ಸಾರಾಂಶ
ಮುಳಗುಂದ: ಸಮೀಪದ ಹರ್ತಿ ಗ್ರಾಮದಲ್ಲಿ ಹಿರೇವಡ್ಡಟ್ಟಿ–ಮಣಕವಾಡ ದೇವಮಂದಿರ ಮಹಾಮಠದ ಶ್ರೀಅಭಿನವ ಮೃತ್ಯುಂಜಯ ಸ್ವಾಮಿಗಳಿಂದ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಜ. 2 ರಿಂದ 13ರ ವರೆಗೆ ಪ್ರತಿದಿನ ಸಂಜೆ 6.30ರಿಂದ 8ರ ವರೆಗೆ ಜರುಗುಲಿದೆ.
ಜ. 2 ರಂದು ಬೆಳಗ್ಗೆ 7 ಕ್ಕೆ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಶ್ರೀಬಸವಣ್ಣ ದೇವರಿಗೆ ರುದ್ರಾಭಿಷೇಕ ಪೂಜೆ ನಂತರ ಪ್ರಸಾದ ವಿತರಣೆ ಜರುಗುವದು.ಸಂಜೆ 4ಕ್ಕೆ ಬಸವ ಬುತ್ತಿ ಶ್ರೀ ಬಸವಣ್ಣನವರ ವಚನ ಗ್ರಂಥಗಳ ಮೆರವಣಿಗೆಯು ಶ್ರೀತ್ರಿಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಆರತಿಗಳೊಂದಿಗೆ ಸಂಚರಿಸಿ ಪ್ರವಚನದ ವೇದಿಕೆಗೆ ಆಗಮಿಸುವದು. ಮೆರವಣಿಗೆಯಲ್ಲಿ ಭಜನಾ ಮೇಳ, ಶ್ರೀವೀರಭದ್ರೇಶ್ವರ ಪುರವಂತರ ಗಗ್ಗರಿ ಕೋಲು ಮೇಳ, ಕರಡಿ ಮಜಲು ಮುಂತಾದ ವಾದ್ಯ ತಂಡಗಳು ಪಾಲ್ಗೊಳ್ಳಲಿವೆ.
ಸಂಜೆ 6.30ಕ್ಕೆ ಪ್ರವಚನ ಪ್ರಾರಂಭೋತ್ಸವ ಜರುಗುವದು. ಈ ಕಾರ್ಯಕ್ರಮದಲ್ಲಿ ಅಡ್ನೂರ-ಗದಗ-ರಾಜೂರು ಬ್ರಹನ್ಮಠದ ಶ್ರೀಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು.ಹಿರೇವಡ್ಡಟ್ಟಿ–ಮಣಕವಾಡ ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು ಪ್ರವಚನ ನೀಡುವರು. ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಗಣ್ಯ ಉದ್ಯಮಿ ವಿಜಯಕುಮಾರ ಗಡ್ಡಿ, ಕುರಹಟ್ಟಿಯ ಕೃಷಿ ಉಪಕರಣಗಳ ತಜ್ಞೆ ಡಿ.ಕೆ. ಲಕ್ಕಣ್ಣವರ ಸೇರಿದಂತೆ ಮುಂತಾದವರು ಆಗಮಿಸುವರು.
ಪ್ರವಚನ ಕಾರ್ಯಕ್ರಮದಲ್ಲಿ ಪ್ರತಿದಿನ ಕಲಬುರಗಿಯ ಸಂಗಮೇಶ ಪಾಟೀಲ ಅವರಿಂದ ಸಂಗೀತ ಸೇವೆ ಹಾಗೂ ತೋಟೇಂದ್ರಕುಮಾರ ಕಟ್ಟಿಸಂಗಾವಿ ತಬಲಾ ಸಾಥ್ ನೀಡುವರು.ಈ ಸಂದರ್ಭದಲ್ಲಿ ಗದುಗಿನ ಶ್ರೀರಾಜರಾಜೇಶ್ವರಿ ಕಲಾ ಕುಟೀರ ತಂಡದವರಿಂದ ನೃತ್ಯ ಕಾರ್ಯಕ್ರಮ ಹಾಗೂ ಹರ್ತಿಯ ಮಲ್ಲಿಕಾರ್ಜುನ ಭಜಂತ್ರಿ ಅವರಿಂದ ಶಹನಾಯಿ ವಾದನ ಕಾರ್ಯಕ್ರಮ ಜರುಗಲಿದೆ.
ಜ.3 ರಿಂದ 13ರ ವರೆಗೆ ಹರ್ತಿ, ಕಣವಿ, ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ 7ರ ವರೆಗೆ ಶ್ರೀಗಳ ಪಾದಯಾತ್ರೆ ಜರಗುವದು. ಈ ಪಾದಯಾತ್ರೆಯಲ್ಲಿ ತ್ರಿಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶರಣಬಸವೇಶ್ವರ ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ ಎಂದು ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.