ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಕೆಆರ್ಎಸ್ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದ ಹಠಕ್ಕೆ ಬಿದ್ದಿರುವ ರಾಜ್ಯ ಸರ್ಕಾರ ಕೆಆರ್ಎಸ್ ಗ್ರಾಮ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಗ್ರಾಮ ಪಂಚಾಯ್ತಿ ಗಮನಕ್ಕೆ ಬಾರದಂತೆ ಅವೆಲ್ಲವನ್ನೂ ಕಾವೇರಿ ನೀರಾವರಿ ನಿಗಮದ ಹೆಸರಿಗೆ ಅಕ್ರಮ ಖಾತೆ ಮಾಡಿಸಿಕೊಂಡಿರುವುದು ಕಂಡುಬಂದಿದೆ.
ಆರಂಭದಲ್ಲೇ ಕೆಆರ್ಎಸ್ ಸುತ್ತಲಿನ ರೈತರ ಜಮೀನಿನ ಸ್ವಾಧೀನಕ್ಕೆ ಮುಂದಾದರೆ ಕಾನೂನಾತ್ಮಕ ಅಡಚಣೆಗಳು ಎದುರಾಗಬಹುದೆಂಬುದನ್ನು ಮನಗಂಡು ಗ್ರಾಮ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಯಾರಿಗೂ ಹೇಳದೆ ಕೇಳದೆ ಪಾಂಡವಪುರ ಉಪವಿಭಾಗಾಧಿಕಾರಿಗಳ ಆದೇಶದಂತೆ ಖಾತೆ ಮಾಡಿಕೊಟ್ಟಿದೆ. ಇದುವರೆಗೂ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ವ್ಯಾಪ್ತಿಯಲ್ಲಿ ಸುಮಾರು ೩೦೦ ಎಕರೆ ಪಂಚಾಯ್ತಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಖಾತೆಯಾಗಿರುವುದಾಗಿ ತಿಳಿದುಬಂದಿದೆ.ಕೆಆರ್ಎಸ್ ಗ್ರಾಪಂಗೆ ೩೧.೮.೧೯೭೯ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ಚಿಕ್ಕಯಾರಹಳ್ಳಿ, ಮಂಗಹಳ್ಳಿ, ಹುಲಿಕೆರೆ ವ್ಯಾಪ್ತಿಯ ೮೬೬ ಎಕರೆ ಪ್ರದೇಶವನ್ನು ನೀಡಿತ್ತು. ಅಣೆಕಟ್ಟು ಮತ್ತು ಅಣೆಕಟ್ಟು ಒಳಗಿರುವ ಜಾಗವನ್ನು ಹೊರತುಪಡಿಸಿ ೮೫೬.೩೬ ಎಕರೆ ಪ್ರದೇಶವನ್ನು ಕೆಆರ್ಎಸ್ ಗ್ರಾಪಂಗೆ ಹಸ್ತಾಂತರ ಮಾಡಲಾಗಿತ್ತು. ಇದರಲ್ಲಿ ಹೊಂಗಹಳ್ಳಿಗೆ ಸೇರಿದ ೬೯೩.೧೯ ಎಕರೆ, ಚಿಕ್ಕಯಾರಹಳ್ಳಿಗೆ ಸೇರಿದ ೧೨೬.೨೧ ಎಕರೆ ಮತ್ತು ಹುಲಿಕೆರೆಗೆ ಸೇರಿದ ೩೬.೨೪ ಎಕರೆ ಪ್ರದೇಶ ಸೇರಿತ್ತು.
