- ಕೆ.ಜೆ.ಜಾರ್ಜ್ ಘೋಷಣೆ । ಜಿಲ್ಲಾ ಆಟದ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಒಟ್ಟು 266 ‘ಭಾರತ ಜೋಡೋ ಯುವ ಸಂಘಗಳನ್ನು ಸ್ಥಾಪಿಸಿ ತಲಾ ₹10 ಲಕ್ಷ ದಂತೆ ವಾರ್ಷಿಕ ₹26.60 ಕೋಟಿ ಸಹಾಯಧನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಯುವಶಕ್ತಿಯ ಸೃಜನಶೀಲತೆ ಪ್ರೋತ್ಸಾಹಿಸುವ ಉದ್ದೇಶದಿಂದ ‘ಭಾರತ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ. 266 ಸಂಘಗಳಿಗೆ ವಾರ್ಷಿಕ ₹26.60 ಕೋಟಿ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಮೂಲಕ ಜಿಲ್ಲೆಗೆ ಈವರೆಗೆ ₹೨,೬೦೧ ಕೋಟಿ ಫಲಾನು ಭವಿಗಳಿಗೆ ನೀಡಿದೆ. ಯಾವುದೇ ಒಂದು ವರ್ಗ/ಜಾತಿಗೆ ಸೀಮಿತಗೊಳಿಸದೆ ಎಲ್ಲರನ್ನು ಒಳಗೊಂಡಂತೆ ಯೋಜನೆ ಜಾರಿಗೊಳಿಸಲಾಗಿದೆ. ವಿಶೇಷವಾಗಿ ಮಹಿಳೆಯರ ಯೋಜನೆ ಸಂತಸ ತಂದಿವೆ. ಈ ಮೂಲಕ ರಾಷ್ಟ್ರಕವಿ ಕುವೆಂಪು ಅವರ ಸರ್ವೋದಯ ಮತ್ತು ಸಮ ಸಮಾಜದ ಪರಿಕಲ್ಪನೆ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.
ಕಂದಾಯ ವಸೂಲಿಯಲ್ಲಿ ಶೇ.100 ರಷ್ಟು ಸಾಧನೆ:
ಜಿಲ್ಲೆಯ ಎಲ್ಲಾ ತಾಪಂ ಕಳೆದ 2 ಆರ್ಥಿಕ ವರ್ಷಗಳಲ್ಲಿ ಕಂದಾಯ ವಸೂಲಿಯಲ್ಲಿ ಶೇ.100 ಪ್ರಗತಿ ಸಾಧಿಸಿ ವಾರ್ಷಿಕ ಸುಮಾರು ₹೩೩ ಕೋಟಿ ಸಂಗ್ರಹಿಸಲಾಗುತ್ತಿದೆ. ಈ ಮೊತ್ತ ಗ್ರಾಪಂ ಸಮಗ್ರ ಅಭಿವೃದ್ಧಿಗೆ ಬಳಸಲಾಗುತ್ತಿದೆ. ರಾಜ್ಯದಲ್ಲೇ ಈ ರೀತಿ ಸಾಧನೆ ಮಾಡಿದ ಏಕೈಕ ಜಿಲ್ಲೆ ಚಿಕ್ಕಮಗಳೂರು ಎಂಬುದು ಹೆಮ್ಮೆ ಎಂದರು.
₹೮೯.೧೭ ಕೋಟಿ ಆರ್ಥಿಕ ಪ್ರಗತಿ:ಕಳೆದ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಹಾಗೂ ಸಂಬಂಧಿತ ಉದ್ಯೋಗ ಯೋಜನೆಗಳಡಿ ₹೧೮.೯೫ ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.೯೯.೭೭ರಷ್ಟು ಸಾಧನೆ ಮಾಡಲಾಗಿದೆ. ₹೮೯.೧೭ ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ೨೧,೪೩೫ ಕಾಮಗಾರಿಗಳಿಗೆ ಅನುಮೋದಿಸಲಾಗಿದೆ ಎಂದರು.ಅಂಬೇಡ್ಕರ್ ಅಧ್ಯಯನ ಸಂಸ್ಥೆ, ಬುದ್ಧ ವಿಹಾರ:
ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ಯಲ್ಲಿ ಪರಿಶಿಷ್ಟ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಚಟುವಟಿಕೆ ಉತ್ತೇಜಿಸಲು ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹಾಗೂ ಬುದ್ಧ ವಿಹಾರ ಸ್ಥಾಪನೆ ಕ್ರಮ ವಹಿಸಲಾಗುವುದು ಎಂದು ಘೋಷಿಸಿದರು.ಆರೋಗ್ಯ- ಮೂಲಸೌಕರ್ಯಕ್ಕೆ ಆದ್ಯತೆ: ಶೃಂಗೇರಿ ತಾಲೂಕಿಗೆ ₹೩೭.