ಅಯೋಧ್ಯೆಯಲ್ಲಿ ಶ್ರೀಬಾಲರಾಮನ ವಿಗ್ರಹದ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗೀರಾಜ್ ಅವರಿಂದಲೇ ಕೆಂಪೇಗೌಡರ ಪ್ರತಿಮೆಯನ್ನೂ ನಿರ್ಮಿಸಬೇಕೆಂಬ ಸಂಕಲ್ಪ ಬಹುತೇಕರಲ್ಲೂ ಇತ್ತು. ಅದನ್ನು ಈಗ ಸಾಕಾರ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ. ಪ್ರತಿಮೆ ಸ್ಥಾಪನೆಯಾದ ಬಳಿಕ ಮಂಡ್ಯಕ್ಕೆ ವಿಶೇಷ ಕಳೆ ಬರಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿ ೨ ಕೋಟಿ ರು. ವೆಚ್ಚದಲ್ಲಿ ೨೬ ಅಡಿ ಎತ್ತರ ವಿಶೇಷ ಆಕರ್ಷಣೆಯುಳ್ಳ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ನಗರದ ಜೆ.ಸಿ.ವೃತ್ತದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರೊಂದಿಗೆ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನಾಗರಿಕರ ಬಹುದಿನಗಳ ಕನಸಾಗಿದ್ದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಇದೀಗ ನನಸಾಗುತ್ತಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನ ೨ ಕೋಟಿ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಲಾಗುತ್ತಿದೆ ಎಂದರು.

ಅಯೋಧ್ಯೆಯಲ್ಲಿ ಶ್ರೀಬಾಲರಾಮನ ವಿಗ್ರಹದ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗೀರಾಜ್ ಅವರಿಂದಲೇ ಕೆಂಪೇಗೌಡರ ಪ್ರತಿಮೆಯನ್ನೂ ನಿರ್ಮಿಸಬೇಕೆಂಬ ಸಂಕಲ್ಪ ಬಹುತೇಕರಲ್ಲೂ ಇತ್ತು. ಅದನ್ನು ಈಗ ಸಾಕಾರ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ. ಪ್ರತಿಮೆ ಸ್ಥಾಪನೆಯಾದ ಬಳಿಕ ಮಂಡ್ಯಕ್ಕೆ ವಿಶೇಷ ಕಳೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದ ಪ್ರಮುಖ ವೃತ್ತಗಳನ್ನು ೫ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ನಗರದ ಜೆ.ಸಿ.ವೃತ್ತವನ್ನು ೨ ಕೋಟಿ ರು. ವೆಚ್ಚದಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೇ, ಹೊಸಹಳ್ಳಿ ವೃತ್ತವನ್ನು ೧ ಕೋಟಿ ರು. ವೆಚ್ಚದಲ್ಲಿ ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದೇವೆ ಎಂದರು.

ಬೆಂಗಳೂರು-ಮೈಸೂರು ಹೆದ್ದಾರಿಯ ಸಕ್ಕರೆ ವೃತ್ತವನ್ನು ೨ ಕೋಟಿ ರು. ಹಾಗೂ ಹೊಳಲು ವೃತ್ತವನ್ನು ಸಹ ವಿಶೇಷವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ನಕ್ಷೆ ತಯಾರಿಸಿ ಕೆಲಸ ಪ್ರಾರಂಭವಾದ ಮೇಲೆ ಇದರ ಮಹತ್ವ, ನಗರದೊಳಗೆ ಬದಲಾವಣೆಯಾಗುವುದನ್ನು ಜನರು ನೋಡಬಹುದಾಗಿದೆ ಎಂದರು.

ನಗರದ ೧೦೦ ಅಡಿ ರಸ್ತೆಗೆ ಹೆಸರಿಡುವ ಕುರಿತಂತೆ ವಿವಾದ ಉಂಟಾಗಿತ್ತು. ನಾನು ಶಾಸಕನಾದ ನಂತರ ಅದಕ್ಕೆ ನಾಡಪ್ರಭು ಕೆಂಪೇಗೌಡರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಹೆಸರನ್ನು ಇಡುವ ಮೂಲಕ ವಿವಾದವನ್ನು ಬಗೆಹರಿಸಿರುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ವನದಲ್ಲಿ ನಿರ್ಮಿಸಿರುವ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಪ್ರತಿಮೆಗಳು ಪ್ಲಾಸ್ಟಿಕ್‌ನಿಂದ ಕೂಡಿದ್ದು, ಈ ಎರಡೂ ಪ್ರತಿಮೆಗಳನ್ನೂ ಪಂಚಲೋಹದಿಂದ ನಿರ್ಮಿಸಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಾನು ಶಾಸಕನಾದ ಮೇಲೆ ಮಂಡ್ಯ ನಗರದ ಪ್ರತಿ ರಸ್ತೆಗಳು, ವೃತ್ತಗಳು, ಪುಟ್‌ಪಾತ್‌ಗಳನ್ನು ಅಭಿವೃದ್ಧಿ ಮಾಡಿದ್ದೇನೆ. ಈಗಾಗಲೇ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಸ್ಥಳ ಪರಿಶೀಲನೆ ನಡೆಸಿದ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ನನ್ನನ್ನು ಆಹ್ವಾನಿಸಿದ್ದರು. ಇದೀಗ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಂತಾರಾಷ್ಟ್ರೀಯ ಹೆಸರು ಪಡೆದಿರುವ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಮಾಡಿರುವ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಬಹಳ ಅರ್ಥಪೂರ್ಣವಾಗಿ ಕೆಂಪೇಗೌಡರ ಪ್ರತಿಮೆಯನ್ನು ಮಾಡಿಕೊಡಲಾಗುವುದು ಎಂದರು.

ನಮ್ಮ ತಾಯಿಯವರೂ ಸಹ ಮಂಡ್ಯದ ಮುಟ್ಟನಹಳ್ಳಿಯವರು. ಹಾಗಾಗಿ ನಮಗೂ ಸಹ ಮಂಡ್ಯದ ಬಗ್ಗೆ ವಿಶೇಷವಾದ ಪ್ರೀತಿ ಇದೆ. ಇದೊಂದು ಅವಕಾಶ ನೀಡಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದರು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಗರಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಮಾಜಿ ಸದಸ್ಯ ಕೆ.ಸಿ.ರವೀಂದ್ರ, ರಮೇಶ್, ಅನುಪಮಾ ಇತರರಿದ್ದರು.