ಅದೇ ಅನೂಕಲಸ್ಥ ಕೆಳ ಜಾತಿಯವರನ್ನು ಏಕವಚನದಲ್ಲಿ ಅಗೌರವದಿಂದ ಕರೆಯುತ್ತೇವೆ.

 ಇದೇ ಗುಲಾಮಗಿರಿ ಮನಸ್ಥಿತಿ. ಈ ಮನಸ್ಥಿತಿಯನ್ನು ಅಳಿಸಲು ಬುದ್ಧ, ಬಸವ, ಅಂಬೇಡ್ಕರ್ ಸೇರಿ ಹಲವರು ಶ್ರಮಿಸಿದರು ಎಂದು ಅವರು ಹೇಳಿದರು. ಪಟ್ಟಭದ್ರ ಹಿತಾಸಕ್ತಿಗಳು ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಕಾಲದಲ್ಲೂ ಇದ್ದರು. ಈಗಲೂ ಇದ್ದಾರೆ. ಇವರು ಸಮಾಜದ ಪ್ರಗತಿಯ ಶತ್ರುಗಳು. ಆದರೆ, ನಮ್ಮ ಸಂವಿಧಾನ ಎಲ್ಲಾ ಜಾತಿ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಆದ್ದರಿಂದ ಸಂವಿಧಾನ ಜ್ಞಾನ ಸರ್ವರಿಗೂ ಅಗತ್ಯ ಎಂದರು. 

ತಾವೊಬ್ಬರೇ ಶ್ರೇಷ್ಠರು ಎಂದು ಕರೆಸಿಕೊಳ್ಳುವವರು ಬಹಳ ಪುಕ್ಕಲರಾಗಿರುತ್ತಾರೆ. ಶ್ರೇಷ್ಠತೆಯ ವ್ಯಸನ ಹೊಂದಿದ್ದ ಹಿಟ್ಲರ್ ಲಕ್ಷಾಂತರ ಮನುಷ್ಯರ ಕೊಲೆಗೆ ಕಾರಣರಾದರು.

 ಪುಕ್ಕಲರು ಮಾತ್ರ ತಾವೊಬ್ಬರೇ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಒದ್ದಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.ನಾವುಗಳು ಬುದ್ಧ, ಬಸವ, ಕುವೆಂಪು ಆಗಲು ಸಾಧ್ಯವಿಲ್ಲ. ಆದರೆ, ಅವರ ಹಾದಿಯಲ್ಲಾದರೂ ನಾವು ನಡೆಯಬೇಕು. ಬಸವಣ್ಣ ಅವರನ್ನು ಪೂಜಿಸುತ್ತಾ ಯಾವ ಜಾತಿ ಎಂದು ಜಾತಿವಾದ ಮಾಡುವುದು ತಪ್ಪು. ವಿದ್ಯಾವಂತರೇ ಹೆಚ್ವು ಜಾತಿವಾದಿಗಳಾಗುತ್ತಿರುವುದು ದುರಂತದ ಸಂಗತಿ. ಆದ್ದರಿಂದ ವೈಚಾರಿಕತೆ ಮತ್ತು ಮಾನವೀಯತೆ ಇರುವ ಶಿಕ್ಷಣ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಅವರು ತಿಳಿಸಿದರು.ದೇವರು ಯಾರ ಹಣೆಯಲ್ಲೂ ತಾರತಮ್ಯ, ಬಡತನವನ್ನು ಬರೆಯುವುದಿಲ್ಲ. 

ಹೀಗೆ ಬರೆದವರನ್ನು ದೇವರು ಎಂದು ಜನಒಪ್ಪುವುದಿಲ್ಲ. ಅಂಬೇಡ್ಕರ್, ಬುದ್ಧ ಎಲ್ಲರೂ ಹಣೆಬರಹ ಎನ್ನುವ ಮೌಢ್ಯವನ್ನು ಅಳಿಸಿ ವೈಚಾರಿಕತೆ ಬೆಳೆಸಲು ಯತ್ನಿಸಿದರು. ಆದ್ದರಿಂದ ಅಂಬೇಡ್ಕರ್ ಅವರು ಮೌಢ್ಯವಿಲ್ಲದ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು. ಅಸಮಾನತೆ ಅಳಿಸುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆರ್ಥಿಕವಾಗಿ ಶಕ್ತಿ ಬಂದರೆ ಸ್ವಾಭಿಮಾನಿಗಳಾಗುತ್ತಾರೆ. ಮಹಿಳೆಯರಲ್ಲಿ, ಬಡವರಲ್ಲಿ ಆರ್ಥಿಕ ಶಕ್ತಿ ತುಂಬುವ ಮೂಲಕ ಅವರನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.

 ಡಾ. ಕಲ್ಯಾಣಸಿರಿ ಭಂತೇಜಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮಾಜಿ ಮೇಯರ್ ಪುರುಷೋತ್ತಮ್ ಮೊದಲಾದವರು ಇದ್ದರು.

ಜಾತಿ ವ್ಯವಸ್ಥೆ ನೀರಿನ ಬಾವಿಗೆ ಬಿದ್ದ ಕಸದಂತೆ. ಕೊಡದಲ್ಲಿ ನೀರು ಸೇದುವಾಗ ಕಸ ಪಕ್ಕಕ್ಕೆ ಸರಿಯುತ್ತದೆ. ನೀರು ಸೇದಿದ ಮೇಲೆ ಮತ್ತೆ ಕಸ ತುಂಬಿಕೊಳ್ಳುತ್ತದೆ. ಹೀಗಾಗಿ, ಕಸವನ್ನೇ ನೀರಿನಿಂದ ತೆಗೆದು ಹೊರಗೆ ಹಾಕಿದರೆ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ಹೋಗುತ್ತದೆ

.- ಸಿದ್ದರಾಮಯ್ಯ, ಮುಖ್ಯಮಂತ್ರಿ