ತಾಲೂಕಿನ ನಾಗಲಮಡಿಕೆ ಶ್ರೀ ಅಂತ್ಯ ಸುಬ್ರಮಣ್ಯಸ್ವಾಮಿ ದೇವಸ್ಥಾನದ ನಿರ್ಮಾಣಕ್ಕೆ 30ಕೋಟಿ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಗುದ್ದಲಿಪೂಜೆ ನೆರೆವೇರಿಸಲಿರುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ನಾಗಲಮಡಿಕೆ ಶ್ರೀ ಅಂತ್ಯ ಸುಬ್ರಮಣ್ಯಸ್ವಾಮಿ ದೇವಸ್ಥಾನದ ನಿರ್ಮಾಣಕ್ಕೆ 30ಕೋಟಿ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಗುದ್ದಲಿಪೂಜೆ ನೆರೆವೇರಿಸಲಿರುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹೇಳಿದರು.

ತಾಲೂಕು ಆಡಳಿತ ವತಿಯಿಂದ ತಾಲೂಕಿನ ನಾಗಲಮಡಿಕೆ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನದಲ್ಲಿ ಸಸಿಗಳಿಗೆ ನೀರೆರೆಯುವ ಮೂಲಕ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಪಾವಗಡ ನಗರಾಭಿವೃದ್ಗಿಗೆ 23ಕೋಟಿ ವಿನಿಯೋಗಿಸಿದ್ದು ಪ್ರಗತಿ ಹಂತದಲ್ಲಿದೆ. ನಾನು ಸುಬ್ರಮಣ್ಯಸ್ವಾಮಿ ಪರಮ ಭಕ್ತನಾಗಿದ್ದು, ದೇವರ ಬಗ್ಗೆ ಹೆಚ್ಚು ಶ್ರದ್ದೆ ಭಕ್ತಿ ಹೊಂದಲಾಗಿದೆ. ಕಷ್ಟಕಾಲದಲ್ಲಿ ಕೈಹಿಡಿದ ಅನೇಕ ಉದಾರಣೆಗಳಿದ್ದು, ಕುಕ್ಕೆ ಹಾಗೂ ಚಿಕ್ಕಬಳ್ಳಾಪುರ ದೇವಸ್ಥಾನಕ್ಕಿಂತ ಭವ್ಯವಾಗಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅಂದಾಜು ವೆಚ್ಚ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನಲೆಯಲ್ಲಿ ಇಲಾಖೆಯ ಸಚಿವರಾಗಿದ್ದ ವೇಳೆ ರಾಮಲಿಂಗರೆಡ್ಡಿ ಅವರು ಮುಜರಾಯಿ ಇಲಾಖೆಯಿಂದ 30ಕೋಟಿ ಬಿಡುಗಡೆ ಮಾಡಿದ್ದು ಸಿಎಂ ಅವರ ಸಮಯಕ್ಕಾಗಿ ಕಾಯುತ್ತಿದ್ದೇವೆ. ಅವರು ಗಡವು ನೀಡಿದ ಕೂಡಲೇ ಅವರಿಂದಲೆ ಹೊಸ ಸೋಲಾರ್‌ ಪಾರ್ಕ್‌ ನಿರ್ಮಾಣ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು. ನನ್ನ ಶಕ್ತಿ ಕುಗ್ಗಿಸಲು ಇಲ್ಲಿ ಕೆಲ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಕಷ್ಟ ನೋಡಿಕೊಂಡು ಬಂದಿದ್ದೇನೆ. ಜನತೆಯ ಪ್ರೀತಿ ವಿಶ್ವಾವವೇ ನನ್ನ ಶಕ್ತಿ. ಇನ್ನೂ ತಾಲೂಕಿನ ಸ್ವಗ್ರಾಮದಲ್ಲಿಯೇ ವಾಸವಿರಲು ತೀರ್ಮಾನಿಸಿದ್ದು ಪ್ರತಿ ವಾರ ಪ್ರಜಾ ಸೇವಾ ಜತೆಗೆ ಹೋಬಳಿ ಹಾಗೂ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಜನ ಸಂಪರ್ಕ ಸಭೆ ನಡೆಸುವುದಾಗಿ ತಿಳಿಸಿದರು.

ಬೆಂಗಳೂರಿನ ಅಪಾರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿದರು. ತಹಸೀಲ್ದಾರ್ ವೈ.ರವಿ,ತಾಪಂ ಇಒ ಮಧುಸೂದನ್, ವೈ ನಾಗೇಂದ್ರರಾವ್‌, ಎ.ಶಂಕರರೆಡ್ಡಿ, ತೆಂಗಿನಕಾಯಿ ರವಿ, ಗ್ರಾಮಾಂತರ ಸಿಪಿಐ ಕೊಟ್ರೇಶ್, ವರಕೇರಪ್ಪ, ನಾಗರಾಜು, ನಾರಾಯಣಪ್ಪ, ಮಾರುತಿ ಪ್ರಸಾದ್‌, ಹನುಮಂತರಾಯಪ್ಪ, ರಂಗಧಾಮಯ್ಯ, ಚಿನ್ನಪ್ಪ, ಮುತ್ಯಾಲಪ್ಪ ಮಂಜುನಾಥ್, ಪುರುಪೋತ್ತಮ, ನಾರಾಯಣ, ಲಕ್ಮೀನರಸಯ್ಯ ಇತರರಿದ್ದರು.