೬೫ ಕೋಟಿ ವೆಚ್ಚದ ೧೦೦ ಹಾಸಿಗೆಗಳ ಆಸ್ಪತ್ರೆ ಮಂಜೂರು. ₹೨೩ ಕೋಟಿ ವೆಚ್ಚದಲ್ಲಿ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸೇತುವೆ ನಿರ್ಮಾಣ. ಶೃಂಗೇರಿ ಶಾರದೆ ಮಠದ ಸಮೀಪ ತುಂಗಾ ನದಿಗೆ ಅಡ್ಡಲಾಗಿ ₹೮೫.೪೦ ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ, ಕೊಪ್ಪ, ಎನ್.ಆರ್. ಪುರ ಮತ್ತು ಶೃಂಗೇರಿ ಪಪಂ ವ್ಯಾಪ್ತಿ ಯಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆಗಳಿಗೆ ₹೧೦೦ ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.ರಸ್ತೆ, ಸೇತುವೆ ಕಾಮಗಾರಿಗಳಿಗೆ ₹೨೩೩ ಕೋಟಿ ಲೊಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಿಗೆ ₹೮೫ ಕೋಟಿ, ಕಾಲುಸಂಕ ಕಾಮಗಾರಿಗಳಿಗೆ ₹೯ ಕೋಟಿ, ಜಿಲ್ಲಾ ಆಡಳಿತ ಸೌಧದ 2ನೇ ಹಂತಕ್ಕೆ ₹೨೬ ಕೋಟಿ, ವಿಪತ್ತು ನಿರ್ವಹಣೆ ೫೪ ಕಾಮಗಾರಿಗಳಿಗೆ ₹೩೦ ಕೋಟಿ, ಸೇತುವೆ ನಿರ್ಮಾಣ, ದುರಸ್ತಿಗೆ ₹೭೬ ಕೋಟಿ,ತರೀಕೆರೆ ನಗರಸಭೆ ನೂತನ ಕಟ್ಟಡಕ್ಕೆ ₹೭.೫ ಕೋಟಿ ಸೇರಿ ಹಲವು ಕಾಮಗಾರಿಗಳಿಗೆ ಅನುಮೋದಿಸಲಾಗಿದೆ ಎಂದು ವಿವರಿಸಿದರು.
ಮಾನವ-ವನ್ಯ ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ೭.೬೪ ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್, ಆನೆ ಹಾವಳಿ ನಿಯಂತ್ರಣಕ್ಕೆ ಕೊಪ್ಪ ವಿಭಾಗಕ್ಕೆ ಆನೆ ಕಾರ್ಯಪಡೆ ರಚಿಸಲಾಗಿದೆ ಎಂದರು.ಕೆರೆ ತುಂಬಿಸಲು ₹403 ಕೋಟಿ ವೆಚ್ಚ
₹403 ಕೋಟಿ ವೆಚ್ಚದಲ್ಲಿ ಕಡೂರು ಕೆರೆ ತುಂಬಿಸುವ ಯೋಜನೆ 3ನೇ ಹಂತದಲ್ಲಿ ಕಡೂರು ತಾಲೂಕಿನ ೧೬ ಕೆರೆ ಹಾಗೂ ಚಿಕ್ಕ ಮಗಳೂರು ವಿಧಾನಸಭಾ ಕ್ಷೇತ್ರದ ೬೯ ಕೆರೆ ತುಂಬಿಸುವ ಯೋಜನೆ ಕೈಗೊಳ್ಳಲಾಗಿದೆ. ಎತ್ತಿನಹೊಳೆ ಯೋಜನೆ ಯಡಿ ಚಿಕ್ಕಮಗಳೂರಿನ ದೇವನೂರು ಮತ್ತು ಬೆಳವಾಡಿ ಕೆರೆ ತುಂಬಿಸಿರುವುದರಿಂದ ಬರಗಾಲದಲ್ಲಿ ಬತ್ತಿ ಹೋಗಿದ್ದ ಕೃಷಿ ಬೋರ್ ವೆಲ್ಗಳಿಗೆ ಮರುಜೀವ ದೊರೆತು ಜನ-ಜಾನುವಾರುಗಳಿಗೆ ನೀರು ಲಭ್ಯವಾಗಲಿದೆ ಎಂದರು.-- ಬಾಕ್ಸ್--ಮುಳ್ಳಯ್ಯನಗಿರಿಗೆ ಅಂತಾರಾಷ್ಟ್ರೀಯ ಮಾದರಿ ರೋಪ್ವೇಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಕೈಮರದವರೆಗೆ ಪಿಪಿಪಿ ಮಾದರಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರೋಪ್ವೇ ನಿರ್ಮಿಸುವ ಯೋಜನೆ ೨೦೨೬-೨೭ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾಗಿದೆ. ಇದಕ್ಕಾಗಿ ಟ್ರಾನ್ಸಾಕ್ಷನ್ ಅಡ್ವೈಸರ್ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.