ಇದರಲ್ಲಿ ಚಿಕ್ಕಯಾರಹಳ್ಳಿ ಸರ್ವೇ ನಂ.೧೪೮ರಲ್ಲಿರುವ ೧೨೬ ಎಕರೆ ಎಕರೆಯಲ್ಲಿ ೭೨ ಎಕರೆ ಹಾಗೂ ಹೊಂಗಹಳ್ಳಿಯ ೨೮ ಎಕರೆ ಪ್ರದೇಶದಲ್ಲಿ ನೂರಾರು ವರ್ಷದ ತೆಂಗಿನ ತೋಟ, ಮಾವು ಹಾಗೂ ವಿವಿಧ ಮಾದರಿಯ ಹಣ್ಣಿನಿಂದ ಕೂಡಿದ ತೋಟ, ಮಾಡೆಲ್ ಎಂಜಿನಿಯರಿಂಗ್ ಸ್ಟೇಷನ್ಗೆ ಸೇರಿದ ೧೦ ಎಕರೆ ಜಾಗ, ಫಿಶರಿ ಪಾಂಡ್ಗೆ ಸೇರಿದ ೩ ಎಕರೆ ಜಾಗವೆಲ್ಲವೂ ಅಕ್ರಮವಾಗಿ ಕಾವೇರಿ ನೀರಾವರಿ ನಿಗಮದ ಹೆಸರಿಗೆ ಖಾತೆ ಮಾಡಿಕೊಳ್ಳಲಾಗಿದೆ.ಕೆಆರ್ಎಸ್ ಗ್ರಾಪಂಗೆ ಯಾವುದೇ ನೋಟಿಸ್ ನೀಡದೆ, ಅಧ್ಯಕ್ಷರು-ಸದಸ್ಯರೊಂದಿಗೆ ಚರ್ಚಿಸದೆ ಏಕಾಏಕಿ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ಯಾವ ಉದ್ದೇಶಕ್ಕೆ, ಯಾವ ಮಾನದಂಡ ಅನುಸರಿಸಿ ಖಾತೆ ಮಾಡಲಾಗಿದೆ ಎಂಬ ಪಂಚಾಯ್ತಿಯವರ ಪ್ರಶ್ನೆಗೆ ಯಾರಿಂದಲೂ ಉತ್ತರ ಮಾತ್ರ ದೊರಕುತ್ತಿಲ್ಲ.
ಅಮ್ಯೂಸ್ಮೆಂಟ್ ಪಾರ್ಕ್ಗೆ ಬೇಕಿರುವ ಒಟ್ಟು ಭೂಮಿ ಎಷ್ಟು ಎಂಬ ಬಗ್ಗೆ ಎಲ್ಲಿಯೂ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ರೈತರ ಭೂಮಿಯ ಸ್ವಾಧೀನಕ್ಕೆ ಬರುವ ಮುನ್ನ ಯೋಜನೆಗೆ ಪಂಚಾಯ್ತಿಯಿಂದ ಸಿಗಬಹುದಾದ ಭೂಮಿ ಎಷ್ಟು ಎಂಬುದನ್ನು ಗುರುತಿಸಿಕೊಂಡು ನಂತರ ರೈತರ ಭೂಮಿಯ ಸ್ವಾಧೀನಕ್ಕೆ ಬರುವುದಕ್ಕೆ ನಿರ್ಧರಿಸಿರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ.ಯೋಜನೆ ನಿರ್ಮಾಣವಾಗುವ ನಕ್ಷೆಯ ಪ್ರಕಾರ ಯಾವ ಭಾಗದಲ್ಲಿ ಕೃಷಿ ಜಮೀನಿದೆಯೋ ಅದನ್ನು ಭೂ ಪರಿವರ್ತನೆ ಮಾಡಿಕೊಡುತ್ತಿಲ್ಲ. ಇದು ಕೂಡ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಭೂಮಿ ಅಮ್ಯೂಸ್ಮೆಂಟ್ ಪಾರ್ಕ್ಗೆ ಒಳಪಟ್ಟಿರಬಹುದೆಂಬ ಭಯದಲ್ಲೇ ದಿನದೂಡುತ್ತಿದ್ದಾರೆ.
