ಸಾರಾಂಶ
ಮಸ್ಕಿ: ರಾಜ್ಯ ಸರ್ಕಾರ ಲಂಬಾಣಿ ಜನಾಂಗ ಗೂಳೆ ಹೋಗುತ್ತಿರುವುದನ್ನು ಮನಗಂಡು 15 ಎಕರೆ ಪ್ರದೇಶದಲ್ಲಿ 41 ಕೋಟಿ ರು. ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಹತ್ತಿರದ ಬಯಲು ಜಾಗದಲ್ಲಿ ಸೋಮವಾರ ಸಂತ ಸೇವಾಲಾಲರ 285ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿರುವ ತಾಂಡ, ಹಟ್ಟಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಸರ್ಕಾರ ಗುರುತಿಸಿದೆ. ತಹಸೀಲ್ದಾರರು ಮಸ್ಕಿ ತಾಲೂಕಿನ ತಾಂಡಗಳನ್ನು ಕಂದಾಯ ಗ್ರಾಮಗಳೆಂದು ಪರಿಗಣಿಸಿ ಹಕ್ಕು ಪತ್ರ ವಿತರಿಸುವಂತೆ ಸೂಚನೆ ನೀಡಿದರು. ಲಂಬಾಣಿ ಜನಾಂಗ ಶ್ರಮ ಜೀವಿಗಳು. ಬಹುಕಾಲದವರೆಗೆ ಶಿಕ್ಷಣ, ಸಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಅಲೆಮಾರಿ ಜನಾಂಗವಾಗಿತ್ತು. ಇತ್ತಿಚೆಗೆ ಯುವಕರು ವಿದ್ಯಾವಂತರಾಗುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾವಂತರಾಗಿ ಸಮಾಜದ ಬಂಧುಗಳನ್ನು ಮೇಲೆತ್ತುವವ ಕೆಲಸ ಮಾಡಬೇಕು. ನಮ್ಮ ಕಲೆ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.
ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿದರು. ಶಿರಹಟ್ಟಿಯ ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಅಮರೇಶ ರೈತನಗರ ಕ್ಯಾಂಪ್ ಮಾತನಾಡಿದರು.ಬಾಗಲಕೋಟೆಯ ಕುಮಾರ ಮಹಾರಾಜರು, ವಿಠ್ಠಲ ಮಹಾರಾಜು ಉಪಸ್ಥಿತರಿದ್ದರು. ಭೀಕ್ಷ ನಾಯ್ಕ ಹೈದ್ರಬಾದ ತಂಡದವರಿಂದ ಲಂಬಾಣಿ ಹಾಡುಗಳು ಹಾಗೂ ನೃತ್ಯ ಸಭೀಕರನ್ನು ರಂಜಿಸಿತು.
ಅದ್ದೂರಿ ಮೆರವಣಿಗೆ: ಸಂತ ಸೇವಾಲಾಲರ 285ನೇ ಜಯಂತಿ ಕಾರ್ಯಕ್ರಮದ ಹಿನ್ನೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂತ ಸೇವಾಲಾಲರ ಭಾವಚಿತ್ರದ ಮೆರವಣಿಗೆ ನಡೆಯಿತು.