ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ತಾಲೂಕಿನಲ್ಲಿ ಮೃತಪಟ್ಟ ಸುಮಾರು 59 ರಾಸುಗಳ ಮಾಲೀಕರಿಗೆ ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ 27.70 ಲಕ್ಷ ರು. ಮೌಲ್ಯದ ಚೆಕ್ ನ್ನು ವಿತರಣೆ ಮಾಡಿದರು.ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ನಂದಿನಿ ಸಭಾ ಭವನದಲ್ಲಿ ನಡೆದ ಚೆಕ್ ವಿತರಣಾ ಸಮಾರಂಭದಲ್ಲಿ ಎಲ್ಲಾ 59 ಮಂದಿ ಹೈನುಗಾರರಿಗೆ ಚೆಕ್ ವಿತರಿಸಿದರು. ಈ ವೇಳೆ ಮಾತನಾಡಿದ ಅವರು ತಾಲೂಕಿನಲ್ಲಿ ಸರಾಸರಿ ದಿನವೊಂದಕ್ಕೆ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ತಿಂಗಳಿಗೆ 10 ಕೋಟಿ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ 2 ಲಕ್ಷ ರಾಸುಗಳಿಗೆ ಉಚಿತವಾಗಿ ವಿಮಾ ಮಾಡಿಸಲಾಗುತ್ತಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು. ಜಿಲ್ಲೆಯಲ್ಲಿ ಸುಮಾರು 1350 ಸಂಘಗಳು ಇವೆ. ಬಹುಪಾಲು ಕಟ್ಟಡಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಉಳಿದವುಗಳನ್ನು ಹಂತಹಂತವಾಗಿ ಕಟ್ಟಲು ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದೆ. ತಾಲೂಕಿನ ಗೊಟ್ಟೀಕೆರೆಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಸುಮಾರು 2.25 ಲಕ್ಷ ಅನುದಾನದ ಚೆಕ್ ನ್ನು ಸಿ.ವಿ.ಮಹಲಿಂಗಯ್ಯ ಆಡಳಿತ ಮಂಡಲಿಯ ಸದಸ್ಯರಿಗೆ ನೀಡಿದರು. ಈ ವೇಳೆ ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್, ಸುನಿಲ್ ಸೇರಿದಂತೆ ಹಲವು ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.