೨೬೬೩ ಕೋಟಿ ರು. ವೆಚ್ಚದ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಮೂರು ಬಾರಿ ಟೆಂಡರ್ ಕರೆದಿದ್ದು, ಈ ಸಂಬಂಧ ರೈತ ಸಂಘಟನೆಗಳು ಯೋಜನೆಯನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿವೆ. ನ್ಯಾಯಾಲಯ ತಡೆಯಾಜ್ಞೆ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇದೀಗ ಮೃದು ಧೋರಣೆ ಅನುಸರಿಸುತ್ತಾ ಈಗ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳ ಸಭೆ ಕರೆಯುವುದು, ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದೆ. ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರನ್ನು ಕಳುಹಿಸಿ ಯೋಜನೆಯ ವಿವರಣೆ ನೀಡುವ ಕ್ರಮವನ್ನು ಸರ್ಕಾರ ಅನುಸರಿಸುತ್ತಿದೆ. ಈ ಮೊದಲು ಯೋಜನೆ ವಿಚಾರದಲ್ಲಿ ತನಗಿಷ್ಟಬಂದ ರೀತಿಯಲ್ಲಿ ವರ್ತಿಸುತ್ತಾ ಮುನ್ನುಗ್ಗುತ್ತಿದ್ದ ಸರ್ಕಾರಕ್ಕೆ ನ್ಯಾಯಾಲಯ ಮೂಗುದಾರ ಹಾಕಿದೆ.ಕಾವೇರಿ ಆರತಿ ಕಾಮಗಾರಿಗೆ ವೇಗ
ಮುಂದಿನ ದಸರಾ ಸಮಯಕ್ಕೆ ಕಾವೇರಿ ಆರತಿಗೆ ಚಾಲನೆ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಕಾಮಗಾರಿಗೆ ವೇಗ ನೀಡಿದೆ. ಬೃಂದಾವನದೊಳಗೆ ಕಾಮಗಾರಿಯನ್ನು ಬಿರುಸಿನಿಂದ ನಡೆಸಲಾಗುತ್ತಿದೆ. ಕಾವೇರಿ ಆರತಿಗೆ ಈಗಷ್ಟೇ ಟೆಂಡರ್ ಕರೆದಿದ್ದು, ಇನ್ನೂ ಗುತ್ತಿಗೆ ಒಪ್ಪಂದವಾಗದಿದ್ದರೂ ಅದಾಗಲೇ ಕಾವೇರಿ ಆರತಿ ನಡೆಯುವ ಜಾಗವನ್ನು ಮಣ್ಣು ಹಾಕಿ ಸಮತಟ್ಟುಗೊಳಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಬೃಂದಾವನದ ಒಳಗೇ ನೂರಾರು ಲೋಡ್ ಮಣ್ಣನ್ನು ತರಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು ೧೦ ಸಾವಿರ ಜನರು ಕುಳಿತುಕೊಂಡು ವೀಕ್ಷಣೆಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲಾಗುತ್ತಿದೆ. ಈ ಯೋಜನೆಗೆ ೧೦೦ ಕೋಟಿ ರು. ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.ಕೆಆರ್ಎಸ್ ಅಣೆಕಟ್ಟು ವೀಕ್ಷಣೆಗೆ ಭದ್ರತೆ ದೃಷ್ಟಿಯಿಂದ ಜನರನ್ನು ಸನಿಹಕ್ಕೆ ಹೋಗುವುದಕ್ಕೆ ಬಿಡದ ಅಧಿಕಾರಿಗಳು ಅಣೆಕಟ್ಟು ಬುಡದಲ್ಲೇ ಕಾಮಗಾರಿಯನ್ನು ನಡೆಸುತ್ತಿರುವುದು ವಿಪರ್ಯಾಸ, ದುರಂತದ ಸಂಗತಿಯಾಗಿದೆ.ಕೆಆರ್ಎಸ್ ಪಂಚಾಯ್ತಿಗೆ ಸೇರಿದ ಆಸ್ತಿಗಳನ್ನು ಒಂದೇ ದಿನದಲ್ಲಿ ಯಾರ ಗಮನಕ್ಕೂ ತರದೆ ಕಾವೇರಿ ನೀರಾವರಿ ನಿಗಮದ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಯಾವ ಮಾನದಂಡ ಅನುಸರಿಸಿ ಖಾತೆ ಮಾಡಲಾಗಿದೆ ಎಂದು ಪ್ರಶ್ನಿಸಿದರೆ ಉಪವಿಭಾಗಾಧಿಕಾರಿ ಆದೇಶದಂತೆ ಖಾತೆ ಮಾಡಿರುವುದಾಗಿ ಹೇಳುತ್ತಿದ್ದಾರೆ.
- ಮಂಜುನಾಥ, ಗ್ರಾಪಂ ಸದಸ್ಯ, ಕೆಆರ್ಎಸ್